Wednesday 29 October 2014

ಕವನ

ಅಂಬಿಗನೇ ...


ಎಷ್ಟೋ ವೇದನೆಗಳ ನಡುವೆ 
ಒಂದಷ್ಟು ನಿರಾಳ ಕಂಡದ್ದು 
ಅದು ಬಹುಶಃ ನಿನ್ನಲ್ಲೇ,, 
ನನ್ನನ್ನು ನನ್ನಂತೆ ಒಪ್ಪಿದ ನೀನು 
ನಿನ್ನನ್ನು ನಾ ನಿನ್ನಂತೆ ಒಪ್ಪಿದರೆ 
ನಿನಗೇಕೆ ಸಂಶಯ ಹುಡುಗನೇ !!

ನಿನ್ನೊಳಗೊಂದು ಹೊಳೆವ ನನ್ನ ಬಿಂಬಕೆ 
ನನ್ನೊಳಗಿನ ಚೇತನ ಮಂತ್ರಮುಗ್ಧ 
ಹೀಗೆಲ್ಲಾ ನಾನೂ ಹರಿವಳೇ?! ಎನ್ನೋ 
ಆಶ್ಚರ್ಯದೊಂದಿಗೆ ಸಣ್ಣ ಆತಂಕ!
ಇನ್ನಷ್ಟು ಹತ್ತಿರಾಗಿ ವಿವರಿಸಲಾರೆಯಾ 
ನಿನ್ನ ಪ್ರೇಮವಾ?; 
ಪ್ರೀತಿಯ ಹೊಳೆಯಲಿ ಒಲುಮೆಯ 
ಹುಟ್ಟು ಹಾಕೋ ಅಂಬಿಗನೇ !!

29/10/2014 
ಕಣ್ಣಿಗೆ ಬಿದ್ದು ಬಿದ್ದೂ 
ಕಣ್ಣು ಕೆಂಪಗಾಯಿತು 
ಮನಸು ವಿಕಲವಾಗಿ 

ನಾಲಿಗೆ ಹರಿತವಾಯಿತು!

##################################

ಒಳ್ಳೆಯತನ ಎಂಬುವುದು ಹೆಚ್ಚು ಮಾತನಾಡದು 
ತನ್ನತನವ ಸಾಬೀತುಪಡಿಸಿಕೊಳ್ಳಲು ಹೆಣಗಬಾರದು 
ಮೂಕಿಯಾಗಿದ್ದ ಬಹಳಷ್ಟು ಸಂದರ್ಭ ನಾ ದ್ವೇಷಿಸಲ್ಪಟ್ಟಿದ್ದೆ 
ಮಾತು ಬಾರದ ಕಾರಣ ನಿಂದನೆಗೊಳಗಾಗಿದ್ದೆ 
ಇಂದು ನನಗೆ ಮಾತು ಬರುವುದು, ವಾದವೂ ನಡೆವುದು 
ಆದರೂ ಒಳ್ಳೆಯತನವೆನಿಸಿಕೊಳ್ಳಲಿಲ್ಲ ಅಹಂ ಎನಿಸಿಬಿಟ್ಟಿತು 
ತನ್ನ ತಾ ಸಾಧಿಸಿಕೊಳ್ಳೋ ಹಟ, ಸುಳ್ಳಲ್ಲದ ನಾನು ನಿಜವಾಗುಳಿವ ಛಲ 
ಅವರಿಗದು ಬೇಡದ ವಿವರ, ಅವರಿಗೂ ಇಂತಹುದೇ ಹುಚ್ಚು 

ನಾನು ಸೋತು ಮತ್ತೆ ಸೋತೆ, ಗೆಲ್ಲುವವರು ಗೆಲ್ಲುತಲೇ ನಿಂದರು ಬೆನ್ನ ಹಿಂದೆ,

################################

ಇನ್ನೇನು ದಡ ಸಿಕ್ಕಿತು 
ಎನ್ನುವಷ್ಟರಲ್ಲಿ 
ಅಲ್ಲಿಯೇ ಸಿಕ್ಕಿಕೊಂಡೆ 
ಸುಳಿಯೊಳಗೆ 
ಕಾಡಿದ್ದ ಕಾದಿದ್ದ ಹುಡುಗ 
ಬೆಚ್ಚಿ ನಿಂತಿದ್ದ 
ದಡದ ಗೋಡೆಯಂತೆ, 
ನಾ 
ಎರಚಿ ಹೋದ ನೀರಿಗೆ 

ಕ್ಷಣಕಾಲದ ಚಿತ್ತಾರಕೆ!

###############################

ನಿಮ್ಮ ಹೊಸ ನೋವಿಗೆ
ನಾನು ಕಾರಣಳಲ್ಲ
ಹಾಗೆಯೇ 
ನನ್ನ ಹಳೆಯ ನೋವಿಗೆ 
ಹೊಸ ನಗುವಿಗೆ

ನೀವು! 

#################################

ಎಷ್ಟು ಅದುಮಿಟ್ಟರೂ ಗತದ ಮಣ್ಣ್ಯಾಕೊ ಸಡಿಲ,
ಎದ್ದು ಬಂದು ಎದುರು ನಿಲ್ಲುತ್ತವೆ ಒಡೆದ ನನ್ನ ಬಿಂಬಗಳು!
ಕನ್ನಡಿ ಮಾತ್ರವೇ ನನ್ನದು
ಆಗಾಗಷ್ಟು ಸ್ಪಷ್ಟ

ಕಣ್ಗಳು ಎಂದಿನಂತೆ ಮಂಜೆ! 

29/10/2014 

################

ಭೀಕರ ಕತ್ತಲೊಳಗೆ 
ಮೋಹದ ಮಂದ ದೀಪವ ಹಿಡಿದು ನಡೆವುದು
ಎಷ್ಟು ಕಷ್ಟವೋ!
ಅವನೊಬ್ಬ ನಡೆದಿರುವನು, 
ಕತ್ತಲ 'ಮತ್ತಿನ' ಆರಾಧಕ!
ಅವನ ಕಂಡಾಗಲೆಲ್ಲಾ ಸೋಜಿಗವೇ!
ಸೇಡಿನ ಜಿದ್ದಿಗೆ ಬಿದ್ದು, ಛಲದ ಮುಖವಾಡವಿಟ್ಟು
ಅಂತೂ ನಡೆದಿದ್ದಾನೆ
ಅವನೊಡ ಕತ್ತಲೆಯೂ..

28/10/2014 

ಕವನ

ಧ್ಯಾನದಲ್ಲಿದ್ದ ಮೌನಕೆ 
ಜಗತ್ತು ಶೂನ್ಯವೆನಿಸಿ 
ತನ್ನೊಳ ದಕ್ಕಿದ ಕಾಂತಿಯನು ಮೆಚ್ಚಿ 
ಅದನೇ ಬರೆದುಬಿಟ್ಟಿತು 
ಹೇಳಿಕೊಳ್ಳಲೊಂದೂ ಕಿವಿಯಿಲ್ಲದಾಗ 
ಪತ್ರಗಳೇ ಕಿವಿ , ಮೂಗು , ಕಣ್ಗಾಳಾದವು 
ಅಲ್ಲಿಗೆ ಬಂದ ದಾರಿ ಹೋಕನೊಬ್ಬ 
ಬಿದ್ದ ಪತ್ರಗಳನೆಲ್ಲಾ ಹೆಕ್ಕಿ ಓದಿಕೊಂಡ
'ಓ ಮಹಾ ಕಾವ್ಯ'ವೆಂದ
ಈ ಮೌನ ಶರೀರಕ್ಕೊಂದು 
ಸುಮಧುರ ಶಾರೀರ ಹಚ್ಚಿ 
ತನ್ನೂರಲ್ಲೊಂದು ಸಂತೆ ಕಟ್ಟಿದ!

27/10/2014 

ಕವನ

ಸತ್ಯವು ಕಣ್ಣೆದುರೇ ಬಂದು ನಿಂತು 
ನಗಬಾರದಿತ್ತು ಅದಕ್ಕೇನು ಗೊತ್ತಿತ್ತು 
ಅದನ್ನವರು ಮುಚ್ಚಿಟ್ಟಿದ್ದರೆಂದು!

ಈಗ ಅವರೂ ನಗುವರು ಸತ್ಯದೊಡನೆ
ಅಡಗಿಸಿಟ್ಟ ಸತ್ಯ ಶುದ್ಧವೆಂದು 
ಅಶುದ್ಧವನ್ನು ಮೆರೆಸೊ ಮಾಂತ್ರಿಕರು

ಹೆಚ್ಚೇನು ವಿಷಯ ಬೇಕಿರಲಿಲ್ಲ 
ಪಸರಿಸಿದ ವಿಷದ ಗುರುತು ಹಚ್ಚಲು 
ಮೂಢರಲ್ಲ, ಇಲ್ಯಾರು ಮೂಢರಿಲ್ಲ
ನೈತಿಕತೆ ಬಿಟ್ಟ ಆರಾಧಕರು!!

27/10/2014 


ನಿದಿರೆ ಸೆಳೆದಿರುವಳು 
ಈ ಹೊತ್ತು,
ತಣ್ಣನೆಯ ಸಂಜೆ
ಬಿಡಿಸಿಕೊಳ್ಳುತ್ತಿರುವೆ ಕಣ್ 
ರೆಪ್ಪೆಗಳ
ಮಂಪರಿನಿಂದ, 
ನಿನ್ನ ನೆನಪಿನಿಂದ
ಕ್ಷಮೆಯಿರಲಿ ಇದು ಸಂಜೆ

ಹೊತ್ತಲ್ಲದ ಹೊತ್ತು!

###################

ಮನಸ್ಸಿಲ್ಲ ಈಗ ಮನಸ್ಸಿಲ್ಲ,,
ಖಾಲಿತನ ಜಗದ ಮುಖವಾಡ
ಸೋತಿಲ್ಲ ನಾ ಸೋಲೊಲ್ಲ
ಬರಿದಲ್ಲದ ಮನಕೆ ಆ ಮುಖವಿಲ್ಲ
ಸೊಗಸಿಲ್ಲ ಏನೇನೂ ಸೊಗಸಿಲ್ಲ
ಮರುಳಾಗುವ ವಯಸ್ಸೆಲ್ಲಾ ಇನ್ನಿಲ್ಲ!!

26/10/2014 

ಕವನ

ಭಾವನೆಗಳಿಗೂ ಭಾವಿಸೋ ನಡೆಗಳಿಗೂ
ಕೃತಕತೆ ಎನ್ನುವ ನಡುವಿನ ವ್ಯತ್ಯಾಸ!

ಪ್ರೀತಿಸುವೆ ಎನ್ನುವ, ಪ್ರೀತಿಸಿಬಿಡುವ
ಒಲವೆನ್ನುವ ನಡುವಿನ ವ್ಯತ್ಯಾಸ!

ನುಡಿಗಳು ಸುಳ್ಳಾಡಿದರೂ 
ಕಣ್ಗಳು ದಿಟವೇ

ಮರುಳಾದ ಮಾತುಗಳು 
ನನ್ನೊಳ ಮೊಳಗದ ಸುದ್ಧಿ

ಎಷ್ಟೋ ಕಾರಣಗಳು ಬೇಕಿರಲಿಲ್ಲ ನಾ ಮೆಚ್ಚಲು
ಒಂದಷ್ಟು ಬಚ್ಚಿಡದ ಒರಟುತನ, ನಿಜವೇ ಹೇಳುವ ನಿನ್ನ ಕಣ್ಗಳು!

26/10/2014

Saturday 25 October 2014

ಕವನ

ಶಿಥಿಲ ಶಿಲೆಗಳು....



ಬಂಧಿಸಿಕೊಂಡಷ್ಟು ಭಾವಗಳು
ಹರಿದುಬಿಡಲು ತವಕಿಸುತ್ತವೆ
ಕುರುಡಾಗಿ ಎಲ್ಲೆಂದರಲ್ಲಿ ನುಗ್ಗುವಂತೆ
ಒಳ ಒತ್ತಡವಿರುವಂತೆ!

ಹರಿದುಬಿಡುವ ಭಾವಗಳಿಗೆ

ಹಗುರಾಗುವ ಅವಸರಗಳು
ಕೊರೆದ ನೆಲಗಳ
ಪರಿವೆಯೇ ಇಲ್ಲದಂತೆ!

ಹರಿದು ಕೊಟ್ಟ ಮಣ್ಣ ನೆಲಗಳಿಗೆ

ಕಳೆದುಕೊಂಡ ಭಾವ
ಜೊತೆ ಸಾಗಲಾರದ ಜಿಗುಪ್ಸೆ
ಕಣ್ಣೀರಿಲ್ಲದ ಕಣ್ಣಂತೆ!

ಮನಸೇ ಇಲ್ಲದ ಧಾರೆಗಳಿಗೆ

ಮನಸುಕೊಟ್ಟು ಪಡೆವ ವೇದನೆ
ಕೊರೆತ ಸಹಿಸಿ ಕತ್ತಲ ಕೂಪಕ್ಕಿಳಿವ
ಮೌನ ರೋದನದಂತೆ!

ಭದ್ರವಾಗಿ ಆಳಕ್ಕಿಳಿವ ಭಗ್ನ ಮನಸುಗಳಿಗೆ

ನೆಲದ ಮೇಲೆ ಇದ್ದ ನಿಶಾನೆಯೇ ಇಲ್ಲ
ಕೊರೆತವೆಲ್ಲಾ ಅಳಿಸಿಕೊಂಡು ಉಳಿವ
ಭೂಗರ್ಭದ ಕಲ್ಲು ಚಪ್ಪಡಿಗಳಂತೆ

ಎಂದೋ ಯಾವುದೋ ಮನಸುಗಳಿಗೆ

ಇನ್ನಿಲ್ಲದ ಶ್ರಮದ ಫಲವಾಗಿ
ಸಿಗಿದು ಪಡೆವ ಪುರಾತನ
ಶಿಥಿಲ ಶಿಲೆಗಳಂತೆ ಮತ್ತವು
ಅಮೂಲ್ಯವಂತೆ!

25/10/2014
ಮನಸ್ಸು ತುಳಿದ ಹೂವಾದಾಗ
ನೋಡುವ ನೋಟವೆಲ್ಲಾ ಕ್ರೂರವೇ
ಬಳಿ ಬಂದ ತಂಗಾಳಿಗೂ ಉರಿವ ಆಪಾದನೆ
ನಿಂತ ನೆಲವೂ ಮತ್ತೂ ಕೆಳಕ್ಕೆ ತುಳಿಯೋ ವೇದನೆ
ಮನಸ್ಸು ಮೆದುವಾಗಬಾರದಿತ್ತು
ಮನಸ್ಸು ಹೂವಾಗಬಾರದಿತ್ತು
ಕಲ್ಲೊಳ ಮೃದುವು ಅವರೆದೆಯ ತಾಕಬಾರದಿತ್ತು
ಕಲ್ಲು ಕರಗಬಾರದಿತ್ತು!

25/10/2014

Friday 24 October 2014

ಕವನ

ಕುಸುರಿ



ಕನಸ ಕುಸುರಿಗೆ
ಬಣ್ಣದ ಅಭಾವ!

ಭಾವ ದೀಪ್ತಿಗೆ
ಮನಸು ಅಭಾವ!

ಹೃದಯ ಬಿರಿತಕೆ
ಮಿಡಿತದ ಅಭಾವ!

ಪ್ರೀತಿ ಸೆಳೆತಕೆ
ನಿಷ್ಠೆಯ ಅಭಾವ!

ಆದರೂ ಕನಸಿಗೆ ಭಾವ ತುಂಬಿ
ಮನಸಿಗೆ ಹೃದಯ ಬಿಗಿದು

ನಿಷ್ಠೆಯ ಮಿಡಿತ ಹೆಚ್ಚಿಸಿದೆ
ಹಾಳು ಈ ಜೀವನ ಬಣ್ಣಗಳು!

24/10/2014

Thursday 23 October 2014

ಕವನ

ಚರದಲಿ...


ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ
ಬರೆದುಕೊಂಡು ಬಿಡು ನೀನೇ ನನ್ನಯ ಸಾಲು

ಸೇರದ ದೂರವಾಗದ ಈ ಹಳಿಗಳಂತಾಗಿ
ಒಟ್ಟಿಗೆ ಪಯಣಿಸೊ ಈ ಸುಂದರ ಮಾರ್ಗ
ಆ ಕಿಟಕಿಗೆ ನೀನು, ಈ ಕಿಟಕಿಗೆ ನಾನು
ಮುಖ ಮಾಡಿ ಪರಸ್ಪರ ಧ್ಯಾನಿಸುತ
ಕುಳಿತ ಒಂದೇ ಬೋಗಿಯ ಪ್ರಯಾಣಿಕರು

ಕಿಟಕಿಯಾಚೆಗೆ ಸೆಳೆವ ಹಸಿರೊಳು ಉಸಿರಾಗಿ 
ಒಮ್ಮೆ ಕಂಪಿಸುತ,,ಮತ್ತೊಮ್ಮೆ ಆಘ್ರಾಣಿಸುತ 
ಸಾಗುತ ನಿಂದೆವು ನಾವು ಸ್ಥಿರವಾಗಿ ಚರದಲಿ..

24/10/2014

ಕವನ

ಕವಿ-ಕಾವ್ಯ ನಾಮ




ನಕ್ಷತ್ರವೊಂದು ಹೇಳಿತಂತೆ
ದೂರದಿಂದ ಆರಾಧಿಸೋ
ಆ ನನ್ನಯ ಸಾಸಿರ ಜೀವಗಳು
ಬಂದು ಒಂದರೆ ಘಳಿಗೆಯೂ
ಇರರು ನನ್ನೊಟ್ಟಿಗೆ; ಕಾರಣ
ನನ್ನೊಳ ಬೇಗೆ, ಉರಿಯೋ ವೇದನೆ
ಉಸಿರಿಲ್ಲದ ಉಚ್ಛ್ವಾಸ-ನಿಶ್ವಾಸಗಳು!

ಕಾನನದ ಹೂವೊಂದು ನಲುಗಿತಂತೆ
ಅದೆಲ್ಲೋ ಕುಳಿತು ಜಪಿಸೋ ಕವಿ ಹೃದಯ
ಕಾಡು ಮಲ್ಲೆಯ ಸೊಬಗ ಇನ್ನಿಲ್ಲದೆ ವರ್ಣಿಸಿದ
ಆತನಾದರೂ ಬಂದೊಮ್ಮೆ ಕೇಳಿದನೇ
ನನ್ನಯ ಅನಿವಾರ್ಯ ವೈರಾಗ್ಯ
ಬರಲಾರನು ದಾಟಿ ಕಾಡ ಗಡಿಯ
ಜೀವ ಭಯವಿದೆ ಅವನಿಗೂ
ನೋಡಿ ನನ್ನಯ ಈ ದಟ್ಟ ಅರಣ್ಯ!

ಕಡಲಾಳದ ಮುತ್ತೊಂದು ಕರೆಯಿತಂತೆ
ಬಂದು ಸೇರೋ ಚಿನ್ನದ ಹುರಿಯ
ಬರಲಾರೆನೆನುತ ಸೋತುಕೊಂಡಿತಂತೆ
ಅವರ ಕೈಯೊಳು ತಲತಲಾಂತರದ ಸೊತ್ತಂತೆ,
ನಿಟ್ಟುಸಿರಲಿ ಮಗ್ಗುಲಾದ ಮುತ್ತು
ಮತ್ತೆಲ್ಲೋ ಬಲೆಯೊಳಗೆ ಬಿಕ್ಕು
ಸಮುದ್ರದಾಳಕ್ಕಿಂತ ಮನಸು ಭಾರವಾಯ್ತು
ಬರಲಾರದ ಚಿನ್ನದ ಹುರಿಗೆ ದೂರ ನೆಪವಾಯ್ತು

ಮಾಯದ ಮೋಹವು ಮಾತಾಯಿತಂತೆ
ನನ್ನೆಡೆ ಬರಲಾರರು ಎಂದು ಯಾರೂ ಇಲ್ಲ
ಬಂದವರ್ಯಾರು ಉಳಿವರಿಲ್ಲ;
ಬಂದು ಹೋಗೊ ಬಯಕೆ ನಾ
ಬಂದಿಲ್ಲೇ ಕಳೆದು ಹೋದವರೆಲ್ಲಾ ಹುಚ್ಚರು!
ದಾಹಿಗಳು, ಧ್ಯಾನಿಗಳು, ಮೋಹದ ಮಾಂತ್ರಿಕರು
ಕಳೆದು ಬಂದು ಉಳಿವರು ಹೀಗೆ ಕವಿಗಳ ಹಾಗೆ!

ಆಗಸದ ನಕ್ಷತ್ರ, ಕಾಡು ಮಲ್ಲೆ, ಕಡಲಾಳದ ಮುತ್ತುಗಳು
ಒಂದೇ ಸಮನೆ ಉದ್ವೇಗದಿ ಉಲಿವರಂತೆ
ಮೋಹದ ಜೊತೆಗೂಡಿ
ವಿರಹ, ಪ್ರೇಮ, ಮಧುರ ಭಾವ, ವೈರಾಗ್ಯ
ತಮ್ಮದೇ ಆಸ್ತಿಗಳಂತೆ
ಕ್ಷಣ ಕಾಲ ಮೌನವಾಗಿ ಆವರಿಸಿ ಎದೆಗೇರಿ ನಿಂತರು
ಕವಿ ಕಾವ್ಯ ನಾಮಗಳಲ್ಲಿ
ನೆಲೆ ಕಂಡರಂತೆ!

23/108/2014

ಕವನ

ಕ್ಷಮಿಸಿಬಿಡು ನೀ....



ನಿನ್ನನು ಅಲ್ಲಿ ಇಲ್ಲಿ
ಹುಡುಕಿ ಅವಮಾನಿತಳಾಗಿದ್ದು
ನನ್ನದೇ ತಪ್ಪಿದೆ;
ಕ್ಷಮಿಸಿಬಿಡು ನನ್ನೊಳಗೇ ಇರುವ ನಿನ್ನ
ಲಕ್ಷಿಸದೇ ಉಳಿದುಕೊಂಡೆ!

ಆಯ ತಪ್ಪಿದ ನಡೆಯಂತೆ
ಮನವೆಲ್ಲಾ ಕೊರಗು
ಕ್ಷಮಿಸಿಬಿಡು ನೀ ನನ್ನೊಳ ಒಲವೇ
ತಪ್ಪಲಾರೆ ಇನ್ನು ಎಂದಿಗು

ಏಸು ದಿನದ ಶ್ರಮವೋ
ನೀ ನನ್ನ ಶಾಂತ ನಿರ್ವಿಕಾರ ಕಾಂತಿ
ಕುಂದಿಸಿ ಬಿಟ್ಟೆ ನಾನೊಡನೆಯೇ
ಲಯ ತಪ್ಪಿದ ಗೇಯದಂತೆ

ಕದಡಿದ ಕೊಳದ ರಾಡಿಯಂತೆ
ಇನ್ನೆಷ್ಟು ಕಾಲ ಬೇಕೋ ಹಗುರಾಗಲು
ಸಹಕರಿಸಿ ಕ್ಷಮಿಸಿಬಿಡು 
ಓ ನನ್ನಯ ಮನವೇ
ಮತ್ತಾಗೆನು ಹೀಗೆ ಚಂಚಲ ಚಿತ್ತಳು!

23/10/2014

Wednesday 22 October 2014

ಕವನ

ಹೇಳು ನೀ ದೇವನೇ.....



ಸುತ್ತಲೂ ಬೆಳಕಿರಲು 
ನನ್ನೊಳ ಅಂಧಕಾರವ 
ಮುಚ್ಚಿಡಲಾರೆನೋ ದೇವ

ಸುತ್ತ ಸೂರ್ಯ ಕಾಂತಿ ಹೊಮ್ಮಿರಲು
ನನ್ನೊಳ ಮುಳ್ಳು ಬೇಲಿಯ 
ಬೆಳಸಲಾರೆನೋ ದೇವ

ಸುಳಿವ ತಂಗಾಳಿ ಸೆಳೆದಿರಲು 
ನಡುವಿನ ಒಂಟಿತನ ಸಂಕೋಲೆಯ 
ಬಿಡಿಸದೆ ನಿಲ್ಲಲಾರೆನೋ ದೇವ

ಶಬ್ಧಗಳೆಲ್ಲಾ ಶಬ್ದವಾಗಿರಲು 
ನನ್ನೊಳ ನಿಶ್ಶಬ್ದವ
ಕಾಯ್ದಿರಿಸಲಾರೆನೋ ದೇವ

ಹಸುರ ಹೊನ್ನು ರಾಶಿಯಿರಲು
ಒಳಗಿನ ಬರಡುತನವ 
ಇನ್ನೆಷ್ಟು ಸಹಿಸಲಿ, ಆಗದೋ ದೇವ

ಜಗದಗಲ ಹಬ್ಬಿದ ಪ್ರೀತಿಗೆ 
ನನ್ನೊಳ ಮೋಹ ಚೇತರಿಕೆಯ
ಸುಳಿವನು ಹೇಗೆ ಮುಚ್ಚಿಡಲಿ,
ಹೇಳು ನೀ ದೇವನೇ,,,

22/10/2014
ಬೆಳಕು ತುಂಬಿರಲಿ ಕಣ್ಗಳಲಿ
ಪ್ರೀತಿ ತುಂಬಿರಲಿ ಬಾಳಲಿ

22/10/2014

##################

ಬಯಸಿದ್ದೆಲ್ಲಾ ಸಿಗುವುದಿಲ್ಲ
ಸಿಕ್ಕರೆ ಬಯಕೆಗಳಿಗೆ ಬೆಲೆಯಿಲ್ಲ

21/10/2014

ಕವನ

ಯಾರು ನೀ.....



ಹಾರೋ ಹಕ್ಕಿ ನಾ
ಜಿಗಿಯೋ ಜಿಂಕೆಯೂ
ಉಲಿವ ಕಲರವವೂ
ಯಾರು ನೀ ಕಲಿಸಲು
ನನಗೆ ನಗುವುದನು?!

ನಿತ್ಯ ನಿಘಂಟು ನೋವುಗಳು
ಅಂಜದೆ ಅಳುಕದೆ ನಿತ್ಯ ನಂದನ
ಹರಿವ ತೊರೆಯೊಳು ಕಪ್ಪುಂಟೇ?!
ಯಾರು ನೀ ಮತ್ತೂ ನನ್ನ ನಗಿಸಲು

ನಗಿಸಲು ನಿನಗಿಲ್ಲವೋ ಅವಕಾಶ
ಹುಟ್ಟು ನಗುವಿನರಸಿ
ಅಳು ಬಾರದವಳು;
ಅತ್ತರೂ ಕಣ್ತೇವ ಆರಿದವಳು!
ಯಾರು ನೀ ನಗಿಸಲು ನನ್ನ
ಯಾರು ನೀ ಮೊದಲಾಗಿ ನಗಲಾರದವನು?!

21/10/2014



''ಅವಳು''........
ಅವರು ಅಂದುಕೊಂಡರು
ಅವಳು ನನ್ನ ಬಿಟ್ಟು ಬದುಕಲಾರಳೆಂದು
ಅವರು ಅಂದುಕೊಂಡರು
ಅವಳು ಮತ್ತೆ ಮತ್ತೆ ತಿರುಗಿ ಬರುವಳೆಂದು
ಅವರು ಅಂದುಕೊಂಡರು
ಅವಳು ಹೆಣ್ಣು; ನನ್ನ ಬಿಟ್ಟು ಬದುಕಲಾರಳೆಂದು
ಅವರು ಬದುಕಲಾರರು ಈಗ
'ಅವಳು' ಎನ್ನುವ ಹೆಸರ ಬಿಟ್ಟು!

21/10/2014


############################


ಕವಿ, ಕವಿತೆ ಕಲ್ಪನೆಗಳಲ್ಲೇ
ಕಳೆದು ಹೋಗಿ
ವಾಸ್ತವದಲಿ ದಾಪುಗಾಲನಿಟ್ಟು
ಅರಿಯದ ಜೀವನದಲಿ
ಸೋಲುತ್ತಲೇ ನಗುತ್ತಿದ್ದ
ಕವಿಯ ಕಲ್ಪನೆಗಳಲ್ಲಿ ಬರೀ ಗೆಲುವೇ
ಸೋಲಿಗಂಟದ ಗೆಲುವು
ಅದೊಂದು ಮೊದಲನೇ ಸಹೃದಯ!


##############################


ದೊಡ್ಡ ದೊಡ್ಡವರೆಲ್ಲಾ ದೊಡ್ಡ ಮನೆಯಂಗಳದಲಿ
ನಾನೋ ಪುಟ್ಟ ಹುಡುಗಿ; ತಲೆ ಕೆದರಿದವಳು
ಲಂಗದಲ್ಲಷ್ಟು ಅಕ್ಕಿ ನುಚ್ಚು, ಬಾಗಿ ಬಾಗಿ ಬಾಗಿಲಿಗಿಡುವೆ
ಮುಂದಲೆ ಕೂದಲ ಒರಟಾಗಿ ಹಿಂದಕೆ ಸರಿಸುತ
ಅಂಗಳದ ಇರುವೆ ಗೂಡುಗಳಿಗೆ;
ಕಚ್ಚದವು ನನಗೆ ಮೆಚ್ಚುಗೆ ಇದೆ ಮನದೊಳಗೆ

20/10/2014

Monday 20 October 2014

ಕವನ

"ನಿನ್ನ ಮುಟ್ಟಲಾರದ ದನಿ"



ನಿನ್ನ ಮುಟ್ಟಲಾರದ ನನ್ನೀ ದನಿ

ಒಳಗೊಳಗೇ ಮರಗಟ್ಟಿದ ಪ್ರೀತಿ

ಎಂದು ಉಕ್ಕಿ ಹರಿವುದೊ ನಲ್ಲ

ಆಗಾಗ ಕಾಡುವ ಭಯವು ನನಗೆ

ನೀ ಕಾತುರದಿ ನನ್ನ ನೋಡ ಬಂದಾಗ

ನೀನೇ ಸಂಭಾಳಿಸಬೇಕಿದೆ ಮನದ ತೊಳಲಾಟ

ಅರಿತು ಈ ಮಾಯಾ ಮೋಹದ ಬೇಟ..


18/10/2014

ಕವನ

''ಪ್ರೇಮ ಕವಿತೆ''




ನೀರಿನ ಮೇಲೆ ಬರೆದ ಕವಿತೆ


ಇದು ಅಲ್ಲವೇ ಅಲ್ಲ ನಲ್ಲ;


ಹೃದಯ ತಟ್ಟಿದ ಒಲುಮೆಯದು

ನಿನ್ನ ಪ್ರೇಮ ಕವಿತೆ

ಓದಿ ಓದಿ ನಾ ನೆಚ್ಚಿ ಕೊಚ್ಚಿ ಹೋದೆನಲ್ಲ

ನಿನ್ನ ಸಾಲುಗಳ ಸುಳಿಯಲಿ ಸಿಕ್ಕಿ

ನಿನ್ನಲೇ ಉಳಿದು ಬಿಟ್ಟಿರುವೆ

ನಾನಿಲ್ಲಿ ಇಲ್ಲವೇ ಇಲ್ಲ!



17/10/2014
ಕುದುರೆಗೆ ಕಣ್ಪಟ್ಟಿ,


ದನಕ್ಕೆ ನೊಗ ಭಾರ


ಮನುಜನಿಗೆ ಚಿಂತನೆಗಳು


ಇರುವಷ್ಟೇ ಕಾಲ


ದಾರಿ ನೇರ


18/10/2014

%%%%%%%%%%%%


ಪ್ರೀತಿಸಬಹುದು, 


ಪ್ರೀತಿಸುವಂತೆ ಬಯಸಬಹುದು 


ಪ್ರೀತಿಸಿ ಕಾಯಲೂಬಹುದು


ಆದರೆ ಪ್ರೀತಿಸುವಂತೆ ಪ್ರಚೋದಿಸಲಾಗದು!


17/10/2014

Friday 17 October 2014

"ವಿಪರ್ಯಾಸ"


ಕತ್ತಲ ಪೂರ್ಣ ಅನುಭವವಾಗದ ಹೊರತು
ಜಡ ಮನವು
ಬೆಳಕಿಗೆ ಎಂದೂ ಹಾತೊರೆಯದು!

17/10/2014

%%%%%%%%%%%%

ಯಾನ..


ಹಿತವಾದ ಈ ಸಂಜೆ
ಸೂರ್ಯ ಕಿರಣ ಬಿಸಿ ಹದವು
ನೇರ ಹಸಿರ ಹಳ್ಳಿ ಸೊಗಡಿಗೆ
ಮಾತು ಮೌನಗಳ ಮೆಲುಕು
ಮಳ್ಳ ನೀ ಮನದೊಳಗೆ,,
ಹೀಗೊಂದು ಸುಂದರ ಯಾನ,,
ಕೇಳಿದೆಲ್ಲಾ ಸುಮಧುರ ಸಂಗೀತ,,  



%%%%%%%%%%


ಹುಡುಗ,

ನೀ ಹೀಗೆ ಮೌನವಾದರೆ
ನನ್ನ ಪದಗಳಿಗೆ
ದನಿ ಇಲ್ಲ..

17/10/2014


ಎಲ್ಲಕೂ ಕಾರಣಗಳಿರಬಹುದು

ಹೇಳಬಹುದು ಎಂದೊಂದಾದರೆ

ಅರಗಿಸಿಕೊಳ್ಳಲಾರದ ಅನೇಕ

ಬಗೆಯಬಾರದು ಕುತೂಹಲಗಳ

ನೊಂದುಕೊಂಡಾವೋ ನೋವುಗಳು

ಬಿಟ್ಟು ಬಿಡಿ ಅವುಗಳದರಂತೆ

ಚೇತರಿಸಲಾರದಿರೆ ಸುಮ್ಮನೆ


%%%%%%%%%%%


ನಿನ್ನ ಕಂಡೊಡನೆಯೇ ಈಗೀಗ

ಅದೇಕೊ ನಾಚಿಕೆ

ನೀನೆಲ್ಲೋ ನನ್ನ ಕನಸುಗಳ

ಮುಂಚೆಯೇ ಓದಿಕೊಂಡು ಬಂದಂತೆ!


14/10/2014

ಚಿತ್ರ



14/10/2014

ಕವನ

ಮನದಲ್ಲೊಂದು ಮೌನ



ಪ್ರೀತಿಸಬೇಕೆಂದು ಎನಿಸಿದ 

ಪ್ರತೀ ಕ್ಷಣದ ಹಿಂದೆ

ದೂರಾಗೊ ಆತಂಕ;

ಸುಮ್ಮನಿದ್ದು ಬಿಡುವೆ ಹೀಗೆಯೇ,

ಸಾಲು ಸಾಲು ದುರಂತಗಳ ನಂತರ

ಇನ್ನು ತ್ರಾಣವಿಲ್ಲ ಬದುಕಲಿ

ಕಣ್ಗಳಾದರೂ ನಗುತಿರಲಿ

ಎದುರುಗೊಳ್ಳೊ ನಗೆಗಳೆದುರು

ನಕ್ಕು ಬಿಡುವೆ ಸುಮ್ಮನೆ

ಮನದಲ್ಲೊಂದು ಮೌನ

ಹೀಗೆಲ್ಲಾ ಸೋಕಿ ಹೋಗೋ

ನಿನ್ನ ನಿಟ್ಟುಸಿರಿಗೆ..!


14/10/2014

ಮನಸಿಗಷ್ಟು ಮುದ ಕೊಡುವ


ಸಣ್ಣ ಸಣ್ಣ ಕುತೂಹಲ-ಮೆಚ್ಚುಗೆಗಳು

ಬಹುಶಃ ದೊಡ್ಡ ದೊಡ್ಡ ತಲೆನೋವುಗಳಿಗೆ ಮದ್ದು!! 

ಕವನ

ದಂಗೆ ಏಳಲಾರದ ಅಸಹಾಯ ಸ್ಥಿತಿಗೆ

ನಾ ಸಂತಳೆಂದು ಹೇಳಿಕೊಂಡೆನು

ನನ್ನಲೂ ಆಸೆಗಳಿವೆ ಅವು ಅವಕಾಶಗಳ ಬೇಡುತ್ತಲಿವೆ

ಸಮಯ ದೂಡಿರುವೆ ಬಲಿಯಲು

ಕೋಪವೆಂಬ ಕಿಚ್ಚಿದ್ದ ಕಾರಣ

ಸಾಧುವಲ್ಲ ನಾ

ತಾಮಸವಾದಿ ಭುಗಿಲೇಳುವವರೆಗೂ!

ತಡೆದು ತಡೆದು ನಿಂತ ಭೂ ಗರ್ಭದ

ಜ್ವಾಲಾಮುಖಿಯು ನಾನು!



13/10/2014

ಕವನ

ನಿತ್ಯ ನೂತನ ಆಸೆಗಳಲಿ
ಕರಗಿಸಲಿ ಹೇಗೆ ನಾ ಕನಸುಗಳ
ಕಾಣಬಾರದೆಂದು ಎಷ್ಟು ಬಿಗಿಹಿಡಿದರೂ
ರೆಪ್ಪೆ
ಅದ್ಯಾವ ಮಂಪರಿನಲಿ
ತೆರೆದುಕೊಳ್ಳುವುದೋ ಕನಸಿಗೆಬತ್ತಿ ಹೋದ ಪ್ರೀತಿಗೂ
ನೆನಪುಗಳ
ಬಸಿದುಕೊಂಡ ರೀತಿಗೂ
ಸೋಜಿಗದೂರಿನ ಆಹ್ವಾನ
ಇನ್ನೆಷ್ಟು ತಡೆಯಿಡಿಯಲಿ ನಿದಿರೆ
ಇನ್ನೆಷ್ಟು ಬಿಗಿದು ಹಿಡಿಯಲಿ ರೆಪ್ಪೆ
ಜಾರುತಿದೆ ಮನಸ್ಸು ಕನಸಿನೂರಿಗೆ
ಅರೆ ಬೆಂದ ಇಟ್ಟಿಗೆಗಳೊಂದಿಗೆ
ಬೆಂದುಕೊಳ್ಳೊ ಗೂಡಿಟ್ಟು
ಕಾಯಬೇಕಿದೆ ಸೂಕ್ತ ನೆಲೆಗೆ
ಇಟ್ಟು ಮನಸ ಹರವಲೊಂದು
ದಿಟವಾದ ದಿಟ್ಟ ದೀವಿಗೆ!..


13/10/2014

ಕವನ




ನನ್ನ ಎತ್ತರವನ್ನು ನಾನು ತಗ್ಗಿಸಿಕೊಂಡೆ


ಅವನು ತಗ್ಗೇ ಇದ್ದಂತೆ ಕಂಡು ದೂರದಲ್ಲಿದ್ದ


ಹತ್ತಿರಾದಂತೆ ವ್ಯತ್ಯಾಸಗಳು ಹೆಚ್ಚಾಯ್ತು


ನಾ ತಗ್ಗಿದ್ದು ಇನ್ನೂ ನೆಲ ಸಮವಾದಂತೆ 


ಈಗ ಹತ್ತಿರಾದ ಅವನ ಮುಂದೆ,, 

ತಗ್ಗಿದ್ದು ತಪ್ಪೇ? ಇಲ್ಲ ಹತ್ತಿರಾಗಿದ್ದು?

ಇನ್ನೂ ಚಿಂತಿಸುತ್ತಲಿರುವೆ,,

ಎಲ್ಲಿ ನಾನಿದ್ದೆ ಈಗೆಲ್ಲಿರುವೆ,,

ನೆಲದಡಿಯಲಿ.....


12/10/201

Saturday 11 October 2014

ಕವನ

ಅಲೆಗಳೆದುರಿಗೆ ಈಜುವ ಈಜುಬಾರದವಳು!
ಸದಾ ನೀರಿಗೆ ಹಾತೊರೆಯುವಳು!
ದಿನ ಬೆಳಗಾದರೆ ತೊರೆಯೊಳು ಧುಮುಕೋ ಮೋಜಿನವಳು!
ಈಜುಬಾರದವಳು, ಈಜದೇ ದಡ ಸೇರದವಳು!
ಮೀನುಗಾರರ ಕಣ್ಣಿಗೆ ಕಸರತ್ತಿನ ಪಟು ಅವಳು!
ನೀರ ತೊರೆಯ ಸುತ್ತಲೇ ಅಲೆದು,
ನೀರ ಮುಟ್ಟಿ ಈಜಲಾರದ ಸ್ಥಿತಿಗೆ ಏದುಸಿರಿನವಳು!
ಮುಳುಗಿ ನೋಡಿ, ಮತ್ತೆ ಮತ್ತೆ ಮುಳುಗೋ ಅವಳು
ಛಲ ಬಿಡದೆ ಈಜು ಕಲಿಯದೇ ತೇಲಿ ಹೋಗೋ ನೀರ ಮೇಲಣ ಆವಿಯಾದವಳು,,,,,,,,,

11/10/2014

ಕವನ



ಹೀಗೆಯೇ ಅಲೆಯುತಿದ್ದ ಮನಕೆ
ಎದುರಾದ ತಂಗಾಳಿ ಹಾಯ್ ಎನಿಸಿ
ಮನದಲ್ಲೆಲ್ಲಾ ಕೋಲಾಹಲ

ನೆನಪುಗಳ ಸುತ್ತ ಹೊರಳಾಟ,
ಹೊಸ ಕನಸುಗಳ ಜೂಟಾಟ,

ಇದ್ದಷ್ಟು ಕಾಲ ತಂಗಾಳಿ
ತೆಪ್ಪಗೆ ತಂಪಾಗಿರುವೆ
ಕಟ್ಟಿಹಾಕಿದಂತೆ ಗಾಳಿಯ ಮೋಡಿಗೆ..
ಆ ಹಳೆಯ ಬಿರುಸು ನೆನಪುಗಳಿಗೆ

ಎಷ್ಟು ಕಾಡುತ್ತವೋ ಕಾಡಲಿ,,
ಗಟ್ಟಿಗಿತ್ತಿ ನಾ ಕಾಡಿಸಿಕೊಳ್ಳಬಲ್ಲೆ
ಇದ್ದಷ್ಟು ಕಾಲ ಹಾಗೆಯೇ
ಸದಾ ನಕ್ಕು ನಲಿವ ಎನ್ನ ಮನದೊಂದಿಗೆ!




ಪ್ರತೀ ಹಂತಗಳಲ್ಲೂ
ತಮ್ಮನ್ನು ತಾವು
ಸಾಬೀತುಪಡಿಸಿಕೊಳ್ಳುವುದು
ಮುಜುಗರಕ್ಕಿಂತ
ದುಃಸ್ಥಿತಿ ಎನ್ನಬಹುದು,,,!

%%%%%%%%

ನಿನ್ನ ಪ್ರೀತಿಯೋ
ಇಲ್ಲ
ನೀ ಬರೆಯೋ
ಅಕ್ಷರ ಪ್ರೀತಿಯೋ
ಒಟ್ಟಿನಲ್ಲೊಂದು ಪ್ರೀತಿ
ಇದೆ
ಈ ಜೀವಕೆ,!

%%%%%%%%%%%%%%

ನಿಲ್ದಾಣವೆನ್ನುವುದು ಹೆಸರಿಗಷ್ಟೇ
ಆ ನಿಲ್ದಾಣಕ್ಕೆ ನಾವೇ ನಡೆದು ಹೋಗಬೇಕು
ಬಸ್ ಹಿಡಿಯಲೇಬೇಕೆಂಬ ಉದ್ದೇಶವಿದ್ದರೆ,
ಹಾಗೆಯೇ ಈ ಹುಚ್ಚು ಪ್ರೀತಿ,,

%%%%%%%%%%

ಕೆಲ ಹೊತ್ತಿನ ಪ್ರೀತಿಗಾಗಿ
ದೇಹ ತ್ಯಜಿಸೊ ಮನಸ್ಸಿಗೆ
ನನ್ನದು ಸಹಗಮನವಾದರೂ
ಆತ್ಮತೃಪ್ತಿ ಇರುವುದೇನೋ!!

%%%%%%%%%

ಮರೀಚಿಕೆಗೂ ಪ್ರೀತಿಗೂ
ಅದೇನು ಸಾಮ್ಯತೆ?!...
ಪ್ರೀತಿಯ ಕೈಹಿಡಿದು
ನಡೆದ ದಾರಿಯೆಲ್ಲಾ
ಕಾಮದ ಮುಳ್ಳುಗಳು!
ಹೆಜ್ಜೆ ಇಡಲಾರದ ಸ್ಥಿತಿಗೆ
ಹಬ್ಬಿಕೊಂಡ ಬೇಲಿ,
ಮಾತು ಬರಬಾರದಿತ್ತು
ನಾಲಿಗೆ ಕಿತ್ತು ಹೋಗಿದೆ
ಅಂದವಿರಬಾರದಿತ್ತು
ಮನವು ಗೋಳಿಟ್ಟಿದೆ..

10/10/2014

%%%%%%%%%%%%%%%%

ಪ್ರೀತಿ ಎಂಬುದು ಹುಡುಕಾಟದಲ್ಲಿಯೇ ಇರಬೇಕೇನೋ
ಸಿಕ್ಕಿಬಿಟ್ಟರೆ ಮನಸ್ಸು ಸೋಮಾರಿಯಾಗೋ ಭಯವೇನೋ

%%%%%%%%%%%%%%%%%%%

ಮೌನವಾಗಿ ಒಂದಷ್ಟು ದೂರ ಕೈಹಿಡಿದು ನಡೆ
ಪ್ರೀತಿಯ ಪರಿಭಾಷೆ ಅರಿವಾಗುವುದು,,
ನನ್ನಯ ಕೈ ಬಿಸಿಯೂ ಮಾತಾಗುವುದು
ಕಿವಿಯಾಗುವ ನಿನ್ನದೆ ಬಡಿತವೂ
ಪದೆ ಪದೆ ನನ್ನ ಮನದ ಪ್ರತಿಧ್ವನಿಯೇ ಆಗುವುದು!

%%%%%%%%

ಮೂಕವಾಗಿಸೊ ಪ್ರೀತಿ
ಪದಗಳಲ್ಲಿ ನಿಲುಕದು
ಅಬ್ಬರವಾಗುವ ಮಾತು
ಸೆಳೆತದ ಉನ್ಮಾದ!

09/10/2014

ಕವನ

ಎಲ್ಲೆಲ್ಲೋ ಹುಡುಕಿದ್ದು ಹಿತ್ತಲಲ್ಲಿ ಕಂಡದ್ದು
ಪ್ರೀತಿ-ಶಾಂತಿ-ನೆಮ್ಮದಿ!


ಚೊಕ್ಕಟಕೊಂಡ ಮನಸ್ಸು ಕೊಟ್ಟಿದ್ದು
ನೋಡಿದೆಲ್ಲವೂ ಸುಂದರವೆನಿಸುವಷ್ಟು
ಆತ್ಮ ಶುದ್ಧಿ!


ಕಾಲ ಕೆಳಗೂ ಅವಿತಿರುವ ಭವ್ಯ ಖನಿಜ ತಿಳಿಸಿದ್ದು
ತಲೆ ಬಾಗಿ ದಕ್ಕಿಸಿಕೊಳ್ಳುವ ಸೌಜನ್ಯ-ಪರಿಶ್ರಮ!


ಎದುರಾಗೊ ಅವಮಾನಗಳು ಕಲಿಸಿದ್ದು
ನೆಟ್ಟಗೆ ನಿಲ್ಲುವ ಸ್ವಾಭಿಮಾನ!


ನಿಂದನೆ-ತಿರಸ್ಕಾರಗಳು ಕೊಡುಗೆ ಕೊಟ್ಟದ್ದು
ಮರೆವು ಮತ್ತು ಬಿಟ್ಟುಬಿಡುವ ಪ್ರವೃತ್ತಿ!!

09/10/2014

ಕವನ

ಈ ಹೊತ್ತಿಗೆ


ಉದಯ ರವಿ ಮರೆಯಲಿ ನಿಂತು

ಕಳೆದಿರುಳ ಎನ್ನ

ಕನಸ ಕದ್ದು ಕೇಳಿದ ಹಾಗೆ



ನೀನಿನ್ನೂ ರಶ್ಮಿ ಚೆಲ್ಲಿರುವೆ

ನೆರಳಲೇ ಕುಳಿತು ನಾ

ಪದ ಕಟ್ಟಿ ಹಾಡಿರುವೆ


ಕಪ್ಪೊಳಗೊಂದು ಪ್ರೇಮ ಕಿಡಿ

ಹೊತ್ತಿಕೊಳ್ಳುವುದೇ

ಬೆಳಗುವುದೇ ಕನಸು

ಈ ಹೊತ್ತಿಗೆ...?!



ಚಿತ್ರ ಕೃಪೆ; ಜಿ ರಾಮಚಂದ್ರ ಐತಾಳ ರವರು



09/10/2014

Friday 10 October 2014

ಮನದ ಮಾತು

ಪ್ರೀತಿ-ಪ್ರೇಮ-ಪ್ರಣಯ!


ಹರಯದಲ್ಲಿ ಉಕ್ಕುವ ಅನ್ಯ ಲಿಂಗದೆಡೆಗಿನ ಮಮತೆಯು ಪ್ರೀತಿ ಎನಿಸಿಕೊಂಡಿದ್ದರೂ ಅದು ಬಹಳಷ್ಟು ಬಾರಿ ಕೇವಲ ಹೆಣ್ಣಿನ ಅಭಿಪ್ರಾಯಗಳಷ್ಟೇ. ಗಂಡು ಪ್ರೀತಿ ಪ್ರೇಮವನ್ನು ಕೇವಲ ಮೋಹವಾಗಿಯಷ್ಟೇ ಪರಿಗಣಿಸುತ್ತಾನೆ. ಸುಳ್ಳು ಎಂದೆಲ್ಲಾ ವಾದಿಸಿದರೂ ಅವರವರ ಆಂತರ್ಯದ ನಿಷ್ಠೆಗೆ ಬಿಟ್ಟದ್ದು. ಕಳೆದ ವರ್ಷವಷ್ಟೇ ಮದುವೆಯಾದ ನನ್ನ ಗೆಳತಿಯೊಬ್ಬಳು ಭೇಟಿ ಮಾಡಮಾಡಲೆಂದು ಬಂದಿದ್ದಳು. ಹೊಸ ಮದುವೆ ಬಹುಶಃ ಖುಷಿಯಾಗಿರಬಹುದೆಂದು ನಾನು ಊಹಿಸಿದ್ದೆ. ಬಂದಳೋ ಅಳಲಾರದೆ ನಗುತ್ತಿದ್ದಳು. ನನಗೋ ಏನು ಮಾಡಬೇಕೆಂದು ತಿಳಿಯಲಿಲ್ಲ,, ಅವಳ ಒಂದೊಂದು ಮಾತುಗಳು ಜೀವನದ ಒಂದೊಂದು ಪದರಗಳನ್ನು ಬಿಚ್ಚಿಟ್ಟಂತೆ ನನಗೆ ನಂಬಲಾರದ ಗುಟ್ಟುಗಳು!. ನೋಡಲು ಅಷ್ಟೇನು ಅಂದವಿಲ್ಲದ ಅವಳ ಗಂಡ, ಸುಂದರವಾದ ಹೆಂಡತಿಯನ್ನು ಮಾತನಾಡಿಸಲೂ ಮುಂದಾಗನಂತೆ. ಕೇಳಿದರೆ ಜಗಳ. ಹೊರಗೆಲ್ಲೋ ಸುತ್ತಾಡಿಕೊಂಡು ಸುಸ್ತು ಎಂದು ಎಲ್ಲೆಂದರಲ್ಲಿ ಹಾಲಿನಲ್ಲಿ ಮಲಗಿಬಿಡುತ್ತಾನಂತೆ. ರಾತ್ರಿ ಒಂದು ಗಂಟೆಯಾದರೂ ಒಳಗೆ ಬಾರದ ಗಂಡನನ್ನು ಕಾದು ಅದು ಯಾವಗಲೋ ಇವಳು ಮಲಗಿಬಿಟ್ಟಿರುತ್ತಾಳೆ. ಇಷ್ಟೆ ಅಲ್ಲದೆ ಕಂಡ ಕಂಡ ಹೆಣ್ಣುಗಳನ್ನೆಲ್ಲಾ ತನ್ನೆದುರೇ ಹೊಗಳಿ, 'ಪ್ರಪಂಚದಲ್ಲಿ ನಿನ್ನ ಬಿಟ್ಟು ಮಿಕ್ಕ ಎಲ್ಲರೂ ನನಗೆ ಒಳ್ಳೆಯವರೇ, ಇಷ್ಟವಾಗುವವರೆ',, ಎಂದು ಬೇರೆ ಮೂದಲಿಸುತ್ತಾನಂತೆ. ಸುಂದರವಾಗಿ ಸಿಂಗರಿಸಿಕೊಳ್ಳುವುದೂ ಇಷ್ಟವಿಲ್ಲವಂತೆ. ಮದುವೆಗೆ ಮುನ್ನ ನಮ್ಮೆಲ್ಲರಿಗಿಂತಲೂ ಸುಂದರವಾಗಿ ಕಾಣುತ್ತಿದ್ದ ಅವಳು ಈಗ ಅನಾರೋಗ್ಯದೊಂದಿಗೆ ನಿಶ್ಚೇತನಳಾಗಿ ಕಾಣುತ್ತಿದ್ದಾಳೆ. ಅವಳೀಗ ತನ್ನ ತವರು ಮನೆಯಲ್ಲಿ; ಗಂಡನು ವಿಚ್ಛೇದಕ್ಕಾಗಿ ಕೋರ್ಟಿನಲ್ಲಿ. ಹೊಂದಿಕೊಳ್ಳಲಾಗದಿರಲು ಅಥವಾ ಪ್ರಯತ್ನಿಸದಿರಲು ಕಾರಣವೇನು? ಅವನು ಹೇಳನು, ಇವಳು ನಂಬಳು. ಗಂಡನಿಗದು ಬೇಡದ ಮದುವೆ. ಹೆಸರಿಗೊಂದು ಮದುವೆ ಬೇಕಿತ್ತು ಅಷ್ಟೇ ಅವನ ಉದ್ದೇಶವೂ. ಇದನ್ನು ಯಾವ ಸಮಾಜ,, ಯಾವ ಕಾನೂನು ಅರಿತು ಆ ಹೆಣ್ಣಿಗೆ ತೀರ್ಪುಕೊಡುವುದು? ಎಲ್ಲಿದೆ ನ್ಯಾಯ?!!!

ಇಲ್ಲಿನ ಕೊರತೆಯೆಂದರೆ ಪ್ರೀತಿ-ವಿಶ್ವಾಸದ್ದು ಹಾಗೆಯೇ ಪ್ರಣಯವೂ.. ಮದುವೆಯಲ್ಲಿ ಬಹು ಮುಖ್ಯ ಪಾತ್ರವಹಿಸೋ ಪ್ರಣಯ-ಮೋಹವು ಅಲ್ಲಿ ಕೈಕೊಟ್ಟಿದೆ ಎಂದಷ್ಟೇ ತಿಳಿಯಬಹುದು..

ಜೀವಿಯೂ ಬಯಸುವುದು ನಿಜವಾಗಿಯೂ ಪ್ತೀತಿಯೇ,, ಎಷ್ಟೋ ಜನರು ಪ್ರೀತಿಗಾಗಿ ಮದುವೆಯಾಗಿ ಒಟ್ಟಿಗಿದ್ದಾರೆ ಮಕ್ಕಳಿಲ್ಲದೆ. ಪ್ರೀತಿಗಾಗಿ ಮದುವೆಯಾಗಿದ್ದಾರೆ ಸಂಗಾತಿಗಲ್ಲಿ ಆಯುಷ್ಯವಿಲ್ಲದಿದ್ದರೂ. ಬಹುಶಃ ಇಂತಹ ಮನೋಸ್ಥಿತಿಗಳು ಆ ಉಚ್ಚ ಮಟ್ಟದ ಜೀವಗಳಲ್ಲಿ ಮಾತ್ರವೆನ್ನಬಹುದೇನೋ!. ಪ್ರೀತಿಯನ್ನು ಹಂಬಲಿಸಿ ಕೊರಗುವ ಮನಸ್ಸುಗಳಿಗೆ ಪ್ರೀತಿಯು ಸಿಗುವುದೇ ಇಲ್ಲವೇನೋ ಎಂದೆನಿಸುವುದು ಬಹಳಷ್ಟು ಬಾರಿ. ಆ ಕಾರಣ ಅದರ ಹಂಬಲವನ್ನು ತೊರೆದು ಬದುಕವುದು ಸರಿಯೆನೋ. ನಮ್ಮನ್ನು ಗೌರವಿಸುವ ಸಮಾಜಕ್ಕೆ ಮಿಡಿವ ಹೃದಯವಾಗಿ ಮತ್ತೂ ಅಷ್ಟೇ ಗಟ್ಟಿಯಾಗಿ ನಿಲ್ಲಬೇಕು. ಪ್ರೀತಿಯೆಂಬುದು ನಮ್ಮ ದೌರಬಲ್ಯವಲ್ಲ. ಹಾಗೆಯೇ ಇತರರಿಗೂ ಅದು ನಮ್ಮ ದೌರ್ಬಲ್ಯವಾಗಿ ಕಾಣುವುದು ಕಾಡುವುದೂ ಬೇಡ. ನಾವು ನಮಗಿದು ಬೇಕಿದೆ ಎಂದಾಗಷ್ಟೇ ಕೊಡುವ ನೆಪಗಳು ಮತ್ತದರ ಹಿಂದೆಯೇ ಬರುವ ಅವರ ಸ್ವಾರ್ಥಗಳು ನಮ್ಮ ಜೀವನವನ್ನು ಮತ್ತೂ ದುಸ್ತರಗೊಳಿಸಿಬಿಡುತ್ತದೆ.

ಜೀವನಕ್ಕೆ ಪ್ರೀತಿ ಬೇಕಿದೆ ಅದಕ್ಕಾಗಿ ಸಮಾಜದಲ್ಲಿ ಹಾತೊರೆವ ಮಕ್ಕಳಿದ್ದಾರೆ. ಪ್ರೀತಿಯೆಂಬುದು ಬಹುರೂಪಿ ಎನ್ನುವದನ್ನು ಮತ್ತೆ ನೆನಪಿಸಬೇಕಿಲ್ಲವಲ್ಲ,,

ಪ್ರೀತಿಸಲು ಶೋಷಿತರಿದ್ದಾರೆ ಅಬಲೆಯರಿದ್ದಾರೆ..ಪ್ರೀತಿಸಿಕೊಳ್ಳಲು ವೃದ್ಧರಿದ್ದಾರೆ. ನಿರ್ಮಲವಾದ ಪ್ರೀತಿಯನ್ನಷ್ಟೇ ಬಯಸೊ ಜೀವಿಗಳು ಇನ್ನೂ ಇದ್ದಾರೆ ನಮ್ಮಂತೆಯೇ. ಸೇರಿಕೊಳ್ಳಲು ಮನಸ್ಸಿರಬೇಕು. ಗುರುತಿಸಲು ನಮ್ಮೊಳಗಣ್ಣು ತೆರೆದಿರಬೇಕಷ್ಟೆ. ಒಂಟಿತನಕ್ಕೆ ಕಾಮ-ಮೋಹವೇ ಮದ್ದಲ್ಲ. ಪ್ರೀತಿಸುವ ಮನಸ್ಸೊಂದೇ ನಿಜ ಸಂಗಾತಿ!!

''ಹರೆಯದ ಪ್ರೀತಿ, ತೊರೆಯುಕ್ಕೋ ರೀತಿ
ಹಸಿದವಗೆ ಹೊಟ್ಟೆಗೆ ಬಿದ್ದ ರೊಟ್ಟಿ!
ಪ್ರೀತಿಯಂದರೇ ಇದುವೇ ಏನು?!

ಹಾಗಿದ್ದರೆ...

''ಹಸಿವಿರಲಿ ನೋವಿರಲಿ
ಮನದಲೊಂದು ಸುಂದರ ನೆನಪಿರಲಿ
ಪ್ರೀತಿ ತುಂಬಿದ ಅವನ ಚೇತನಕೆ''...

ಜೀವನವು ತುಂಬಾ ಸುಂದರವಾಗಿದೆ. ನಮ್ಮೊಳ ಮನಸ್ಸು ನಿರ್ಮಲವಾಗಿದ್ದರಷ್ಟೆ. ನಿರ್ಮಲತೆಗೆ ಪ್ರೀತಿಯ ಗಂಧ ಸಾಕು, ಮೋಹದ ಮಧುವಿಲ್ಲದಿದ್ದರೂ...

ಕೊನೆಯದಾಗಿ ಹೇಳುವುದಾದರೆ ಪ್ರೀತಿ-ವಿಶ್ವಾಸವೆಂಬುದು ಶಾಶ್ವತ, ಉಳಿದಂತೆ ಎಲ್ಲವ ಮೀರಿ!.  
10/10/2014 

Thursday 9 October 2014

ಕವನ

ಬಿಳಿಯ ಹಾಳೆಗಳು



ಅವನು ಬರೆಯುವವನಾದರೆ,

ಅವನ ಸೀಸದ ಕಡ್ಡಿಯ ಚಿತ್ರಕೆ

ನನ್ನದು ಬಳಪದ ಬಣ್ಣಗಳು

ಆದರೂ ಮೆಚ್ಚುವನು ನನ್ನ,



ನಾನೇ ಬರೆಯುವವಳಾದರೆ

ಬಿಳಿ ಗೋಡೆಯ ಮೇಲಿನ 

ನನ್ನ ಇದ್ದಿಲ ಚಿತ್ತಾರಕೆ

ಅವನು ಆಗಸದಗಲ ಹಬ್ಬೊ 

ಕಾಮನಬಿಲ್ಲು,



ಮೆಚ್ಚದಿರಲು ನಾ ಅವನ 

ಕಾರಣವಿಲ್ಲ,

ಇದು ನನ್ನೊಳ

ಆ ನಮ್ಮಿಬ್ಬರ ಬಣ್ಣಗಳು,

ಚಿತ್ರವಾಗಿ ಮೂಡಲು

ಕಾದಿವೆ ನಿನ್ನ.. !

ಈ ಬಿಳಿಯ ಹಾಳೆಗಳಲಿ..!



09/10/2014

ಚಿತ್ರ ಕವಿತೆ

ಮಳೆ ಮತ್ತು ಸಿಡಿಲು

ಮಳೆ ಮುಗಿಲು ಇಳೆ ಕೆದರಿ

ಮಿಂಚು ಗುಡುಗಿ, ತೊರೆಯುಕ್ಕಿ

ಅಲ್ಲೋಲ್ಲ ಕಲ್ಲೋಲವೀ ಸಮಯ

ಭಾವವೆಲ್ಲಾ ಚದುರಿ ಚಿತ್ತಾರ

ನಿಶೆಯ ನಶೆಯಲಿ ಕಾಣದೊಂದೂ ಬಣ್ಣ


ಅಂತರಂಗದ ಚದುರಂಗ

ಬರೀ ಕಪ್ಪು-ಬಿಳುಪು

ಬಣ್ಣ ತುಂಬಿಕೊಳ್ಳುವ ಕಣ್ಣಿಗೆ

ಕಪ್ಹಿಡಿದು ಬೆಳಕು ಕಾಣದಯ್ಯ!



-DA


08/10/2014