Sunday 23 October 2022

ಹನಿ

ಬಿರುಗಾಳಿಯಂತ ಬದುಕಲಿ 
ತೂರಿ ಹೋಗಿ, ಜಾರಿ ಬಾಗಿ, 
ಮೇಲೇರುವ ಜೀವ 
ಗಾಳಿಪಟದಷ್ಟೆ ಹಗುರ!

Thursday 29 September 2022

ಹನಿ

ಸದ್ದಿಲ್ಲದೆ ಹರಿವ 
ಅಂತರಗಂಗೆಯಾಗಲು
ಬಯಸುವುದು ಮನವು
ಆದರೆ..
ಸದಾ...
ಗಡಿ ದಾಟಿ
ಸಿಡಿದೆದ್ದು ಧುಮುಕೊ
ಧಾರೆಯಾಗುವ ಬದುಕು
ಎಂದಿಗೂ ನನಗೆ ಸೋಜಿಗ!

Monday 12 September 2022

ಕವನ

ದೋಣಿ

 ದಡ ಮುಟ್ಟದ
ದೋಣಿಯೊಂದು
ತಿರುಗಿಮುರುಗಿ
ಗಾಳಿ ತೂರಿದಲ್ಲಿಗೆ
ನುಗ್ಗಿದೆ
ಅದು ಹಿಂದೆಕ್ಕೊ
ಮುಂದಕ್ಕೋ?
ವ್ಯತ್ಯಾಸವಿಲ್ಲ

ಅಷ್ಟು ಹೊತ್ತು
ನಿಗದಿಯಾದಂತೆ
ತೇಲುತ ನಿಂತಿದೆ
ಆ ವಲಯದಲ್ಲಿ...

ಮುಳುಗದ ದೋಣಿ
ತೇಲಿ ತೇಲಿ ಹಗುರಾಗಿದೆ
ಮೀನುಗಳ ಹೊತ್ತು
ತರದ ದೋಣಿಯ
ನಿರೀಕ್ಷೆ ಇಲ್ಲ ದಡಕ್ಕೆ

ನೀರಿಗೆ ಮೀನಾಗಿ
ಮೀನಿಗೆ ಬಲೆಯಾಗಿ
ದೋಣಿ ತೇಲಿದೆ ನೀಲಿಯಾಗಿ
ನೀರ ಮೇಲೆ ನಿಂತಷ್ಟು ಹೊತ್ತು
ನಂಟು ನೀರಿಗೂ ದೋಣಿಗೂ...

ಗಾಳಿಯ ರಭಸಕ್ಕೊ
ಮೀನು ತುಂಬಿದ ಭಾರಕ್ಕೊ
ವಾಲಿ ದಿಕ್ಕು ತಿರುಗಿ
ಈ ತೀರಕೋ ಆ ತೀರಕ್ಕೋ
ಕಳೆದು ಹೋಗೋ ದೋಣಿ
ಹಿಂದೆ ದಡದಲ್ಲೇ ತಾಳ್ಮೆ ಹೊದ್ದು ನಿಂತಿತ್ತು....

ಕವನ

 ಭಾವಗಳ ಮೂಟೆ….

ಭಾವಗಳ ಮೂಟೆ
ಕಾಪಿಟ್ಟು ಕಟ್ಟಿಟ್ಟು
ಹಬೆಯಾಗಿದೆ ಹೃದಯ!

ಹಾಡಿ ನಲಿದ ಒಲವು
ಎಂದೊ ಬೂದಿಯಾಗಿ
ನಿಂತು ಬೇರೂರುವ ಛಲಕೆ
ಮನಸ್ಸು ಕಲ್ಲು!

ಕಟ್ಟಿಟ್ಟ ಕನಸು
ಗಂಟಿಕ್ಕಿದ ಗೀತೆ
ಹನಿದು ಹನಿದು
ತೊರೆಯಂತೆ!

ಹರಿದು ಹಗುರಾಗುವ
ತಾಣವಿಲ್ಲ; ಬರಿದೆ ಬೊಗಳೆ
ನುರಿದು ಹಸನಾಗುವ
ನೂಲು ಅಲ್ಲವೇ ಅಲ್ಲ; ಕಗ್ಗಂಟು!

ಮತ್ತೊಮ್ಮೆ ಹೀಗೆಯೆ
ಪ್ರಾರಂಭಿಸಲಿ ಹೊಸತು
ಹಳೆಯ ನಂಬಿಕೆಯ ಹೊಸಲಲಿ
ಕಾಮನಬಿಲ್ಲ ರಂಗು ರಂಗೊಲಿ!

ದಿವ್ಯ ಆಂಜನಪ್ಪ

ಕವನ

ಖಾಲಿ

ಖಾಲಿ ಬಿಂದಿಗೆಯೊಳಗೆ
ಭಾರಿ ಗಲಿಬಿಲಿ
ತುಂಬಿಕೊಳ್ಳದೆ ಉಳಿದ
ಪದಗಳಿಗೂ ಬೇಸರ
ಸುಯ್ ಗುಟ್ಟುವ ಗಾಳಿ
ಗುಯ್ ಗುಟ್ಟುವ ಬಿಂದಿಗೆ
ತುಂಬದ ಭಾವಗಳು
ಸದ್ದಾಗಿಯೇ ನಿಃಶಬ್ದ...!

Thursday 7 July 2022

ಕವಿತೆ

ಮಲ್ಲಿಗೆ

ಮಲ್ಲಿಗೆ ಮೊಗ್ಗು 
ಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತು
ತಾಕೀತು ಮಾಡಿ
ಬೇಲಿ ಮೈಮೇಲೆಳೆದಿದ್ದಳು

ಮಲ್ಲಿಗೆಯ ಕಂಪಿಗೆ 
ನಾಲ್ಕು ಮನೆ ದೂರದ ಸಂಪಿಗೆ
ಅಸೂಯೆ ಹೊದ್ದು ಮೊಲ್ಲೆಯ ಕೊಂಡಾಡಿದಳು
ನಾಲಿಗೆಗೆ ಮುಳ್ಳು ಚುಚ್ಚಿಕೊಂಡು!

ಹಿತ್ತಲ ದಾರಿಯಲ್ಲಿ ಬಂದ ಬಾಲೆ
ಮುಂಬಾಗಿಲಿ ಮಲ್ಲಿಗೆಯ ಕಂಪು 
ಬಲು ಹಿತವೆಂದು ಹೇಳಿದಾಗ 
ತುಸು ಸಮಾಧಾನ

ಬೇಲಿಯೊಳಗೆ ಕಮರಿ ಹೋಗುತ್ತಿದ್ದವಳ
ಆಗೊಮ್ಮೆ ಈಗೊಮ್ಮೆ ಹೂ ಮಾಲೆ ಮಾಡಿ
ದೇವರ ತೆಲೆಗೆ ; ಹೆಣ್ಮಕ್ಕಳ ಮುಡಿಗೆ
ಏರಿಸಿ ನಲಿವ ಅಜ್ಜಿ ಮಲ್ಲಿಗೆಗೆ ಆಪ್ತಳು

ಅವಳೊಮ್ಮೆ ಗೊತ್ತಿದ್ದೂ 
ಏಕೋ ಏನೋ ಚುಚ್ಚಾಡುತ್ತಾಳೆ,
"ತಾನು ಹೊರಗೆ ಹೋಗಲೆಂದೇ ಕಾದಿದ್ದಾಳೆ ಮಲ್ಲಿಗೆ
ಬೇಲಿ ಬೇಧಿಸಿ ಕಂಪಿನೊಂದಿಗೆ ಹಾರಿ ಹೋಗಲೆಂದು"...

ಆಪಾದನೆ ಮಲ್ಲಿಗೆಗೆ
ಇದ್ದದ್ದೇ...
ಹೆಚ್ಚು ಅವಕಾಶಗಳ ಹೊಂದಿದವರು
ಅವಕಾಶಗಳಿಗೆ ಕುರುಡಾದವರನ್ನು
ಹೀಗೆಯೇ ಪ್ರಚೋದಿಸುತ್ತಾರೆ...

ಎಂದೋ ಒಮ್ಮೆ ಬರ ಬಿಸಿಲಿಗೆ ಬಾಡಿ
ಬಿರು ಮಳೆಗೆ ಬೆದರಿ ಬಿದ್ದು 
ಮಣ್ಣಾಗುವ ಮಲ್ಲಿಗೆ
ಮತ್ತೆ ನಗುವಳು ಮೊಗ್ಗೊಡೆದು ಮೆಲ್ಲಗೆ

ಧನ್ಯವಾದಗಳೊಂದಿಗೆ
 ದಿವ್ಯ ಆಂಜನಪ್ಪ

Sunday 4 October 2020

ಪದ್ಯ: ಆಶಯ

ಹೊಸದಾಗಿ ಏನೋ ಶುರು ಮಾಡಬಹುದು
ಎನಿಸಿದಾಗ ತುಸು ಸಾಂತ್ವಾನ 
ಸಿಕ್ಕಂತಾಗುತ್ತದೆ. 
ಆದರೆ ಹೊಸದಾಗಿ
ಎಲ್ಲವನ್ನೂ ಮತ್ತೆ ಮತ್ತೆ ಶುರು
ಮಾಡುವಂತಿಲ್ಲವಲ್ಲ...?
ಅದಕ್ಕೆ 'ಶುರು ಮಾಡೋಣ' 
ಅಂತಷ್ಟೇ ಅಂದುಕೊಳ್ಳುತ್ತೇನೆ
ಆದರೆ ಯಾವುದೂ ಶುರುವಾಗುವುದೇ ಇಲ್ಲ

 ಹಳೆಯ ಚಿತ್ರಗಳೊಮ್ಮೆ
ತೆರೆದು ನೋಡುತ್ತೇನೆ
ಕೆಲವು ರಂಚಿತ ಬಹಳಷ್ಟು ವಿಷಾದ
ಈಗಿನ ಚಿತ್ರಕ್ಕೆ ಬಂದರೆ
ಬಹಳಷ್ಟು ಬಣ್ಣ ತುಂಬುವ ಅವಕಾಶ

ತುಂಬಿದಷ್ಟು ಎಲ್ಲೋ ಹೇಗೋ ಸೋರಿ ಹೋಗುತ್ತಿರುವ 
ಕಪಟತನಕ್ಕೆ ಎಲ್ಲಿಲ್ಲದ ದುಗುಡ! 
ಇಷ್ಟಕ್ಕೆ ಹೇಗೆ ನಿಲ್ಲಲಿ..? 
ಹಟಕ್ಕೆ ಬಿದ್ದು ಚಿತ್ರ ಬರೆಯುವ ಪುಸ್ತಕ ಕೊಂಡಿರುವೆ
ಜೀವನ ಕೊಟ್ಟ ಕುಂಚವ ಹಿಡಿದು
ಸೋರಿದಲ್ಲೆಲ್ಲಾ ಮತ್ತೆ ಬಣ್ಣ ತುಂಬುತ್ತಲಿರುವೆ

ಸೊಗಸೆನಿಸದಿದ್ದರೂ  ಕೆಲಸಗಳಾಗಿವೆ..😊... 

ಮತ್ತೆ ಶುರು ಮಾಡುತ್ತೇನೆ
ಬಣ್ಣ ಬಳಿಯುವ ಕೆಲಸವ
ಸೊಗಸಿಗಲ್ಲ... 
ಕೂತು ಸೋಮಾರಿಯಾಗಬಾರದಲ್ಲ
ಈ ಹಳೆಯ ಮನಸ್ಸು!

03/10/2020

Friday 5 June 2020

ಪದ್ಯ: ಮಳೆ

ಹ್ಞೂ...
ಮತ್ತೆ ಮಳೆಯ ಗಾಳಿ
ಈ ಸಂಜೆಗೆ,
ಎಲ್ಲೊ ಕಳೆದು ಹೋದ
ಹನಿಗಳನ್ನು ಬೊಗಸೆಯಲ್ಲಿ
ಸೆರೆ ಹಿಡಿವ ಆಸೆ..
ಹೇಳು ಕರಗುವೆಯಾ?

ಕಲ್ಲು ಮೋಡವೇ
ಅದು ಹೇಗೆ ಉದರಿಬಿಡುವೆ
ತಂಗಾಳಿ ಸೋಕಿದೊಡನೆ?!
ಒಂದಿನಿತು ನಿಲ್ಲಬಾರದೆ
ಈ ಎಲೆ ಅಲುಗಾಡದ ಊರಿನಲಿ
ನಿನ್ನ ಸೆರೆ ಹಿಡಿವ ಆಸೆ
ಹೇಳು ಬಂದು ನಿಲ್ಲುವೆಯಾ?

ಹ್ಞೂ, ಮತ್ತೆ ಮಳೆಯ ವಾಸನೆ
ಈ ಸಂಜೆಗೆ
ಎಲ್ಲೋ ಕಳೆದು ಹೋದ
ನನ್ನನೇ ನಾ ಕೈಹಿಡಿಯಬೇಕಿದೆ
ಒಂದೆರೆಡು ಮಳೆಹನಿಗಳ ತಂಪನೆಗೆ
ಎಚ್ಚರಿಸಿಕೊಳ್ಳಬೇಕಿದೆ
ಈ ಸಂಜೆಗೆ ಇದುವೇ ನನ್ನಾಸೆ
ಹೇಳು ಮಳೆಯೇ
ಮಡಿಲಾಗುವೆಯಾ?!

‌june 5, 2018

Wednesday 26 September 2018

ಬಿಳಿಯ ಹಾಳೆ

ಬಿಳಿಯ ಹಾಳೆಯ ಮೇಲೆ
ಕಪ್ಪು ಗೆರೆಯೊಂದು
ಮೂಡಬಾರದಿತ್ತು
ಎಳೆದಿದ್ದೇ ಆದಲ್ಲಿ
ಮುಂದುವರೆಸಿ ಚಿತ್ರವೊಂದ
ಬಿಡಿಸಲೇ ಬೇಕು..

ಪೂರ್ಣಗೊಂಡ ಚಿತ್ರಕ್ಕೆ
ಕಲಸಿದ ಬಣ್ಣ
ಬೀಳಬಾರದಿತ್ತು
ಎರಚಿದ್ದೇ ಆದಲ್ಲಿ
ತನ್ನ ಮಡಿಕೆಗೆ ಅಚ್ಚು ಹಾಕಿ
ಹೊಸ ಕಲೆಯ ಉಸಿರಾಡಲೇ ಬೇಕು..

ಬಿಡಿ ಹಾಳೆಗಳು
ಚದುರಬಾರದಿತ್ತು ಗಾಳಿಗೆ
ಹರಡಿ ಹಂಚಿದ್ದೇ ಆದಲ್ಲಿ
ಬಿಡಿ ಭಿತ್ತಿಚಿತ್ರಗಳಲ್ಲಿ
'ಚಿತ್ರವೊಂದು ಮೂಡಿದ ಕತೆ'
ರಾರಾಜಿಸುತ್ತಿರಬೇಕು..

12/08/2018

Tuesday 5 January 2016

ಸತ್ಯಗಳೇ ಇಷ್ಟ
ಕಹಿಯೇ ಆದರೂ

ಎಷ್ಟೋ ಜನರು
ಸಕ್ಕರೆಯನ್ನೇ ಅರಗಿಸಿಕೊಳ್ಳಲಾರದೆ
ಕಹಿಯನ್ನೇ ಸಿಹಿಯೆಂದು 
ಸವಿಯುತ್ತಿರುತ್ತಾರೆ
ಆರೋಗ್ಯಕ್ಕೆ ಒಳ್ಳೆಯದೆಂದು..

ಹಾಗಿದ್ದಾಗ ನನ್ನದೇನು..?
ಈಗಿನಿಂದಲೇ ಹಾಗಲ ಕಹಿ
ರೂಢಿಯಾದರೆ..?!

05/01/2016
ಅತೀ ಪ್ರೀತಿಯಿಂದ
ಕೊಟ್ಟಷ್ಟು ಮುತ್ತುಗಳಿಗೆ
ಕಾರಣಗಳು ಹುಟ್ಟಿದಾಗ
ಒಲುಮೆಯ ಕಂದನತ್ತು ಸೊರಗಿದ
ಕಂಗಾಲಾದ ಮುತ್ತಿನೊಡತಿ
ತೊಟ್ಟಿಲ ತೂಗುವುದ ನಿಲ್ಲಿಸಿ
ಕಾರಣಗಳ ಹುಟ್ಟಿನ ಕಾರಣಗಳ ಜಾಡ ಹಿಡಿದು
ಎಲ್ಲಿಗೋ ಹೊರಟಳು..
ಮಗುವಿನ ಅಳುವಿಗೆ ಕಿವಿ ಕೈ ಇಲ್ಲ...


********


ದಿಕ್ಕಿಲ್ಲದೆ ಸಾಗುವ ಮಾರ್ಗ
ದಿಕ್ಕಿಲ್ಲದೆ ಸಾಯುವ ಕನಸು
ಮುಟ್ಟೀತೇನೋ ಮುಟ್ಟಿಲ್ಲದೂರುಗಳ
ತಟ್ಟೀತ್ತೇನೋ ದಿಕ್ಕಿಲ್ಲದ ದ್ವೀಪಗಳ..

*******

ಕಾತರಿಸುವವರ ಕೈಗೆ ಸಿಗದೆ
ತಪ್ಪಿಸಿಕೊಂಡ ಚಿಟ್ಟೆಯೇ
ಗೆಲುವೆಂದುಕೊಂಡ ನಿನ್ನ ಸೋಲು
ಹೂವೇ ಚಿಮ್ಮಿತು ನಿನ್ನ ಕಾಲು ಕಿತ್ತು
ರೆಕ್ಕೆಯಲಿದ್ದಷ್ಟು ಹೊತ್ತು ತ್ರಾಣ
ನಿನ್ನ ಹಾರಾಟ ಆಯಸ್ಸು 
ಮಾಸದ ಸೌಂದರ್ಯವಿಟ್ಟುಕ್ಕೊಂಡು 
ಸುಂದರವಾಗಿ ಸಂಗಾತಿಯಿಲ್ಲದೆ ಸಾಯುವ
ನಿನ್ನ ಒಂಟಿತನಕೆ ಸೆಡವು ಎನ್ನಲೇ ಗತ್ತೋ ಇಲ್ಲ ಮುಗ್ಧತೆಯೋ... 
ಅಂತು ನಿನ್ನ ನಂಬಿಕೆಗೆ ಸಾವಾಯ್ತು... 
ನಿಷ್ಟೆಗಳಿಗೆ ನಷ್ಟದ ಹೂರಣವಾಗಿ...

31/12/2015

ಪದ್ಯ

ಒಗಟು

ಒಗಟೊಂದನು ಕಟ್ಟಿ ಹೇಳಬೇಕೆಂದಿತ್ತು
ಗಟ್ಟಿ ಕಾಳುಗಳಿರಲಿಲ್ಲ
ಆಯ್ದು ಹೊತ್ತ ಹೊತ್ತುಗಳಲ್ಲಿ
ಒಗಟಾದ ಘಳಿಗೆಗಳೇ ಎಲ್ಲಾ
ಬಿಡಿಸಿಕೊಂಡು ಒಗಟು
ಹೊಂದಿಕೊಳ್ಳಬೇಕಿತ್ತು ಮನಸ್ಸು
ನಾ ಒಗ್ಗಲಿಲ್ಲ
ಮನಕ್ಕೆಲ್ಲಾ ಒಗಟೇ ಆಯ್ತಲ್ಲ

ಬೀಜವೊಂದ ಕಂಡು
ಭವಿಷ್ಯ ಹೇಳಬೇಕಿತ್ತು
ಮರದ ಆಕಾರ, ಗಾತ್ರ, ಆಯಸ್ಸು
ಮತ್ತು ಒನಪು-ವೈಯ್ಯಾರ
ನಾ ಕಾಲ ಙ್ಜಾನಿಯಲ್ಲ
ಎಲ್ಲಾ ತಿಳಿದೇ ನಡೆಯಲಿಲ್ಲ

ಎದೆ ತಟ್ಟಿತೊಂದು ಸಸಿಯ
ಆಸ್ತೆವಹಿಸಿ ಅಂಗಳಕ್ಕಿಟ್ಟೆ
ಬಳ್ಳಿಯಾಯ್ತು ಬದುಕೂ
ಹಬ್ಬಿದಂತೆ ತೆಕ್ಕೆ ಕೊಟ್ಟೆ
ಹರಡಿ ಹಿಡಿದು ಅಸ್ತಿಗೆ ಅಂಟಿದೆ

ಹಬ್ಬುವಾಗ ತಿರುವಿದಾಗ
ಉಳುಕು ಚಳಕು
ದೂರ ದೂಡಿ ಕಾಡುವಾಗ
ಮೂಳೆ ಮುರಿದ ನೋವು
ಬಾಯ್ಬಿಟ್ಟು ಚೀರಿಬಿಟ್ಟರೆ 
ಕೇಳುವುದು ಈ ಪ್ರಶ್ನೆಯ
ಬೀಜ ಭವಿಷ್ಯವಿತ್ತೇ ಮೊದಲೆ
ಇಲ್ಲದಿದ್ದರೆ ನಿನ್ನದದು ಮರುಳೇ ಮರುಳೇ..

.............
............. 
ಒಗಟು ಕಟ್ಟಬೇಕಿತ್ತು
ಒಗಟ ಬಿಡಿಸಬೇಕಿತ್ತು
ಎಷ್ಟು ಕಟ್ಟುವೆಯೋ ಎಷ್ಟು ಬಿಡಿಸುವೆಯೋ
ಹಬ್ಬಿದ ಮರಬಳ್ಳಿ ಸಾಲು ಸಾಲು ಗೂಡು ಕಟ್ಟಿದೆ
ಈ ಒಗಟುಗಳೋ 
ಚೀರಿ ಕೇಳುತ್ತಲಿವೆ
ಒಗಟ ಬಿಡಿಸದೆ ನಾನೂ ಅಲ್ಲೇ ನಿಂತೆ ಸಾಲಿಗೆ....

28/12/2015




ಈ ಮೌನ
ಪ್ರಯೋಗದ ಮುನ್ನದ 
ಬಾಂಬಿನಂತೆ
ಎಲ್ಲಿ ಹೇಗೆ ಸಿಡಿವುದೋ
ಕಾತುರ..
ಅಷ್ಟೇ ಆತಂಕ
ಗದ್ದಲ ಹೆದರಿಸಿದರೆ
ಮೌನಕ್ಕೆ ತತ್ತರಿಸುವೆ
.......
ತಲ್ಲಣಿಸಿ
ಇಲ್ಲದ ಮಾತುಗಳನ್ನೆಳೆದು
ತಬ್ಬುವೆ
ಸಂತೆಯೊಳಗೆ
ನೆಮ್ಮದಿಯಿಂದ
ನಿದ್ದೆಗೆ ಜಾರುವೆ


********


ಇಂತದ್ದೆ ಗುರಿ
ಎಂದಿದ್ದು ಬಿಟ್ಟರೆ
ಅದು ದಕ್ಕಿಯೂಬಿಟ್ಟರೆ
ಯಾರೂ ಸಾವಿಗೆ ಅಂಜುತ್ತಿರಲಿಲ್ಲ
ಎಲ್ಲರಿಗೂ ಸ್ವರ್ಗದಂತಹ ಸಾವು 
ಭೂಲೋಕದಲ್ಲೇ....

26/12/2015

ಪದ್ಯ

"ಇಂದು ನೆನ್ನೆಗೆ ನಾಳೆಯಾದವನು"

ಮಿಣುಕು ಹುಳುಗಳು
ಮಿನುಗಿ ಕರೆದಾವೊ
ಅಗೋ, ಆಗೊಂದು ಈಗೊಂದು
ಕತ್ತಲಿನೂರಿನೊಳು

ಗುಡಿಸಲ ಅಂಚಿನೆದೆಯಲಿ
ಇಣುಕಿ ಇಣುಕಿ ನೋಡಿವೆ
ಪಿಳಿಪಿಳಿ ಕಣ್ಣುಗಳು

ಅದೇನೋ ಹೊಳಪು, 
ಅದೇನೋ ಹುರುಪು
ಈ ಕಾಡಿನೂರಿನಲಿ 
ಹೀಗೊಂದು ನಡುರಾತ್ರಿಯ 
ಮಿಂಚಿನ ಬೆಳಕು ಕರೆದಿಹುದು 
ಬಡವನ ನೆತ್ತಿಯ 
ಕಣ್ಮಣಿಗಳ ಸೆಳೆಸೆಳೆದು

ಅಂಧಕಾರವ ಮೆಟ್ಟಿ ನಿಂತಿದೆ
ಅದೋ, ಆ ಮಣ್ಣಿನ ಹಣತೆ
ಪಕ್ಕದೂರಿನ ಬೀದಿ ಬೀದಿಯ 
ಕೊನೆಯ ತಿರುವುಗಳಲಿ

ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ
ಪಟ್ಟಣವೆಂಬೊ ಸಂತೆಯಲಿ
ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ
ಮೌಢ್ಯತೆಯ ಕೆಸರಿನಲಿ ಹುದುಗಿಸಿ ಇಳಿಸಿ, ಇಲ್ಲವಾಗಿಸಿ..

ಕರೆದಿದೆ ಹಣತೆ, ತೇಲಿದೆ ಕಣ್ಣು
ಕತ್ತಲೊಳು ಕೈ ತಡವಿ
ಮುಟ್ಟಿದೆಲ್ಲವೂ ಕಿಚ್ಚು, ಸುಟ್ಟವೋ ಬೆರಳುಗಳು
ಕಪ್ಪು ಚರ್ಮದ ಜನರನು ಕತ್ತಲೆಯು ಹೀರಿ..

ಬೆಂಕಿಯನೇ ನುಂಗಿ, 
ಬೆಂಕಿಯನೇ ಉಗುಳಿ
ಮೂಡಿ ಬಂದ ಸೂರ್ಯ 
ಈ ಕತ್ತಲ ಕಾಡಿಗೆ ಹಗಲಾಗಿ

ಮಿಂಚು ಹುಳುಗಳು-ದಾರಿ ದೀಪಗಳನೂ ಮೀರಿ
ಎಲ್ಲರೆದೆಯಲಿ ಅರಿವ ಬೆಳಕ ತಂದ
ಹಾದಿ ಬೀದಿಗೂ ಎದುರುಗೊಂಡು
ಹುಡುಕಿ ಬಂದ ನೀಡ ಬಂದ

ಕಾಡು-ನಾಡೆಂಬ
ಭೇದವೆಣಿಸದೆ ಸುತ್ತಿ
ದಣಿದು ಮಣಿದು ಬಂದ
ಪಂಜುಗಳ ಹಿಡಿದು 
ಎಲ್ಲಾ ಎಲ್ಲೆಯ ಮೀರಿ ಬಂದ
ನಟ್ಟ ನಡುರಾತ್ರಿಗಳ ಲೆಕ್ಕಿಸದೆ
ದೀಪಕೆ ದಾರಿಯಾಗಿ ಬಂದ

ಮೋಕ್ಷದೆಡೆಗೆ ಹೊರಟು ನಿಂತು
ಪ್ರೀತಿಯೆಡೆಗೆ ನುಗ್ಗಿದ
ಜನಮನಕೆ ಸೌಹಾರ್ದತೆಯೇ ಆಗಿ 
ತಾನೇ ಉರಿದು ಬೆಳಕಾಗುಳಿದ

ಙ್ಞಾನನಿವನು, ಅರಿವಿನ ಜ್ಯೋತಿಯು
ಉದಯವುಂಟು ಇಲ್ಲ ಅಸ್ತಮವು
ತೇಜಸ್ಸಿನೊಳು ಸೂರ್ಯನಿಗೆ ಅಣ್ಣನು , 
ತಂಪಿಗೆ ಚಂದ್ರನ ತಮ್ಮನು

ವಿದ್ಯೆಗೆ ಪ್ರೀತಿಯು 
ಕ್ರಾಂತಿಯ ತಿಳಿನೀರ ಹರಿವು
ರಾತ್ರಿಯ ಗೆದ್ದು ಹಗಲನು ದಕ್ಕಿಸಿಕೊಂಡವನು
ಇವನು ಪ್ರೇರಣೆಯು, ಅರಿವಿನ ಬುತ್ತಿಯು

ಬಡವನೆದೆಯ ಕಂದನ ಕಣ್ಣೀರಿಗೆ
ಕಾಂತಿ ತುಂಬಿದವನು
ಸುಟ್ಟ ಬೆರಳುಗಳ ಕಪ್ಪು ಜನರಿಗೆ
ಬೆಳದಿಂಗಳ ತನುವು ನೀಡಿದವನು
ದೀಪದ ಬುಡದ ಕತ್ತಲ ಕದ್ದು
ದೀವಿಗೆಯ ಷರಾ ತಿದ್ದಿದವನು

ಅಳಿದರೂ ಮುಗಿಯದ 
ಹಾಡ ಕಟ್ಟಿ ಹೋದವನು
'ಇಂದು ನೆನ್ನೆಗೆ ನಾಳೆಯಾದವನು'..
ಬುದ್ಧನಿವನು..
ಮಾನವೀಯತೆಯ ಕ್ಷೀರ ತುಂಬಿಕೊಂಡು
ಜಗಕೆ ತಾಯಿಯಾದವನು…

ದಿವ್ಯ ಆಂಜನಪ್ಪ
09/12/2015

ಪದ್ಯ

ನೇವರಿಸಿಕೊ ನಿನ್ನೆದೆಯ..


ನಿನಗೆ ಗೊತ್ತು
ನಾನು ರಾಜಿಯಾಗಲು 
ಕಾಯುತ್ತಿರುತ್ತೇನೆಂದು

ಗೊತ್ತಿದೆ ನಿನಗೆ
ನಾನು ಮೈಬಿಚ್ಚಿ ನನ್ನನ್ನಾವರಿಸಿಕೊಳ್ಳಲು 
ಕಾತುರಳೆಂದು

ಗೊತ್ತಿದೆ ನಿನಗೆ
ನಾನು ನಿನ್ನಲಿ ಕರಗಿ ಕಳೆದು ಹೋಗಲು
ಜಾರುತ್ತಿರುತ್ತೇನೆಂದು

ಆದರೂ ನೀ
ಕಾಯಿಸಿ ಬೇಯಿಸಿ ಕಳೆಯದೆ
ಕೈಲಿ ಹಿಡಿದು ಕಾಡುತ್ತೀಯ

ಕೈಯೆತ್ತಿ ನಿನ್ನ ಅಂಗೈಯಿಂದೊಮ್ಮೆ 
ನೇವರಿಸಿಕೋ ನಿನ್ನದೆಯ
ನಾನು ನಿನ್ನೊಳು
ಜಾರಬೇಕಿದೆ ಕಳೆದು ಹೋಗಬೇಕಿದೆ
ರಾಜಿಯಾಗಿ ಹೊಳೆಯಬೇಕಿದೆ

13/12/2015

ಪದ್ಯ


ಪದ್ಯ


ಅವಳ ಬೆಂಕಿಯ ದೇಹದ ಹಬೆಯೂ
ನನ್ನ ತಾಗಬಾರದೆಂದು ಹೊರಟು ದೂರ ಬಂದಿದ್ದೆ
ದ್ವೇಷವಿರಲಿಲ್ಲ ನನಗೆ

ಅವಳು ಅಂಗಲಾಚುವಾಗಲೂ ಕರಗದ ನಾನು
ನಾನಾಗಿರದೆ ಕುದಿಕೊಂಡು ಮುನಿದಿದ್ದೆ
ಅವಳನು ರಮಿಸದೆ ಮತ್ತೂ ಕಂಗೆಡೆಸಿ ಕೆಂಡವಾಗಿದ್ದೆ

ದ್ವೇಷಿಸದಿರೆಂದು ಕೂಗಿ ಬಂದಳು
ನಾನು ದ್ವೇಷಿಸುತ್ತಿರಲಿಲ್ಲ..
ಮೌನವಹಿಸಿದ್ದೆ.. 

ಅವಳಿಗೆ ಉತ್ತರವನೂ ಹೇಳಲಾಗದೆ 
ಮತ್ತಿನ್ನೆಲ್ಲೋ ಕರಗಿದಂತೆ ಉಳಿದೆ
ಅಸಲಿಗೆ ಕರಗಿರಲಿಲ್ಲಿ

ಕಳೆದೇ ಹೋಗಿದ್ದೆ 
ನಾನವಳಿಂದ ಓಡುವ ಓಟದ ದಾರಿಯಲ್ಲೆಲ್ಲೊ
ನನ್ನ ಮುಟ್ಟುವ ಅವಳ ದಾರಿಗಳನೆಲ್ಲಾ ಮುಚ್ಚುತ್ತಾ

ನಾನೆಷ್ಟು ದೂರವೆಂದರೆ
ಅವಳು ಪಕ್ಕದಲ್ಲೇ ಸುಳಿದರೂ
ನನ್ನ ಕಣ್ಣು ಕರೆದರೂ
ಅವಳದು ನಿರ್ಭಾವುಕ ನೋಟ

ಅವಳ ಈ ಕ್ಷಮಿಸೋ ಕಣ್ಗಳು
ನನ್ನನು ಸಾವಿರ ಬಾರಿ ಇರಿಯುತ್ತಿತ್ತು ತಣ್ಣಗೆ..
ನಾನು ಹಬೆಗೆ ಕಲ್ಲಾಗಿದ್ದೆ

09/12/2015

Wednesday 9 December 2015

ಪದ್ಯ

ಭಾವಗಳ ಕನ್ನಡಿ

ಬರೆಯಲು ನಾನೇನು
ಕವಿಯಲ್ಲ
ಭಾವಗಳ ಕನ್ನಡಿ

ಹುಟ್ಟಿದ ಕಲ್ಪನೆಗೆ
ಭಾವಗಳ ತಾಳೆಯಷ್ಟೆ
ಕನ್ನಡಿಗೆ ಅಕ್ಷರಗಳು ಬಡಿದು
ಉದುರಿದ ಪ್ರತಿಬಿಂಬಗಳೇ
ಸಾಲು ಹನಿಗಳು

ಲಯವಿಲ್ಲ ನಯವೂ
ಕಲಿಯುತ್ತಿರುವೆ ಭಾಷೆಯ
ನಾನು ಕನ್ನಡಿಯ ವಿದ್ಯಾರ್ಥಿ ...

09/12/2015

ಪದ್ಯ

ಕಣ್ಮುಚ್ಚಿ ಕೂತ ಬುದ್ಧ


ಕಣ್ಮುಚ್ಚಿ ಕೂತ
ಬುದ್ಧನೆದುರು
ನನ್ನದು ಪ್ರಶ್ನೆಗಳ ಸುರಿ ಮಳೆ
ಒಂದಕ್ಕಾದರೂ ಉತ್ತರಿಸುವನೇನೋ
ಕಾದು ಕೂತೆ... 

ಅಷ್ಟು ಹೊತ್ತು ಒದರಿದ ನಂತರ
ಒಂದು ದೀರ್ಘ ನಿಟ್ಟುಸಿರು
ಗಲಭೆ ನಿಂತ ಮನ
ಆವರಿಸಿದಂತೆ ಪ್ರಶಾಂತತೆ
ಬುದ್ಧನುದಯಿಸಿದ ತೋರಿ ಸಹನೆ... 

ಮಳೆಗಾಲದ ಕೋಗಿಲೆಯ 
ಮೌನ ಕಲಿಸಿದ
ಬದುಕಿನ ಪ್ರಶ್ನೆಗಳಿಗೆ 
ಮಳೆ ಋತು ಮಾನಗಳು ಸಮೀಕರಿಸಿದ
ಎದ್ದು ನಿಂತೆ 
ಕೆಲ ಪ್ರಶ್ನೆಗಳನ್ನಷ್ಟೇ ಆಯ್ದು 
ಅಲ್ಲಿಂದ ಹೊರಟುಬಿಟ್ಟೆ
ಬುದ್ಧನಿನ್ನೂ ಕಣ್ಮುಚ್ಚಿಯೇ ಕಾದು ಕೂತ
ಮತ್ತಿನ್ಯಾರಿಗೋ...

08/12/2015
ನನ್ನವಳ ಕೆನ್ನೆ ಹೂತೋಟದಲ್ಲಿ
ಕಪ್ಪು ದುಂಬಿಯ ಕಾಟ ಹೆಚ್ಚಾಗಿದೆ
ಮುತ್ತಿಕ್ಕುವಾಗ ಪ್ರತಿಭಟಿಸಿದಂತೆ ಎದುರಾಗಿ..!

07/12/2015

ಪದ್ಯ

ನನ್ನ ಸೋಲು


ಕೊನೆ ಪಕ್ಷ
ನನ್ನ ಸೋಲನ್ನಾದರೂ
ಸ್ವೀಕರಿಸಿ..
ಮುಂದೆ ನೀವು
ಮತ್ತೆ ಮತ್ತೆ ಸೋಲಿಸಬಹುದು... 

ನೀವು ಕಡೆಗಣಿಸಿದ ನನ್ನ ಸೋಲೂ ಸಹ
ಎದ್ದು ನಿಲ್ಲುವುದು
ಗೆಲುವನ್ನೆಚ್ಚರಿಸಲು ಇಲ್ಲದ ಹಠತೊಟ್ಟು
ದಯಮಾಡಿ ಸ್ವೀಕರಿಸಿ..

ಗೆದ್ದೆನೆಂದರೆ ಅದು
ನಿಮ್ಮನ್ನೇ ಸೋಲಿಸುವುದಲ್ಲ
ಸೋತ ತಾಣಗಳಿಂದ
ಬೇಡಿಕೆಯಿಲ್ಲದೆ ಹೊರಗುಳಿವುದು
ಒಪ್ಪದ ನಿಮ್ಮನಗಳ ಗೆಲ್ಲುವ ಪ್ರಯತ್ನಗಳ ಕೈಚೆಲ್ಲಿ..

ಸೋತು ಬಿಡಿ
ಈ ನನ್ನ ಸೋಲುಗಳನ್ನು 
ಪೋಣಿಸಲು ಒಪ್ಪಿಬಿಡಿ

ನೀವು ಒಪ್ಪದ ಹೊರತು
ಗೆಲ್ಲುವುದು
ನನಗೆ ಅನಿವಾರ್ಯವಾದೀತು
ನೀವು ಗೆದ್ದೀರಿ ಹೌದು
ಹೀಗೂ ಸೋತುಬಿಡಿ
ಈ ಸೋಲುಗಳನ್ನೊಪ್ಪುವ ನನ್ನ ಮಾತಿಗೆ

ಸೋಲಿಗಾದರೂ ಬೆಲೆ ಕಂಡೆನೆಂದು
ಹೀಗೆ ಹಿಗ್ಗುವೆ..
ಕಳೆದು ಕೂಡುವೆನೆಂದುಕೊಂಡೆ
ಶೂನ್ಯವಾಗುಳಿದೆ
ಭಾಗಿಸಲು ಬಂದ ಸೋಲುಗಳಿಗೆ
ಇನ್ಫಿನಿಟೀ ಆದೆ..!
ನಗುವಿದೆ, 
ಈ ಸೋಲುಗಳಿಗೋ, ಅರ್ಪಣೆಗೋ..
ಸೋಲಿನ ಖಿನ್ನತೆಯು ತಲೆಗೇರಿ
ನಕ್ಕೇನು ...
.........
ನಗುವುದು ಮುಖ್ಯವಷ್ಟೇ...

07/12/2015

ಪದ್ಯ

ಚಳಿಗೆ ಎಷ್ಟೊಂದು ಆಪಾದನೆಗಳು

ಮಳೆ ಹನಿಗಳಿಗೆ 
ಬಸೆದು ವಿರಹ
ತಂದುಕೊಂಡು ನೂರು ಕಲಹ
ಎದೆಯೊಳೆಲ್ಲ ಕೋಲಾಹಲ

"ಧೋ.."
ಎಂದು ಸುರಿವ 
ಮಳೆಯ ಸಾಂತ್ವಾನ
ಹ್ಞೂ ಹು ಇಲ್ಲವೇ ಇಲ್ಲ,
ಒಂದು ಘಳಿಗೆಯೂ ವಿರಾಮ

ಕನವರಿಕೆ ಚಡಪಡಿಕೆ
ಕನಸಳೊಂದು ಸುಂದರ ಕಲ್ಪನೆ
ರಾತ್ರಿ ಹಗಲಿನ ಮೇಲೆ
ಅದೇನೋ ದ್ವೇಷ

ಮಳೆ ಹನಿಗಳು 
ಮನದೊಳು ತೇಲಾಡಿ 
ಹಸಿಯಾಡಬಾರದಿತ್ತು
ಹೆಪ್ಪುಗಟ್ಟಿದ ಕಾಮನೆ 
ಉರಿದೇಳಬಾರದಿತ್ತು

ಹೀಗೆ ಬೆನ್ನಿಗೆ ಬಿದ್ದು 
ನನ್ನ ನೀ ಕಾಡಬಾರದಿತ್ತು
ಎಲ್ಲಾ ಈ ಚಳಿಯ ಮಹಿಮೆಯೋ
ನಿನ್ನಿಂದಾಗಿ ಆಪಾದನೆಗಳೆಷ್ಟೋ 
ಸುಮ್ಮನೆ ಈ ಚಳಿಗಾಲಕೆ..

02/12/2015

ಪದ್ಯ

ಎಳಸು ಹಸಿರೆಲೆಯ ಮೇಲೆ
ನೀರ ಹನಿಗಳು
ಅಧರಗಳ ಮೇಲೆ
ಹಗುರಾದ ಮುತ್ತುಗಳು
ತಿಳಿದೆಯಾ ಇನಿಯ...

ಮುಂಜಾವಿನ ರಮ್ಯತೆಗೆ
ಸೂರ್ರನ ದಿವ್ಯ ಕಿರಣಗಳು
ಹಾಸು ಹುಲ್ಲಿಗೆ
ಮಳೆಗರಿದ ಹೂ ಮರಗಳು
ನಮ್ಮ ಪ್ರೀತಿಗೆ ಕಾಣ್ಕೆ ಹುಡುಗ...

ನೀಲಿ ಬಾನು ಹೊತ್ತ ಹವೆಗೆ
ಚುಮು ಚುಮು ಚಳಿಯು
ರೋಮಾಂಚನದ ಪ್ರೇಮ ಕಾವಿಗೆ
ಗಟ್ಟಿಕ್ಕಿಕೊಂಡ ಬೆರಳುಗಳು ಬೆಸೆದುಕೊಂಡು ಒಲವು
ನಮ್ಮದು ಗೆಳೆಯ... !

01/12/2015


ನೀನು
ನನಗೆಂದೂ ಸ್ವಂತ
ನಾನು
ನನಗಲ್ಲದೆ ಉಳಿದು.. !

ನೀನು
ಕನಸಿಗೆ ಹಸಿರು
ನಾನು
ಆಸೆ ತೀರದೆ ಪಟು..

ನೀನು
ಕಣ್ಣ ಕಾಂತಿಯು
ನಾನು
ನಿನ್ನಪ್ಪುವ ಕಾಡಿಗೆ ಕಪ್ಪು 

ನೀನು
ಮೀರಿದ ಜಾಣ್ಮೆ
ನಾನು
ನಿಷ್ಠೆಯ ಅನುಯಾಯಿಯು

ನೀನು
ನಿತ್ಯ ಪ್ರೀತಿಯು
ನಾನು
ಮೋಹದ ಮಡಿಲು

ನೀನು
ಅಭೇದ ಶಕ್ತಿಯು
ನಾನು
ನಿನ್ನ ಭಕ್ತಳು

ನೀ
ಎನ್ನ ಆತ್ಮವು
ನಾ ನಿನ್ನ
ಪ್ರೇಮಿ ಸಾವಿನ ಅಂಚಿಗೂ... 

ನೀ ಎನ್ನ
ದಿವ್ಯವು
ನಾ ನಿನ್ನ 
ರೂಪದಿಂದಿಳಿದ ಬೆಂಕಿಯ ಮಿಣುಕು...!!!

ನೀನು
ನನಗೆಂದೂ ಸ್ವಂತ
ನಾನು
ನನಗಲ್ಲದೆ ಉರಿದುಳಿದು.. !

26/11/2015


*****

ಮಿಡಿತವ ಹಿಡಿದಿಡಲಾರದ ನಾಡಿಗಳಲ್ಲಿ
ಹರಿಯುವುದು ರಕ್ತ 
ಮಿಡಿತವ ಹತ್ತಿಕ್ಕಿಕೊಂಡಲ್ಲೂ 
ಮಿಡಿವುದು ರಕ್ತ
ಉದ್ವೇಗ ಆವೇಗಗಳಲ್ಲಿ
ಸಿಡಿದು ನರ ನಾಡಿಗಳು ...

24/11/2015

ಪದ್ಯ



ಮೌನದ ಬೇಲಿಯಿಟ್ಟು
ಎಲ್ಲರನೂ ದೂರವಿಟ್ಟೆ
ಅದೇನೋ ಆತಂಕ
ಕಸಿದುಕೊಳ್ವರೇನೋ ಧ್ಯಾನ

ಮಾತಿನ ಪ್ರೀತಿಯಿಟ್ಟು
ಅವರೆಲ್ಲರನೂ ಬಳಿಗೆ ಕರೆದುಬಿಟ್ಟೆ
ಅದೇನೋ ವ್ಯತ್ಯಾಸ
ಮುತ್ತಿನೊಡವೆಗೆ 'ಬಿಳಿ' ಎಚ್ಚರಿಕೆ

ಕನಸಿನ ಮಾಲೆತೊಟ್ಟು
ಕಾಲಿಗೆ ಗೆಜ್ಜೆಯನೇ ಕಟ್ಟಿಬಿಟ್ಟೆ
ಅದೇನೋ ಹೊಸ ಮೋಜು
ಸೋಲು ಗೆಜ್ಜೆಯದೋ? ಕುಣಿತದೋ?
ಹೆಜ್ಜೆ ನಿರಂತರ...

23/11/2015

Divya Anjanappa updated her status.
5:
ಮೌನದ ಬೇಲಿಯಿಟ್ಟು
ಎಲ್ಲರನೂ ದೂರವಿಟ್ಟೆ
ಅದೇನೋ ಆತಂಕ
ಕಸಿದುಕೊಳ್ವರೇನೋ ಧ್ಯಾನ

ಮಾತಿನ ಪ್ರೀತಿಯಿಟ್ಟು
ಅವರೆಲ್ಲರನೂ ಬಳಿಗೆ ಕರೆದುಬಿಟ್ಟೆ
ಅದೇನೋ ವ್ಯತ್ಯಾಸ
ಮುತ್ತಿನೊಡವೆಗೆ 'ಬಿಳಿ' ಎಚ್ಚರಿಕೆ

ಕನಸಿನ ಮಾಲೆತೊಟ್ಟು
ಕಾಲಿಗೆ ಗೆಜ್ಜೆಯನೇ ಕಟ್ಟಿಬಿಟ್ಟೆ
ಅದೇನೋ ಹೊಸ ಮೋಜು
ಸೋಲು ಗೆಜ್ಜೆಯದೋ? ಕುಣಿತದೋ?
ಹೆಜ್ಜೆ ನಿರಂತರ...

23/11/2015

ಪದ್ಯ

ನಿನ್ನ ಪಾದಗಳು..

ನಿನ್ನ ಪಾದಗಳು
ಕೋಮಲವಲ್ಲ ಕಣೆ ಹುಡುಗಿ
ಆದರೆ ನಾನದ ಚುಂಬಿಸಲು 
ಹವಣಿಸುವೆನು 

ಹೊಳಪಿಲ್ಲ ಹೌದು 
ಕಾಣುವುದು ಕಣ್ಣಿಗೆ
ನುಣುಪಾಗಿ ನಲುಗುವುದು 
ಕಣೆ ಜಾಣೆ ನನ್ನ ಸ್ಪರ್ಷಕೆ 

ಪಾದ ನಿನ್ನವು 
ಸುಂದರ ಕಣೆ ಹುಡುಗಿ
ಬಾಗಿ ನಾನಿಂದು ಚುಂಬಿಸುವೆ
ತಪ್ಪಿದರೆ
ಜನ್ಮಗಳೇ ಕಾಯುವೆನು
ನಾ ನಿನ್ನ ಪ್ರೀತಿಸುವೆನು...'
ನಿನ್ನ ಪಾದ..

ನಿನ್ನ ಪಾದಗಳು
ಕೋಮಲವಲ್ಲ ಕಣೆ ಹುಡುಗಿ
ಆದರೆ ನಾನದ ಚುಂಬಿಸಲು 
ಹವಣಿಸುವೆನು 

ಹೊಳಪಿಲ್ಲ ಹೌದು 
ಕಾಣುವುದು ಕಣ್ಣಿಗೆ
ನುಣುಪಾಗಿ ನಲುಗುವುದು 
ಕಣೆ ಜಾಣೆ ನನ್ನ ಸ್ಪರ್ಷಕೆ 

ಪಾದ ನಿನ್ನವು 
ಸುಂದರ ಕಣೆ ಹುಡುಗಿ
ಬಾಗಿ ನಾನಿಂದು ಚುಂಬಿಸುವೆ
ತಪ್ಪಿದರೆ
ಜನ್ಮಗಳೇ ಕಾಯುವೆನು
ನಾ ನಿನ್ನ ಪ್ರೀತಿಸುವೆನು...

20/11/2015

ಪದ್ಯ

ನೆಮ್ಮದಿಯ ಬೆನ್ನು ಮುಗ್ಧತೆ...!


ನೆಮ್ಮದಿಯ ಬೆನ್ನು
ಮುಗ್ಧತೆ ..! 
ಹೀಗೆ ನಾನಂದಾಗ
ಹಿಂದೆಯೇ ಅನಿಸುವುದು
ಏನೂ ತಿಳಿಯದ ಸ್ಥಿತಿಯು
ಅದು ಹೇಗೆ ನೆಮ್ಮದಿಯೆಂದು?! 
ತಿಳಿಯದೆಯೂ ಅನೇಕ ತಿಳಿದವುಗಳು
ಕಾಡದೆ ಇರುವುದೇ.. ?!

ತಿಳಿಯಲಿ ತಿಳಿಯದಿರಲಿ
ನೆಮ್ಮದಿಯದು ಒಂದು ಮನಃಸ್ಥಿತಿ 
ಪಡೆಕೊಳ್ಳುವುದು ಮನದ ಸಾಧನೆ..
ಈಗ ನೆಮ್ಮದಿಯಾಯ್ತು
ನೆಮ್ಮದಿಯ ವ್ಯಾಖ್ಯಾನ ಮಾಡಿ
ಮುಗ್ಧತೆಗಳನೆಲ್ಲಾ ಬದಿಗೊತ್ತಿ
ತಿಳಿದುಕೊಳ್ಳುವ ಹೊಸ ರೀತಿಗೆ.. 

ತಿಳಿದ ತಿಳಿಯದ
ಆ ಎಲ್ಲಾ ವಿಚಾರಗಳಿಗೂ
ಸ್ಪಂದಿಸುವ ಮಾತು ಕೊಡದಿರಲಿ ಮನವು
ತೂಗಿ ಅಳೆದು ತುಂಬಿಕೊಳ್ಳಲಿ
ಕೆಲವನಷ್ಟೇ ಶ್ರೇಷ್ಠವೆನಿಸಿದವು..
ಉಳಿದ ಮುಕ್ಕು ತುಕ್ಕುಗಳನ್ನು
ಎಲ್ಲಿ ಬಿಟ್ಟೆವೋ ಅಲ್ಲಿಯೇ ಮರೆತು.. 

ಮುಗ್ಧತೆಯು ಈ ನಡುವೆ ಎದ್ದು ನಿಂತು
ತಿಳಿದ ತಿಳಿಯದ ವಿಚಾರ-ಅನಿಸಿಕೆಗಳಲ್ಲಿ
ಜಾಣ ಕಿವುಡಾಗುಳಿಯಲಿ
ಮತ್ತೆ ಮತ್ತೆ
ನೆಮ್ಮದಿಗೆ ಬೆನ್ನಾಗಿ...!

20/11/2015



ಸಿಗದ ವಸ್ತುವನ್ನು 
ಹೆಚ್ಚು ಸ್ಮರಿಸುತ್ತೇವೆ..
ಆಗಾಗ ನೆನಸಿ ಅಳುತ್ತೇವೆ
ಇದರ ನಡುವೆ ಸುಳಿವ ನಗು
ಬರೆಸಿಕೊಂಡು ನಗುತ್ತದೆ.. 

*****

ಎಲ್ಲವ ಪಡದೇ 
ಸುಖಿಸುವೆನು 
ಎನ್ನುವ ಮಾತು
ಸುಳ್ಳೇ
ಪಡೆಯದೇ ಉಳಿದರೂ
ನಗು ಮುಖವ ಉಳಿಸಿಕೊಂಡರೆ
ಅದುವೇ ಸುಖವು...

20/11/2015
ಸ್ವೇಚ್ಛಾಚಾರ ಮತ್ತು ಸ್ವಾತಂತ್ರ್ಯ
ಎಂದಿಗೂ ಅರ್ಥ ವ್ಯತ್ಯಾಸವಾಗದಿರಲಿ
ನೊಂದ ಮನವು
ಹುಡುಕಿ ಬಾರದು
ಮತ್ತೆಂದೂ
ಮೊದಲಿನಂತೆ ನಂಬಿ... !

18/11/2015
******

ಎಳೆದಂತೆ ಹಗ್ಗ
ಜಗ್ಗುವುದು ಹೌದು
ಆ ಕಡೆಗೆ ಹೆಚ್ಚುವುದು
ಅಷ್ಟೇ ಸೆಳೆತ

ಯಾಕಷ್ಟು ಬಲವ
ಸಲೀಸಾಗಿ ತುಂಬುವುದು
ಆಸೆಗೆ ಹಿಡಿದೆಳೆದು..?!

ಅವಸರಕೆ ಕಣ್ ಬಿಡುವ ಹೊತ್ತಿಗೆ
ಹಗ್ಗ ಎಲ್ಲಿಗೋ ಹಾರಿ.. 
ಕೈ ಜಾರಿ ಮನ ಪೂರ ಖಾಲಿ...

17/11/2015


ದಿನವೂ ನಾನರಸಿ ತರುವ ಹೂಗಳಲಿ
ಎಷ್ಟೋ ಕಳೆಗಳುಂಟು
ಬಿಡಿಸಿ ಕಟ್ಟುವುದರೊಳಗೆ ತಡವಾಗುವುದು
ಹೂ ಮಾರುವುದಕೆ
ಹಾದಿ ಬೀದಿಯ ಗಾಳಿಯೇ
ನೀನಷ್ಟು ಹುಡಿಯ ತುಂಬದಿರು
ನನ್ನೀ ಬುಟ್ಟಿಯ ಹೂ ಮಾಲೆಗೆ 
ಬೇಸತ್ತು ಹೂಕಟ್ಟುವುದ ಬಿಟ್ಟೇನು
ಹೊಟ್ಟೆಗಿಲ್ಲದೆ ಬರಿದೇ ಸತ್ತೇನು..


**********

ಏನೆಲ್ಲಾ ಬರೆವವರು
ಹಾಗೆ ಬದುಕಲಿಲ್ಲವಂತೆ
ಬದುಕು ಅಷ್ಟು ಸುಲಭವೇ?
ಕಂಡೊಡನೆಯೇ ಕಣ್ಣಿಗೆ ದಕ್ಕಿಬಿಡಲು?.. 

15/11/2015

Sunday 15 November 2015

ಪದ್ಯ

ಕನಸು


ಜೀವವಿಲ್ಲದ ನಾಡಿಗಳಲ್ಲಿ
ಕಿಚ್ಚು ಹೊತ್ತಿ ಮಿಡಿತ ಹುಟ್ಟಿ
ಹೆಪ್ಪುಗಟ್ಟಿದ ರಕ್ತ ಹರಿಯಲು 
ಜೀವಂತವೆಂದರು ಎಲ್ಲ ಬುದ್ಧಿಜೀವಿಗಳು
ನಾಡಿ ಹಿಡಿದು ಉಸಿರ ಮುಟ್ಟಿ

ಸತ್ತ ಹೆಣಕೆ ಎಷ್ಟೆಲ್ಲಾ ಅಲಂಕಾರ 
ಹೂವು ಗಂಧ ವಸ್ತ್ರ ವಸ್ತು 
ಆಡಂಬರ ಆಚರಣೆಯ ವೈಭೋಗ

ಹರಿದ ಕನಸಿನ ಕಣ್ಣಿಗೆ 
ಎಷ್ಟು ಮುತ್ತುಗಳು, ಬಾವಣಿಕೆಗಳು ..
ಎದ್ದು ಬಂದೀತೇನೋ ಎಂಬ ಭ್ರಮೆಯೇ
ಸತ್ತ ಕನಸಿದು ಸುಲಭಕೆ ಎದ್ದು ನಿಲ್ಲದು..

ಹಾಡಿ ನುಡಿದು ಕೈ ಹಿಡಿದೆಳೆದುಬ್ಬಿಸಿ 
ಮೈದಡವಿ ಬೆನ್ಚಪ್ಪರಿಸಿ ಹುರಿದಿಂಬಿಸಿದರು
ಕನಸಿನ ಗರಿಕೆದರಿ ಆಕಾಶದಾಸೆ ತೋರಿಸಿ.. 
ಉಸಿರಿದ್ದ ಮಾತ್ರಕೆ ಹಾರದ ಕನಸಿದು 
ತೂಗಿಬಿಟ್ಟಿದೆ ಕಾಲ ಬಹು ತೂಕ ಹೊರಿಸಿ..
ಹಾರದು ಈ ಚಳಿಗಾಳಿಗೆ 'ತೇಲದ ಕನಸು'..

15/11/2015
ಪ್ರೀತಿಯಲಿ
ಮೌನ;

ಅದುವೇ 
ನಿಜ ಒಲುಮೆ

ಹೆಚ್ಚು 
ಸಹಿಸಿಕೊಳ್ಳುವ ರೀತಿ.

*****

ಅತಿಯಾದ ಮೋಹ
ದೈಹಿಕ
ಆಕರ್ಷಣೆ

ಅತಿಯಾದ ಪ್ರೀತಿ
ಮನದ
ಘರ್ಷಣೆ..!

13/11/2015

ಪದ್ಯ

ಕಾಲಚಕ್ರದಡಿ ಸಿಲುಕಿದೆ ಘಳಿಗೆ..


ಹೊರಟು ಹೋದ
ಬಿಟ್ಟುಕೊಟ್ಟ ಸ್ನೇಹ-ಬಂಧಗಳು
ಬಾರದು ಎಂದೂ
ಬಂದರೂ ಉಳಿಯದು 
ಅದರ ಸ್ಥಾನ ಗುರ್ತಿಸಿ...!

ಹೋಗುವ ಮುನ್ನ
ಬಿಟ್ಟುಕೊಡುವ ಮುನ್ನ
ತೂಗಿ ಕಾಣಬೇಕು
ಅದರದರ ಮೌಲ್ಯಗಳ
ಅಹಂಭಾವ ಬದಿಗೊತ್ತಿ...!

ತಿರುವುಗಳು ಇಹವು ಹಲವು
ಅದರೊಳೆಲ್ಲೊ ತಿರುಗಿ ಬಂದರೆ
ಇದ್ದ ಕಾಲಕ್ಕೆ ಋಣಿಯಾಗಿರಲಿ
ಗೌರವ ಘನತೆಯ ತುಂಬಿಕೊಂಡಿರುವ
ತಿರುವೊಳು ನಿಂತಾಗ ಪಶ್ಚಾತ್ತಾಪದ ಬಿಸಿ ಇಂಗಿಸಿ..!

ಸ್ವಾಭಿಮಾನದ ಮುಖ ಬದಲಿಯಾಗಿ
ಅಹಂನ ಅಟ್ಟಹಾಸ
ತಿಳಿಯದ ಮುಗ್ಧರು ಮುನಿಸಿಕೊಂಡರು
ತಿರುಗಿ ಬಾರದೆ ತಿರುಗಿ ನೋಡದೆ
ಮನದಲಿ ನೆನೆದರು
ಬಿಟ್ಟುಕೊಟ್ಟ ಬಂಧವ 
ಕೋಪದ ಕೂಪಕ್ಕೆ ಕೆಡವಿ...!

ಕಾಲಚಕ್ರದಡಿ ಸಿಲುಕಿದೆ ಘಳಿಗೆ 
ಅಡಿಗಡಿಗೂ ಬಿರುಸು ಸೆಡವು
ಕರಗದ 'ನಾನು' ಹರಿದಾಡಿಯೇ ಸಾಗುವುದು
ಒಮ್ಮೆ ಉಕ್ಕಿ, ಒಮ್ಮೆ ಧುಮುಕಿ 
ಹಗುರಾಗಿ ಬಯಲಲಿ ನದಿಯನ್ನನುಸರಿಸಿ..
ಅಲ್ಲಲ್ಲಿ ಕಣ್ಣೀರ ಕೊಡವಿ...!!

13/11/2015

Saturday 14 November 2015

ಪದ್ಯ




ಸ್ಪಂದನ
ನಿನ್ನ ವದನ
ಉಸಿರುಗಟ್ಟಿ ಸತ್ತ ಭಾವ ಭರವಸೆಗಳೆಲ್ಲಾ 
ಜೀವದೊಳು 'ಜೀವಂತ'.. 

ಪ್ರೇರಣ
ಮೆಚ್ಚುಗೆಯ ನಿನ್ನ ಒಂದು ನೋಟ
ಸುರಿವ ಮಳೆಯಲಿ
ಮೋಡದ ಮೇಲೋಡುವ 'ಹದ್ದು' ಈ ಮನಸ್ಸು

ಸಾಂತ್ವನ
ಸ್ನೇಹ ಪ್ರೀತಿಯ ಸವರಿದ ನಿನ್ನ ಕೈ
ಸಂಜೆ ಸೊಬಗ ಹೊತ್ತಂತೆ ಈ ಕೆನ್ನೆ ಕೆಂಪು
ಮಗುವಿನ 'ಮುಗ್ಧತೆ'ಯ ಮೊಗವು

ಪ್ರೇಮ
ನಿನ್ನ ಒಂದು ದಳದ ಸ್ಪರ್ಷಕೆ
ನನ್ನಿಡೀ ಜೀವಮಾನ ಕಮಲದ ಕೊಳ
ಈಜುತ್ತಲೇ ಉಳಿದು 'ದಡ' ಸೇರದಂತಹ ದಣಿವು..

ಯೌವ್ವನ
ನಿನ್ನ ಒಂದು ಕಿರುನಗೆಯ ಬೆಂಕಿ
ನಿರಂತರ ತಾಪವನ್ನೀಯುವ ಸೂರ್ಯ
ಹಗಲಿರುಳು ಈ 'ಭಾವ ಜೀವ'ಕೆ...

12/11/2015

ಪದ್ಯ

ದೀಪ


ದೀಪವಿರಲಿ ಸಾವಿರಾರು
ಈ ಕಣ್ಣ ಕಾಂತಿಗೆ ಸಾಲು ಕನಸು
ಹರಿದಷ್ಟೂ ಮನದ ಹರವು
ನೆಟ್ಟಿ ನಿಲ್ಲಲಿ ದೀಪದ ಕಾವು

ಅದು ಬೆಳಕಿಗಾಗಿಯೇ ಹೊತ್ತಿ ಉರಿವ ಬೆಂಕಿ
ಉಳಿದಂತೆ ಭೂರಮೆಯೊಳು ತಣ್ಣಗೆ ಮಲಗಿದ ಒಡಲು
ಬೆಂಕಿಯು ಬೇಕು ಕತ್ತಲೆಗೆ 
ಸಣ್ಣಗೆ ಮಿಣುಕಾಡುವಂತೆ
ಕಿಚ್ಚು ಇರಲಿ ಇರದಂತೆಯೂ
ಹೆಚ್ಚಿ ಇರಲಿ
ಅದುಮಿಟ್ಟರೂ ಪುಟಿವಂತೆಯೂ 
ಬೆಳಕಾಗುವ ಬೆಂಕಿ ಕತ್ತಲೂ ಹೌದು
ಹಿಡಿದಂತೆ ಚುಕ್ಕಾಣಿ ರಥದ ಪಥವು..

ದೀಪವಿದು ಗುರುದೀಪ
ದಾರಿ ನೀಡಿ ಕನಿಕರಿಸೋ ಕಾಲವು
ಕೈಯೊಳು ಹಿಡಿದು ಸಾಗಬೇಕು ಹಾದಿ
ದೀಪವಿದ್ದಡೆಯೇ ಅಂತ್ಯವೆಂದೆಣಿಸದೆ
ಙ್ಞಾನದ ಹಸಿವಿಗೆ 
ಎದುರಾದ ಕನ್ನಡಿಗಳು ಸಾಲು ಸಾಲು 
....ದೀಪಗಳ ಸಾಲು

10/11/2015