Sunday 8 September 2013

ಗಣೇಶ ಹಬ್ಬದಂದು ನನಗೆ ನೆನಪಾಗುವುದು ಬಾಲ್ಯದ ಒಂದು ಘಟನೆ;

ದಿನವೆಲ್ಲಾ ಸುತ್ತಿ "ಆಂಟಿ ನಿಮ್ಮನೇಲಿ ಗಣೇಶ ಕೂರಿಸಿದ್ದೀರಾ?" ಅಂತ ಕೇಳಿ ಗಣೇಶನನ್ನು ನೋಡಿ ಅಕ್ಷತೆ ಹಾಕಿ ಜೈಕಾರ ಹಾಕಿ, ಸಂಜೆಯ ಹೊತ್ತಿಗೆ ನೂರ ಒಂದು ಗಣೇಶನ ದರ್ಶನ ಮಾಡಿನೇ ಮನೆಗೆ ಬರುತ್ತಿದ್ದದ್ದು. ಏನ್ ಖುಷಿನೋ ಆಗೆಲ್ಲಾ. ನಾನಿನ್ನೂ 4,5ನೇ ತರಗತಿಯಷ್ಟೇ. ನನ್ನ ಜೊತೆಗೆ ನನ್ನ ಸಹಪಾಠಿ ಅನಿತಾ ಮತ್ತು ನನ್ನ ಗೆಳೆಯ ಶಾಧಿಕ್. ಶಾಧಿಕ್ನನ್ನು ನಾವೆಲ್ಲಾ ಕರೆಯುತ್ತಿದ್ದದ್ದು ಸಾದಿಕ್. ಇಡೀ ಎರಿಯಾನೇ ಅವನದು ಒಳ್ಳೆ ಹುಡುಗ. ನನ್ನ ತುಂಬಾ ವರ್ಷದ ಗೆಳೆಯ. ಒಮ್ಮೆ ಹೀಗೆ ಆಟವಾಡುತ್ತಾ ಪಕ್ಕದ ಗಲ್ಲಿಗೆ ಹೋದಾಗ ಅಲ್ಲೋಂದು ಮರದ ಬುಡದಲ್ಲಿ ಭಿನ್ನವಾಗಿದ್ದ ಗಣೇಶ ನಮ್ಮಿಬ್ಬರ ಕಣ್ಣಿಗೆ ಬಿದ್ದು ನಮಗೋ ಯೋಚನೆ ಮತ್ತು ಅನುಕಂಪ, "ಪಾಪ ಗಣೇಶನನ್ನು ಈ ರೀತಿ ರೋಡಲ್ಲಿ ಇಟ್ಟಿದ್ದಾರೆ" ಅಂತ. ಭಿನ್ನ-ಗಿನ್ನ ಅವೆಲ್ಲಾ ಆಗ ಗೊತ್ತಿರಲಿಲ್ಲ. ಸರಿ ಒಟ್ಟಿನಲ್ಲಿ ಒಂದು ಬಾವಿಗೆ ಹಾಕಬೇಕು ಅಷ್ಟೇ ಗೊತ್ತಿದ್ದದ್ದು. ಸರಿ ಹೊರಟೇ ಬಿಟ್ವಿ ಬಾವಿ ಹುಡುಕುತ್ತ. ನಗರ ಪ್ರದೇಶಗಳಲ್ಲಿ ಬಾವಿಗಳು ವಿರಳ. ಕೊನೆಗೂ ಒಂದು ಬಾವಿ ಸಿಕ್ಕಿತು. ಅಷ್ಟರಲ್ಲಾಗಲೇ ಕತ್ತಲಾಗುತ್ತಾ ಬಂದಿತ್ತು. ಆ ಬಾವಿಗೋ ಅಡೆ-ತಡೆಗಳೆನೂ ಇರಲಿಲ್ಲ ನೆಲದ ಮಟ್ಟಕ್ಕಿತ್ತು. ನಾವು ಜೈಕಾರ ಹಾಕಿ ಗಣೇಶನನ್ನು ಬಾವಿ ಸೇಫಾಗಿ ಹಾಕಿದೆವು. ಮನಸ್ಸು ನಿರಾಳ. ಕತ್ತಲಾದ್ದರಿಂದ ಮನೆಗಳಿಗೆ ಓಡಿದೆವು. ಮಾಡಿದ ಸಾಧನೆ ತಿಳಿದರೆ ಖಂಡಿತ ನಮ್ಮಪ್ಪ ಬೈಯ್ಯುವವರು ಎಂದು ಗೊತ್ತು. ಆದರೂ ಮನಸ್ಸು ತಡಿಯದೇ ಸುಮ್ಮನಿದ್ದ ಅಪ್ಪನಿಗೆ, "ಅಣ್ಣಾ, ನೀನೇನು ಬೈಯಲ್ಲಾ ಅಂದ್ರೆ ಒಂದು ಹೇಳ್ತೀನಿ" ಅಂದೆ. "ಏನೂ? ಹೇಳು" ಅಂದರು. ಎಲ್ಲಾ ಕತೆ ಹೇಳಿದೆ, ಸುಮ್ಮನಿದ್ದರು. "ಸರಿ ಎಲ್ಲಿದೆ ಬಾವಿ ತೋರಿಸುತ್ತೀಯಾ?" ಎಂದು ಕೇಳಿದರು. ನನಗೋ ಖುಷಿ ಬೈಯ್ಯಲಿಲ್ಲ ಅಂತ. ಕರೆದುಕೊಂಡು ಹೋಗಿ ತೋರಿಸಿದೆ. ನೋಡಿ ಸುತ್ತಾ ಮುತ್ತಾ ವಿಚಾರಿಸಿ. ಸುಮ್ಮನೆ ಮನೆಗೆ ಬಂದು ತರಾಟೆಗೆ ತೆಗೆದುಕೊಂಡರು. ಅಲ್ಲಿನ ನೆಲ ಮಟ್ಟದ ಬಾವಿ ಅವರಲ್ಲಿ ಗಾಬರಿ ತರಿಸಿತ್ತು, ಚೆನ್ನಾಗಿ ಬೈದರು. ಸಾದಿಕ್ ಜೊತೆ ಆಟವಾಡಬಾರದೆಂದು ತಾಕೀತು ಮಾಡಿದ್ದರು. ಸರಿ ಅಂದಿದ್ದೆ ಅಷ್ಟೇ. ಮರುದಿನ ರಸ್ತೆಯಲ್ಲಿ ಆಟವಾಡುವಾಗ ಅಪ್ಪ ಎದುರಾಗಲೇ ನೆನಪಾದದ್ದು ಸಾದಿಕ್ ಜೊತೆ ಆಟ ಆಡಲ್ಲ ಅಂತ ನೆನ್ನೆ ಹೇಳಿದ್ದು.... :-)
ನಂತರ ಅಪ್ಪ ಕಂಡಾಗ ಮಾತ್ರ ದೂರ ದೂರ ಓಡಿಹೋಗಿ ನಿಲ್ಲುತ್ತಿದ್ದೆವು.... ಕೆಲದಿನಗಳಲ್ಲಿ ನಮ್ಮೊಂದಿಗೆ ನಮ್ಮಪ್ಪನೂ ಮರೆತರು. ಈಗ ಅವರ ಮನೆ ಬೇರೆಲ್ಲೋ ಆಗಾಗ ಮನೆ ಹತ್ರ ಬರುತ್ತಾನೆ ಅಕ್ಕಪಕ್ಕದವರನ್ನು ಮಾತಾಡಿಸಿ ನಾನಿದ್ದರೆ ಮಾತ್ರ(ಅಪ್ಪನ ಭಯ) ನಮ್ಮನೆಗೂ ಬಂದು ಮಾತಾನಾಡಿಸಿ ಹೋಗುತ್ತಾನೆ. ಅವನ ಪೂರ್ಣ ಹೆಸರು ಈಗಲೂ ಗೊತ್ತಿಲ್ಲ "ಸಾದಿಕ್" ಅಷ್ಟೇ.. ಬಾಲ್ಯದ ನನ್ನ ಅಣ್ಣ!! :-)  

-ದಿವ್ಯ ಆಂಜನಪ್ಪ
08/09/2013

No comments:

Post a Comment