Wednesday 15 April 2015

ಬದುಕಲಿ ಆಸಕ್ತಿ ಉಳಿಸಿಕೊಳ್ಳಲು
ಕವಿತೆ ಕೈಗೆ ಹೆಣೆದುಕೊಂಡಿತು
ಕಲ್ಪನೆ ಗರಿ ಕೆದರಿತು
ಯಾರು ಏನೆನ್ನುವರೋ ಯೋಚಿಸದೆ
ಭಾವನೆಗಳು ಹಸಿಯಾಗಿ
ಭಿತ್ತಿಯೊಳು ಬಿತ್ತಿಕೊಂಡಿತು
ಕೈಕೊಡವಿಕೊಳ್ಳುವುದಾದರೆ ಅದು
ಕೊಳದೊಳಗೆ ಹರಿಯದೇ ನಿಂತಂತೆ ನೀರು
ಮಡಿಕೆಯೊಳಗೆ ಉಳಿದು ಮೆದುಳು

14/04/2015

ಈ ಸಂಜೆಯ ಮಳೆಯನು
ಅನುಭವಿಸದಾದೆ
ಎಲ್ಲಿ ನಿನ್ನ ಕುರಿತು
ಬರೆದುಬಿಡುವೆನೋ
ಎನಿಸಿ...

*****

ಅಪಾರ್ಥಗೊಂಡ ಉತ್ತರಗಳು
ಎಂದಿಗೂ
ನನ್ನ ಪ್ರಶ್ನೆಗಳ ನಿರೀಕ್ಷೆಯ
ತಲುಪದಿರಲಿ
ನನ್ನದೇ ದಡ್ಡತನಕ್ಕೆ
ಪ್ರಶ್ನೆಗಳು
ಮೌಲ್ಯ ಕಳೆದುಕೊಂಡು
ಅವರೆದು
ನನ್ನ ಅವಮಾನಿಸದೆ..

****

ಬೇಕಿತ್ತು
ಇಲ್ಲದೆಯೂ ನಡೆಯುತ್ತಿತ್ತು
ಎನ್ನುವುದರ ನೆಡುವೆ
ಸಿಕ್ಕರೆ
ಎಂದಿಗೂ
ಏನೂ
ಪಡೆದ
ನೆಮ್ಮದಿ
ಇರುವುದೇ
ಇಲ್ಲ
ನಾನು
ಬೇಡವಾಗಿಯೇ
ಉಳಿಯಲಿಚ್ಛಿಸುವೆನು...

****

ಉಬ್ಬುವುದೂ ಇಲ್ಲ ತಗ್ಗುವುದೂ ಇಲ್ಲ
ಈ ದಾರಿ
ಕುಡಿದ ನೀರೇ ಅಲುಗಾಡದು
ಈ ದಾರಿ
ಬಲು ಸೋಮಾರಿ...

14/04/2015

*****

ಪ್ರಶ್ನೆಗಳಿದ್ದವು
ಉತ್ತರವೇ ಇರಲಿಲ್ಲ
ಈಗ 
ಉತ್ತರಗಳೋ ಉತ್ತರಗಳು
ನನ್ನದು 
ಪ್ರಶ್ನೆಗಳೇ ಇಲ್ಲ. .

******

ಹೆಚ್ಚೆಚ್ಚು ಕೂಡಿಟ್ಟಿದ್ದೆ
ಎಲ್ಲವೂ ಮಾಯ
ಅದ್ಯಾರದೋ ಕೈಲಿ ಜೋಲಿ
ಈಗೇನೂ ಕೂಡಿಡುವುದಿಲ್ಲ
ಬಿಸಿಲಿಗೆ ಹರಡಿ
ನೋಡಿ ಆನಂದಿಸುವೆನು
ಅದರೊಳು ಕೆಲವು ಆವಿ
ಕೆಲವು ಅರಳಿ 
ಉಳಿದುಕೊಂಡವು ನನ್ನಲಿ

13/04/2015

ಕವನ

ಮಳೆ..


ಮೊನ್ನೆಯ ಮಳೆ
ಇನ್ನೂ ಹಸಿಯೇ
ಈ ಸಂಜೆಗೂ 
ಅಂತಹುದೇ ಮಳೆ

ಹೊತ್ತಿಗೂ ಮುನ್ನ
ತಂಪಾದ ಇಳೆಯೊಂದಿಗೆ
ಇಳಿಯುತ್ತಿದೆ ಮನವು
ಅಮಲಿನಂತ ನೆನಪಿನೆಡೆಗೆ..

ಕತ್ತಲಿತ್ತು ನಗೆ ಕಾಂತಿಯೂ
ಮಾತು ಮೌನವೂ
ಹುರುಪು ಆತಂಕವೂ
ಕನಸಿನ ಸರಕುಗಳೂ

ಮಳೆಯು ಎಲ್ಲವನ್ನೂ
ಒಟ್ಟುಗೂಡಿಸಿತ್ತು..
ಟ್ರಾಫಿಕ್ ಜಾಮನ್ನೂ 
ಗಲಭೆ ಹಾರನ್ನೂ
ಗುರುತು ಹಚ್ಚಲಾರದ ದಾರಿಯನ್ನು
ಜೊತೆಗೆ ಪ್ರೀತಿಯನ್ನೂ..

13/04/2015

ಕವನ

ಕೊಳಲು ದನಿ


ಕೈ ಬಿಟ್ಟು 
ಹೋಗುವ ಕೃಷ್ಣನ
ಇನ್ನೆಷ್ಟು ಹಿಡಿಯುವಳು 
ರಾಧೆ

ಕೈ ಜಾರಿ 
ಕೈಯೊಳುಳಿದ 
ಕೊಳಲ ಹಿಡಿದು
ನುಡಿಸಲಾಗದ 
ನಿರ್ಭಾವುಕತೆಗೆ
ಕೊಳಲ ನೀರಿಗೆಸೆದಳು

ಅಂದಿನಿಂದ 
ನದಿಯೇ ಕೊಳಲ ದನಿಯಾಗಿ
ಮೊರೆಯುತ್ತಿದೆ
ರಾಧೆಯೂ 
ಎಂದಿನಂತೆ ಕೊಳಲ ನಾದಕೆ
ದಡದ ವಾಸಿ..



ಚಿತ್ರ ಕೃಪೆ; ಅಂತರ್ಜಾಲ


ಬೆಳಗು ಬೆಳಕ ಚೆಲ್ಲಿದೆ
ನೆನ್ನೆಯ ನಿನ್ನ ಕನಸಿಗೆ

13/04/2015

****

ಈಗೆಲ್ಲಾ ಮಳೆಯ ಮೋಡಗಳು
ಬಾನೆಲ್ಲಾ
ರಮಿಸಲು ಅವನಿಲ್ಲ
ಚಂದಿರ,,,

****

ದ್ವೇಷಿಸುವ ಕಣ್ಗಳಿಗೆ
ನಿಲುಕುವವರೆಗೂ
ಅಷ್ಟೇ ಗುರಿ
ಅದರಾಚೆಗೆ ಅದರ ದೃಷ್ಟಿ ಹಾಯದು........

12/04/2015

ಕವನ

ನದಿ


ಬತ್ತುವವರೆಗೂ ನದಿ
ಹರಿಯುತ್ತಲೇ ಉಳಿವುದು
ಆಗೊಮ್ಮೆ ಈಗೊಮ್ಮೆ
ಅಲ್ಲಲ್ಲಿ ಅಣೆಕಟ್ಟುಗಳು
ತಡೆದು ತುಂಬಿಕೊಂಡು
ಮತ್ತೂ ಹಿಡಿಯಲಾರದೆ
ಬಿಟ್ಟುಬಿಡುವವು
ಹೀಗೆ ಹರಿದು ಬಿಡಲು....
ನದಿಯೆಂದರೆ ನನಗಿಷ್ಟ
ಅದರೊಟ್ಟಿಗೆ ಹರಿದು ಬಿಡಲು...
ತಿಳಿಗೊಳ್ಳುತಾ ನಡೆದು...

12/04/2015

Sunday 12 April 2015

ಕವನ

ತೀರದ ನಿರೀಕ್ಷೆಗಳು


ನನಗನಿಸುತ್ತದೆ
ನನ್ನದು ಅತಿಯಾದ
ತೀರದ ನಿರೀಕ್ಷೆಗಳೆಂದು
ಅದಕ್ಕೆ ಆಗಾಗ
ನಿನ್ನ ದೂರುವೆ..

ನೀ ದೂರಾಗದಿರು
ಒಂದು ಮಲ್ಲಿಗೆ
ಒಂದು ಮಳೆಯ ಹಬೆ ಸಾಕು
ಮೋಡ ಕರಗಿಬಿಡಲು.. 
ನೀ ಹಾರದಿರು ಅಷ್ಟೇ 

12/04/2015

ಕವನ

ನಿನ್ನ ಹುಡುಕಲೊಲ್ಲೆ


ಮಳೆಯ ಹುನ್ನಾರದ
ಈ ನವಿರು ಹವಾಮಾನ

ಮನದೊಳಗೆ ಹಾಲುಕ್ಕೋ
ಕಲ್ಪನೆ ಕಲರವ

ಈ ಹೊತ್ತಿನ ನನ್ನದೇ
ನೆಚ್ಚಿನ ಬೆಂಡೆಯ ಹುಳಿ...

ಘಮಗುಡುತ್ತಿದೆ 
ಸಂಜೆಯ ಹೂ ಮಲ್ಲಿಗೆ..

ನಿನ್ನನು ಮಾತ್ರ ಹುಡುಕಲೊಲ್ಲೆ
ಸಿಕ್ಕಿ ಕವನಗಳನ್ನೇ ತಿಂದುಬಿಡುವೆ..

12/04/2015

ಹನಿ




ಅಮೃತದಲ್ಲೇ ಕೈಯದ್ದಿ
ಬಾಯಿಗಿಡುವ ಹೊತ್ತಿಗೆ
ಋಣವಿದ್ದಷ್ಟೇ ದಕ್ಕುವುದು
ಬೆರಳೊಳುಳಿದ ಕೆಲವೇ ಹನಿಗಳು..

07/04/2015

ಕವನ

ನನ್ನವರು

ಮರೀಚಿಕೆಯ ಆಸೆಗೆ
ಮರುಳುಗಾಡಿನಲ್ಲಿಯೇ ಉಳಿದದ್ದು
ನನ್ನ ತಪ್ಪು
ತೆವಳಿ ಹೊರ ಬರುವ
ಸಾಮರ್ಥ್ಯವ ಮರೆತು..

ಹೊರ ಬಂದೆನಷ್ಟೆ
ಬಯಲು ಬಯಲು
ಮರಳಿಲ್ಲ ಹಾಗೆಯೇ ಮನೆಯೂ
ಮನದ ತುಂಬಾ ತುಂಬಿಕೊಳ್ಳೋ
ನನ್ನವರು..
08/04/2015

ಕವನ

ತಪ್ಪುಗಳನ್ನು ಸಹ ಮೆಚ್ಚುವೆ...

ತಪ್ಪುಗಳಾಗುವುದು ಸಹಜ
ಆದ ತಪ್ಪನ್ನೇ ಮತ್ತೆ ಮತ್ತೆ
ಮಾಡದಿರುವುದು ಮೆಚ್ಚುಗೆಯೇ ನಿಜ

ಒಂದು ತಪ್ಪಿಗೆ
ಮತ್ತಷ್ಟು ತಪ್ಪು ತಪ್ಪು ತಪ್ಪೊಪ್ಪಿಗೆ
ಬೇಡವೋ ಮನವೇ..
ಕಂಡಿದ್ದೇನೆ ಮತ್ತೆ ಕಾಣ ಬಯಸೆನು

ತಪ್ಪನ್ನೇ ತಿದ್ದುವುದು ಬೇಡ..
ತಪ್ಪುಗಳನ್ನು ಬಿಟ್ಟು
ಸರಿ ಹಾದಿ ಹಿಡಿದರಷ್ಟೇ ಸಾಕು
ನೆನ್ನೆಯ ತಪ್ಪು ಇಂದಿನ ಅನುಭವ

ನೆನ್ನೆಗಳ ಪ್ರೀತಿಸುವುದು ಬೇಡ ತಪ್ಪುಗಳನ್ನು ರಮಿಸುತ್ತ
ಪ್ರೀತಿಸುವುದಾದರೆ ಪ್ರೀತಿಸೋಣ
ಇಂದನ್ನಷ್ಟೇ ನಂಬಿಕೆಯಿದ್ದೊಡೆ
ಎದುರು ಬಂದು ನಿಲ್ಲದ ತಪ್ಪುಗಳ ಪೋಷಿಸುತ್ತಾ 
ಹಿದ್ದಿಕ್ಕುವ ಪ್ರಯತ್ನಗಳಲಿ...

12/04/2015

ಹನಿ

ಹನಿ

ನಾಲ್ಕು ಹನಿ
ಮಣ್ಣ ಬೆರೆತರಷ್ಟೇ ಸಾಕು
ಅದರ ಘಮಲು
ಸಾವಿರ ಪದಗಳ
ಬಿತ್ತುತ್ತಿತ್ತು
ಇಂದು ಮಳೆಯಲೇ 
ತೋಯ್ದರೂ
ಹನಿಗಳ 
ಹೆಣೆಯಲಾಗದು
ರಭಸವದು ಹೆಚ್ಚು..

11/04/2015

ಹನಿ

ಅನಿಸಿಕೆ

ಅಪ್ಪನಿಗಿಂತ ಮೊದಲು
ಅಮ್ಮಳೇ ಹುಟ್ಟುತ್ತಾಳೆ
ಹೆಣ್ಣೊಬ್ಬಳ ಜರಿಯುತ್ತಾರೆ
ಒಂದು ಸಮೂಹ
ಒಂದು ಕುಟುಂಬದ ತಳವನ್ನು
ಅಲುಗಾಡಿಸಿ ದನಿಯಡಗಿಸಲು
ಸೂಕ್ಷ್ಮತೆಗಳಿಗೆ 
ನೇರ ಮಾತಿನ ಪೆಟ್ಟು 
ಕೊಟ್ಟು..

11/04/2015

ಕವನ

ಜೇನ್ನೊಣಗಳ ಗೂಡು ತೊರೆದ
ಅನಾಥ ಪ್ರಜ್ಞೆ

ಗುಯ್ ಗುಡುವ ಶಬ್ಧ
ರೂಢಿಯಾಗಿ ಹೋಗಿ

ಚಿಲಿಪಿಲಿಗಳೊಂದಿಗೆ
ಹಾಡಿ ನಲಿದು ಮುನಿದು

ಒಬ್ಬಳೇ ನಿಂತರೂ ಭೋರ್ಗರೆವ ಮೊರೆತ
ಇಲ್ಲದೆಯೂ ಕೇಳಿ ಬಂದಂತೆ...

ನಿಶ್ಶಬ್ದವ ನಾನೀಗ
ಸಹಿಸಲಾರೆ; ಒಳಗೂ ಹೊರಗೂ..

ನಾಳೆಯಿಂದ
ಶಾಲೆಗೆ ರಜೆ... !!! 

10/04/2015
ಹುಚ್ಚುತನಗಳು ನಿನ್ನನ್ನಿನ್ನೂ
ಬಿಟ್ಟು ಹೋಗಿಲ್ಲ
ಎನ್ನುವುದು ಖಾತ್ರಿಯಾಯ್ತು
ಎನ್ನುವರು
ನನ್ನೊಂದಿಗೆ
ನಿನ್ನ ಕಂಡ ಸ್ನೇಹಿತರು!

%%%

ಹೇ ಹುಡುಗ
ನಾನಲ್ಲ ಅವನು
ಎಂದು ಚೀರಿ ಓಡಿದರೂ ಸರಿಯೇ
ನಿನ್ನ ಮೇಲೆಯೇ 
ನಾ ಕವನ ಬರೆಯುವುದು!
ಪ್ರತಿಭಟನೆಗೆ
ಎಲ್ಲಿ ನಿಲ್ಲುವೆ ಹೇಳು
ನಾನೂ ಬರುವೆ!

09/04/2015

ಕವನ

ಭ್ರಮೆ



ಒಂದಷ್ಟು ದಿನಗಳಿಂದ
ಭ್ರಮೆಗಳನ್ನೇ 
ಪೋಷಿಸಿಕೊಂಡು ಬಂದಿದ್ದೆ
ಇದ್ದಷ್ಟು ಕಾಲ 
ಖುಷಿಯನೇ ಎರೆದಿತ್ತು
ಹೋಗುವಾಗಲೂ 
ಖುಷಿಯ ನೆನಪನ್ನೇ 
ನೀಡಿ ಹೊರಡುತ್ತಿದೆ...
ಭ್ರಮೆಯೇ ಆದರೂ
ಕಳೆದ ಮೇಲೂ 
ಪ್ರೇರಣೆಯಾಗಿರಬೇಕು
ಮತ್ತಷ್ಟು 
ಭ್ರಮೆಗಳ ಬದುಕ ಬದುಕಲು..

09/04/2015

ಕವನ

ಇರುವ ಇಲ್ಲದಿರುವ ನಡುವೆ


ಏನಿದ್ದರು
ಏನಿಲ್ಲದಿದ್ದರೂ
ಹಾಡುವವಳು ನಾ
ಬೇಟೆಯಾಡದಿರಿ
ನನ್ನ ದನಿಯ...

ಕಾರುಣ್ಯ ರಸದ 
ಹರಿವು ಬೇಡ
ನನ್ನಂತೆ ನನ್ನ 
ಹರಿಯ ಬಿಡಿ
ನಿಮ್ಮ ಆಸೆಗಳಿಗೆ
ನಾ ಕುಂತ್ತೆಂದು
ತಿಳಿಯದೆ

ಹಾಡುವವಳು ನಾ
ಕೊರಳ ಹಿಡಿಯದಿರಿ
ಉಸಿರ ಇಂಗಿಸದಿರಿ
ದೇಹದ ಸಾವಿಗಿಂತ
ಆತ್ಮದ ಸ್ತಬ್ಧತೆಗೆ 
ಸಾಯುವವಳು ನಾ

ನನ್ನ ದನಿಯ 
ಅಡಗಿಸಲು
ನಿಲ್ಲದಿರಿ ಎದುರು
ಕವಿತೆಯೋ.. ನನ್ನವು
ಹುಚ್ಚುತನವೊ..
ಒಡ್ಡುಗಳನ್ನೊಡ್ಡದಿರಿ
ನಿಮ್ಮ ಮೋಜಿಗೆ ..

ಹಾಡುವವಳು ನಾ
ಬೇಟೆಯಾಡದಿರಿ
ನನ್ನ ದನಿಯ...

08/04/2015
ಮುನ್ನೆಡೆಯುತ್ತಲಿದ್ದೆ
ಆದರೆ ಅದೂ ಹಿನ್ನೆಡೆಯೇ..
ಅಂದಿನ ಸಿಬಿರು
ಇಂದಿಗೂ ಇರಿಯುತ್ತಲಿದೆ
ಮುರಿದ ಮುಳ್ಳು
ಉಳಿದು ಎದೆಯೊಳಗೆ...

%%%

ದಾರ ಹರಿದು ಬಿದ್ದ
ಮುತ್ತುಗಳು
ಅನುಭವಿಸಿ ಸ್ವತಂತ್ರ
ಕುಣಿಯುತ್ತಿದ್ದವು...

09/04/2015

%%%

ಕಣ್ಣೀರ ಚಿತ್ರಿಸಲಾರೆ
ಈ ನಗುವಿಗೆ
ಪ್ರೀತಿ ಹುಟ್ಟಿದ ಮೇಲೆ..

08/04/2015

%%%

ಹೃದಯ ಬಲೂನಿಗೆ
ಪ್ರೀತಿ ತಂಗಾಳಿ
ಬಿಸಿಯಾಗಿಯೇ ಏರಿತ್ತು!
07/04/2015

ಕವನ

ಮಾಯೆಯೋ ಇಲ್ಲ ಕನಸೋ


ನಿನ್ನೊಂದಿಗಿನ ಒಡನಾಟ
ನನಗೀಗ ರೂಢಿಯಾಗಿ ಹೋಗಿದೆ
ನೀ ಬೆರಳಾಡಿಸಿದೆ 
ಮೆದುಳೊಳು
ಕದಡಿ ಹೋಯ್ತು 
ಸ್ಥಿರವಾಗಿ ನಿಲ್ಲದೆ

ಹೃದಯದೊಳಾಡಿದೆ
ಕರಗಿ ನಿನ್ನೆಡೆಗೇ 
ಹರಿದು ಬಂತು
ಮಾಯೆ ಎನ್ನಲೆ
ಇಲ್ಲ ಇದೂ ನನ್ನ ಕನಸೇ..
ಉತ್ತರಕ್ಕಾಗಿ ಅವನಲ್ಲೇ 
ನಾನುಳಿದೆ..
ವಾಪಸ್ಸಾಗದೆ...

07/04/2015

ಕವನ

ಬತ್ತಲಾರದ ಕನಸಿನವಳು


ಕೂಡಿಟ್ಟ ಭಾವಗಳು 
ನನ್ನವು ಗೆಳೆಯ..
ಒಮ್ಮಲೆ ಚಿಮ್ಮುವವು
ಬಿಚ್ಚಿಡಲು...

ಆ ರಭಸಕೆ ಗಾಬರಿಯಾಗದಿರು
ನನಗೋ ಮೊದಲೇ ಆತಂಕ
ನೀ ಹತ್ತಿರ ಸುಳಿಯಲು...

ಬತ್ತಿದಂತಿದ್ದ ಆಸೆಗಳೆಲ್ಲಾ
ಹೊರಳಿವೆ ಹೊಸತನಕೆ
ಅದುಮಿಟ್ಟಷ್ಟೇ ಒತ್ತಡದಿ ಉಕ್ಕುವವು..

ತಂಗಾಳಿಯಂತಲ್ಲ ನನ್ನ ಪ್ರೀತಿ
ಮೊರೆವ ಕಡಲು 
ಬೇಸಿಗೆಯ ಕಳೆದ ಜೋರು ಮಳೆಯು
ಹೆದರದಿರು ಹುಡುಗ
ಎಂದಿನಂತೆ ಇದು ನಾನೇ 
ಬತ್ತಲಾರದ ಕನಸಿನವಳು..

06/04/2015



ತನಗೆ ತಾ ಒಂಟಿ
ಎನಿಸಿದರೂ
ಜಗಕ್ಕೆ ಒಂಟಿ ಸಲಗದಂತೆ...! 

05/04/2015

%%%

ಗ್ರಹಣ ಬಿಟ್ಟಂತೆ
ನಗೆಯ ಹೊನಲು
ದೂರವಿದ್ದರೂ
ಎನ್ನ ಮನ್ನಿಸಿ 
ನೀ ಮಿಡಿವಾಗ...!

04/04/2015

ಕವನ

ಈ ನದಿಯ ದಡವು...

ನನ್ನನೇ ನಾ ಮರೆತು
ಕಳೆಯಬೇಕು 
ಒಂದು ದಿನ 
ನದಿಯ ಕಿನಾರೆಯಲಿ
ಅಲ್ಲಿ ನಾನು ನೀನೆಂಬ
ಬೇಧವೇ ಇಲ್ಲದಂತೆ

ನಿನ್ನವರು ನನ್ನವರೆಲ್ಲಾ
ಚಂದಿರ ತಂಗಾಳಿಗಳೇ ಆಗಿ
ನಡುನಡುವೆ ಝುಳಝುಳನೆಂಬ
ನದಿಯ ಹರಿವು

ಹರಿದು ಹೋಗಲಿ 
ನನ್ನತನ ನಿನ್ನತನವೆಂಬ
ಅಹಂನ ರಜವು...
ಈ ನದಿಯ ದಡವು
ಅನೇಕ ದಿನಗಳ
ನನ್ನ ಕನಸು....

02/04/2015



ರಜೆಯ ದಿನ
ಪದ್ಯ ಬರೆಯಬಾರದು
ಕಾವ್ಯದೊಂದಿಗೆ
ಸುತ್ತಾಡುವುದ ಬಿಟ್ಟು.. !

%%%

ಮನದ ಕೊಳದೊಳಗೆ
ತಾವರೆ ಅರಳುತ್ತಿತ್ತು
ಹೂವಿನಾಸೆಗೆ ಕೈ ಚಾಚಿದವರು
ಕೊಳದೊಳಗೆ ಕಾಲಿಟ್ಟು 
ರಾಡಿ ಎಬ್ಬಿಸಿದ್ದರು 
ಹೂವೇ ನಿನ್ನದೇನು ತಪ್ಪಿಲ್ಲ
ಸುಮ್ಮನಿರುವುದ ಬಿಟ್ಟು!

02/04/2015

%%%

ಮತ್ತಿಟ್ಟಂತೆ ಭಾವಗಳು
ಹಣೆಯ ಮೇಲೆಲ್ಲಾ
ಬರೆಯದ ಕವಿತೆಗಳು
ಬ್ರಹ್ಮನಿಗೆ ಬಿಡುವು

01/04/2015

ಕಥೆ

ಕಥೆ; ‘ಅವನ ಕಣ್ಗಳು’

ಆಕಸ್ಮಿಕವಾಗಿ ಎದುರಾಯ್ತು ಅವನ ಜೋಡಿ ಕಣ್ಗಳು. ಸುಮ್ಮನೆ ಎದುರಾಗಿದ್ದರೆ ಸರಿಯಿತ್ತೆನೋ ಅದೇಕೋ ನನ್ನನೇ ನೋಡುತ್ತಲಿತ್ತು. ಅವನು ನನ್ನೆದುರೇ ಕುಳಿತಿದ್ದ ಅಷ್ಟು ದೂರದಲ್ಲಿ. ಮೂರನೇ ಸಾಲಿನಲಿ. ಮೊದಲೇ ಅದು ದೋಣಿ ಹುಯ್ಲಾಟ ಜೋರು. 

ಪಕ್ಕದೂರಿನ ಗೆಳತಿ ಸೌಪರ್ಣಿಕೆಯ ಮದುವೆಗೆಂದು ಬಂದಿದ್ದಳು ಸುಂದರಿ. 
********

ನೆನ್ನೆಯಷ್ಟೇ  ಮುಗಿದ ಮದುವೆ. ಇಂದು ಉಳಿದುಕೊಳ್ಳೆಂದು ಎಷ್ಟು ಕೇಳಿಕೊಂಡರೂ ಗೆಳತಿಗೆ ಇನ್ನಿಲ್ಲದಂತೆ ಕಾರಣಗಳನ್ನು ಹೇಳಿ ಬಂದಿದ್ದೆ. ಅಸಲಿಗೆ ನನಗಲ್ಲಿ ಉಸಿರುಗಟ್ಟಿದ ವಾತಾವರಣವಾಗಿ ಹೋಗಿತ್ತು. ಎಷ್ಟು ಹೊತ್ತಿಗೆ ಊರು ಸೇರುವೆನೋ ಎನಿಸಿಬಿಟ್ಟಿತ್ತು. ಆತ್ಮೀಯ ಗೆಳತಿ ನೊಂದುಕೊಂಡಾಳೆಂದಷ್ಟೇ ಬಂದಿದ್ದೆ.  ಆದರೆ….

ಬದುಕಲಿ ಹೀಗೆಯೇ ಏನು?, ಯಾವುದು ಬೇಡವೆಂದು ದೂರವುಳಿಯುವೆವೋ ಅವುಗಳೇ ಎದುರಾಗುವವು. ಎದುರಾಗಿ ಎದೆಯುಬ್ಬಿಸಿ ನಮ್ಮನ್ನು ಸೋಲಿಸಿಯೇ ತೀರುವಂತೆ ಧಾಳಿಯಿಡುವವು. ನನಗೋ ಸಾಕಾಗಿ ಹೋಗಿದೆ ಪ್ರವಾಹದೆದುರು ಹೀಗೆ ಈಜಿ ಈಜಿ ಈ ಮೀನುಗಳಂತೆ!. 

ಅವಳ ಕಣ್ಗಳು ಈಗ ನೀರಿಗಿಳಿದವು. ದೋಣಿಯ ತುದಿಗೇ ಕೂತಿದ್ದ ಕಾರಣ ಸುಂದರಿಗೆ ನೀರು ಕೈಗೆಟುಕುವಂತಿತ್ತು. ನಿಶ್ಕಲ್ಮಶ ನೀರು ತನ್ನೆದೆಯನ್ನೆಲ್ಲಾ ತೆರೆದು ತೋರುತ್ತಿದ್ದಂತೆ ಭಾಸವಾಗುವುದು. ಎಷ್ಟೆಂದರೂ ನೀರು ನೀರೇ. ಪವಿತ್ರ ಗಂಗೆ. ಶಿವನ ಮಡದಿ ಎನಿಸಿಕೊಂಡರೂ ಮಹಾಭಾರತದಲ್ಲಿ ಶಾಂತನುವಿನ ಮೊದಲ ಹೆಂಡತಿ, ವೀರ ಭೀಷ್ಮನ ಹೆತ್ತ ತಾಯಿ!. ಅವಳು ಗಂಗೆ. ಎಲ್ಲಾ ಪಾಪಗಳನ್ನೂ ತೊಳೆಯುವಳು. ಕೈ ಹಾಕಿ ತುಸು ನೀರನ್ನು ಹಿಡಿದು ಬಹು ಹತ್ತಿರದಿಂದ ನೋಡುವಳು. ಅವಳಿಗಲ್ಲಿ ತನ್ನ ಕೈರೇಖೆಗಳೆಲ್ಲಾ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಏನನ್ನೋ ನೆನೆದಂತೆ ದೀರ್ಘ ನಿಟ್ಟುಸಿರ ನಿಡುಸುಯ್ವಳು. ಈ ರೇಖೆಗಳೆಲ್ಲಾ ‘ಪಾಪ’ ಕಳೆದುಕೊಳ್ಳಲೆಂದು ಮತ್ತಷ್ಟು ನೀರ ಹಿಡಿದಳು. ಎಷ್ಟು ಹಿಡಿದರೂ ಸೋರುತಿಹುದು ವಿಧಿಯ ಕೈಯದು ತೂತು.

ಕೈ ತೇವ ಆರುವ ಮುನ್ನ ಅಂಬಿಗನ ಕೂಗು, “ಯಾರಿದ್ದೀರಿ ಮತ್ತೆ,ಬೇಗ ಬೇಗ ಹತ್ಕೊಳ್ಳಿ”. ಸುಂದರಿಯ ಮನಸ್ಸು ಹಿಂದೆ ಹಿಂದೆ ಓಡುತ್ತಲಿದೆ. ಅದೇಕೋ ದೋಣಿ ಮುಂದೆ ಹೋದಂತೆ ನೆನಪು ಅವಳನ್ನು ಹಿಂದೆ ತಳ್ಳುತ್ತಿದೆ.

ಹೌದು ನನಗೂ ಹೀಗೆಯೇ ಒಂದು ನಿಲ್ದಾಣ ಸಿಕ್ಕಿತ್ತು. ಎಲ್ಲರೂ ನನ್ನನ್ನು ಇನ್ನಿಲ್ಲದ ಹುಮ್ಮಸ್ಸಿನಿಂದ ಹತ್ತಿಸಿಬಿಟ್ಟಿದ್ದರು. ದೋಣಿ ಏರುವಾಗ ಇದ್ದ ಆಕಾಂಕ್ಷೆಗಳು ಏರುತ್ತಿದ್ದಂತೆ ನಿಶೆ ಇಳಿಸಿಬಿಟ್ಟಿತ್ತು. ಅಲೆಗಳ ಅಬ್ಬರ!. ಹತ್ತಿಸಿದವರೆಲ್ಲಾ ದಡದಲ್ಲೇ ಉಳಿದಿದ್ದರು. ‘ಹೇಗೋ ತಳ್ಳಿಬಿಟ್ಟೆವು’ ಎನ್ನುವಂತಹ ನಿರಾಳತೆ ಅವರೆಲ್ಲರ ಕಣ್ಣಲ್ಲಿ. ಹೌದು ನನಗೆ ದೂರಕ್ಕೂ ಗೊಚರಿಸುತ್ತಿದ್ದ ಕಟ ಸತ್ಯವದು.

ಅವನೀಗ ಮರೆಯಾಗಿದ್ದಾನೆ. ಸಧ್ಯ ಅವನ ಕಣ್ಣ ದಾಳಿಗೆ ನಾನೋ ತತ್ತರಿಸಿ ಹೋಗಿದ್ದೆ. ಎನ್ನುತ್ತ ತನ್ನ ಕೈಯನ್ನು ಮತ್ತೆ ನೀರಿಗೆ ಇಳಿಬಿಟ್ಟಳು. ದೋಣಿಯ ಹುಯ್ಲಾಟ ಹೆಚ್ಚೇ ಇದೆ.
ಎಷ್ಟು ಆಳ? ಅದೇನೇನೋ ತುಂಬಿಕೊಂಡಂತೆ ಗಾಂಭೀರ್ಯ! ಎಷ್ಟು ಶಾಂತವಾಗಿಹಳು ಈ ಗಂಗೆ. ಎಲ್ಲಾ ಹೆಣ್ಣುಗಳಂತೆಯೇ. ಅದಕ್ಕೆ ಏನೋ ನದಿಯನ್ನು ಹೆಣ್ಣು ಎಂದು ಬಣ್ಣಿಸಿದ್ದಾರೆ ನಮ್ಮ ಪೂರ್ವಜರು. ಒಂದೆರಡು ಗಂಡು ಹೆಸರಿನ ನದಿಗಳಿದ್ದರೂ ಅವುಗಳ ಅಬ್ಬರ-ಅಟ್ಟಹಾಸಗಳ ಗುಣಗಳಿಗೆ ಗಂಡಿನ ಹೆಸರುಗಳಿಟ್ಟಿದ್ದಾರೆ. ಬ್ರಹ್ಮಪುತ್ರ, ಕೃಷ್ಣ…
ಅದೇಕೋ ಏನೋ ಬಹು ಪಾಲು ಜೀವನವನ್ನು ತನ್ನ ಕಲ್ಪನೆಗಳಲ್ಲೇ ಜೀವಿಸುವಳೇನೋ ಎನ್ನುವಂತೆ ಸದಾ ಮೌನಿ, ಅದ್ಯಾವುದರಲ್ಲೋ ಧ್ಯಾನಿ. ಮಾತಿಗಿಳಿದರೆ ಕಿವಿಗಳನ್ನೇ ಮರೆಯುವ ಸುಂದರಿ, ರೂಪದಲ್ಲೂ ಸುಂದರಿಯೇ ಆಗಿದ್ದಳು. 

ತನ್ನ ಸ್ವಗತಗಳಲ್ಲೇ ಕಳೆದು ಹೊಗಿದ್ದ ಸುಂದರಿಯನ್ನು ಮತ್ತೆ ಎಚ್ಚರಿಸಿ ವಾಸ್ತವಕ್ಕೆ ತಂದಿದ್ದು ಆ ಅದೇ ಜೋಡಿ ಕಣ್ಗಳು; ಆ ಹುಡುಗನದು. ಅರೇ ಇವನೇಕೆ ಹೀಗೆ ಬೆನ್ನಿಗೆ ಬಿದ್ದಂತೆ ನನ್ನ ಕಾಡುತ್ತಿದ್ದಾನೆ ಎಂದುಕೊಳ್ಳುತ್ತಾ ಮುಖ ಪಕ್ಕಕೆ ತಿರುಗಿಸಿಕೊಂಡಳು. ಈ ಬಾರಿ ಅವಳು ಕಣ್ಸೆಳತಗೆ ತುಸು ಗುರಿಯಾಗಿದ್ದಳು. ಎರಡು ಮೂರು ನಿಮಿಷದ ನಂತರ ಮತ್ತೆ ಎದುರು ನೋಡಲು ಮತ್ತದೇ ಕಣ್ಗಳು ಕಂಡವು. ಈ ಬಾರಿ ಕಣ್ಣಿನಾಳಕ್ಕೆ ಇಳಿವವಳಂತೆ ಇವಳೂ ನೋಡುತಾ ಕೂತಳು. ಬಹುಶಃ ಮೈ ಮರೆತು. 

ಅವನು ಹಿಂದಿನ ದಿನದ ಗೆಳತಿಯ ಮದುವೆಯಲ್ಲಿ ಕಂಡವನು. ಯಾರು ಏನೋ ಗೊತ್ತಿಲ್ಲ. ಸುಂದರಿ ಇದ್ದ ಕಡೆಯೆಲ್ಲಾ ಇವನೂ ಇರುತ್ತಿದ್ದನು. ಇವನ ನಡೆ ನೋಟಗಳನ್ನೆಲ್ಲಾ ನೋಡಿ ಗೆಳತಿಯರ ಗುಂಪು ಆಗಲೆ ಸುಂದರಿಯನ್ನು ರೇಗಿಸಿ ಕೆಣಕಲು ಶುರುವಿಟ್ಟಿದ್ದರು. ನಾಚುವಂತ ಕಾರಣಕ್ಕೆ ಸಿಡಿಮಿಡಿಗೊಂಡು ರೇಗುವಂತಾಗಿದ್ದರೂ ಗೆಳತಿಯ ಮದುವೆಯ ಸಂದರ್ಭ ಸಂತಸ ಕದಡದಿರಲೆಂದು ಹಲ್ಲುಕಚ್ಚಿ ಸುಮ್ಮನಿದ್ದಳು. ಬಹುಶಃ ಅವಳು ಒಮ್ಮೆ ಸಿಡುಕಿಬಿಟ್ಟಿದ್ದರೆ ಇಷ್ಟೇಲ್ಲಾ ಅನಾಹುತಗಳಾಗುತ್ತಿರಲೇ ಇಲ್ಲವೇನೋ. ಗೆಳತಿಯರಿಗೆ ಇವಳೂ ಎಲ್ಲರಂತೆ ಹಾಡಿ ನಲಿಯಲಿ ಎನ್ನುವ ಬಯಕೆ ಹಾಗಾಗಿ ಇಲ್ಲದ ಕನಸುಗಳನ್ನು ಇವಳಲ್ಲಿ ಹುಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಲಿದ್ದರು. ಇವಳ ಸಿಡುಕು-ಮೌನ, ಗೆಳತಿಯರ ಕಾಲೆಳೆಯುವಿಕೆಗಳನ್ನು ಸೂಕ್ಷವಾಗಿ ಗಮನಿಸಿದ್ದ ಹುಡುಗ ಆಗಲೇ ಮೋಹದ ಜಾಲಕ್ಕೆ ಬಿದ್ದುಬಿಟ್ಟಿದ್ದ. ಮನಸಲ್ಲೇ ಇವಳ ಕನಸ ಹೆಣೆಯುತ್ತಲಿದ್ದ. ಇದ ತಿಳಿದೋ ತಿಳಿಯದೋ ಅಕ್ಷತೆಯೊಂದಿಗೆ ಎದುರುಗೊಂಡ ಹುಡುಗನನ್ನು ಬಾಯಿಗೆ ಬಂದಂತೆ ಬೈದು ಗದರಿಸಿಬಿಟ್ಟಿದ್ದಳು. ಏನು ಬೈದಳು, ಏಕೆ ಬೈದಲೋ ಅಂತು ಒಂದೂ ಗೊತ್ತಿಲ್ಲ. ಯಾವುದೋ ಆಕ್ರೋಶ ಯಾರೋ ಮೇಲೋ ಎಂಬಂತೆ ಗುಡುಗಿದ್ದಳು. ಆ ಹುಡುಗನೂ ತಬ್ಬಿಬ್ಬಾಗಿ ನಿಂತಿದ್ದನು. ಆದರೂ ಅವಳ ಕೋಪಕ್ಕೂ ನಮ್ರತೆಯನ್ನು ತೋರಿ ತನ್ನದೇ ತಪ್ಪೆಂದುಕೊಂಡು ಕ್ಷಮೆಯನ್ನೂ ಕೋರಿದ್ದ. 

‘ತಪ್ಪಾಯಿತು’ ಎಂದು ಮತ್ತೆ ಮತ್ತೆ ಕೋರಿದಂತಹ ನೋಟ ಅವನದೀಗ. ಹೌದು ದೋಣಿ ಉಯ್ಯಾಲೆಯಂತೆ ತೂಗುತ್ತಿತ್ತು. ಅವನ ಕಣ್ಗಳನ್ನು. ಆ ಕಣ್ಗಳಲ್ಲಿ ದೃಷ್ಟಿನೆಟ್ಟ ಇವಳ ಮನಸನೂ ತೂಗಿತ್ತು. ತಂಗಾಳಿ ತೇಲಿ ಬಂದಂತೆ. ಅದೇನೋ ಅದೃಶ್ಯ ರಂಗಮಂದಿರವೊಂದು ಅವಳ ಕಣ್ಮುಂದೆ ತೆರೆದುಕೊಳ್ಳೂತ್ತಿತ್ತು. ಅಲ್ಲಿ ಮತ್ತೆ ಅವಳ ಕನಸೆಲ್ಲಾ ಗರಿಕೆದರಿದಂತೆ ಪಾತ್ರಗಳಾಗಿ ಅವಳೇ ನಿಂತಿದ್ದಾಳೆ. ಜೊತೆಯಲ್ಲಿ ಅವನೂ…

ಆದೇನು ಮಾಯೆಯೇ ಈ ಪ್ರೀತಿ. ಕಣ್ಣಂಚಿನಲೇ ಕೂಗಿ, ಮನಸ ದಾಟಿ ಎದೆಗಿಳಿವ ರೀತಿ. ಅದಕೇ ಏನೋ ಶಿವನೂ ಸೋತನು ಕಾಮದೇವನೆದುರು! ಪಾರ್ವತಿಯೊಂದಿಗೆ ವಿವಾಹವಾಗಬೇಕಿತ್ತು. ಮರು ಹುಟ್ಟು ಪಡೆದ ದಾಕ್ಷಯನಿಯ ಅತೀವ ಆಸೆ-ಪ್ರೀತಿಯ ಕಾರಣಕ್ಕಾಗಿ. ಪ್ರೀತಿಯು ಮತ್ತೆ ಮತ್ತೆ ಹುಟ್ಟುವುದೇ? ತನ್ನೊಳಗೆ ಪ್ರಶ್ನಿಸಿಕೊಳ್ಳುವ ಸುಂದರಿ ಮತ್ತೊಮ್ಮೆ ಅವನ ಕಣ್ಗಳನ್ನು ದಿಟ್ಟಿಸಿದ್ದಳು. ನಿರ್ವಿಕಾರ ಮನದ ಕನ್ನಡಿಯಂತೆ ಅವನ ಕಣ್ಗಳು ಹೊಳೆಯುತ್ತಿದ್ದವು. ಪ್ರೀತಿ ಹುಟ್ಟದೇ ಇರಲು ಕಾರಣಗಳೇ ಇರಲಿಲ್ಲ. ತದೇಕಚಿತ್ತಾಳಾಗಿ ನೋಡುತ್ತಿದ್ದಾಳೆ. ಅವನ ಕಣ್ಗಡಲೊಳು ಮುಳುಗಿದಂತೆ ಭಾಸವಾಗುತ್ತಿದೆ. ಹೌದು ರಂಗ ಮಂದಿರದಲ್ಲಿ ಅವರಿಬ್ಬರೇ ಈಗ. ಸುತ್ತ ಹಸಿರು ವನ, ಮೃಗ-ಖಗಗಳೇ ಎಲ್ಲಾ. ಮತ್ತಿನ್ಯಾರೂ ಇಲ್ಲ. ಸಮಾಜವಂತೂ ಮೊದಲೇ ಇಲ್ಲ. ಯಾವುದೇ ನಿರ್ಬಂದನಗಳಿಲ್ಲ. ನಿರಾಳಳಾದಂತೆ ಸುಂದರಿ ನಿಟ್ಟುಸಿರ ಬಿಡುವಳು. ಕಣ್ಸುತ್ತಾ ಆವರಿಸಿಕೊಂಡಿದ್ದ ಎಲ್ಲಾ ಸಂಕೋಲೆಗಳೂ ಸಡಿಲಗೊಳ್ಳುತ್ತಿವೆ. ಅವಳ ಕಣ್ಗಳು ಅರಳುತ್ತಿವೆ. ಅವಳಿನ್ನೂ ಅವನ ಕಣ್ಣೊಳಗೇ ಉಳಿದಿದ್ದಾಳೆ ಹಾಗೆಯೇ ರಂಗದ ಮೇಲೂ. ಮನ್ಮಥನ ವೇಷದಲ್ಲಿನ ಅವನ ಮುಂದೆ ಶಕುಂತಲೆಯಂತಹ ಇವಳು. ಪ್ರೀತಿಯ ಹೂಬಾಣಗೆ ಲಜ್ಜೆ ಕಳೆದು ಉಂಗುರವೂ ಕಳೆದಂತೆ ಪರದಾಡುವ ಶಕ್ಯಂತಲೆಯು ದುಷ್ಯಂತನ ಹುಡುಕಾಟಕ್ಕೆ ಬೀಳುವಳು. ಮನ್ಮಥನಂತ ಹುಡುಗ ಈಗ ದುಷ್ಯಂತನಾಗಿ ನಿಲ್ಲುತ್ತಾನೆ. ‘ತೊರೆದು ಹೋಗುವ ಸಂಪತ್ತಿಗೆ ಬಂದೆಯೇ ನೀನು?’ ಎನ್ನುತ ಮರುಗುವ ಶಕುಂತಲೆ, ನೆನಪು ಆರಿದ ಹೃದಯದ ದುಷ್ಯಂತನ ದಿಟ್ಟಿಸಲಾರದೇ ನಿಲ್ಲುತ್ತಾಳೆ. ಹೌದು ವಾಸ್ತವದಲ್ಲೂ ಕಣ್ಣೀರಾಗುತ್ತಿದ್ದಾಳೆ ಸುಂದರಿ. ಅವನ ಕಣ್ಣೋಳಗೂ ನೀರೇ, ಬಹುಶಃ ಅವನೂ ಇವಳ ಕಣ್ಣೋಳಗಿನ ರಂಗ ನಾಟಕವನ್ನು ನೋಡಿದನೋ ಏನೋ. ಪರಸ್ಪರ ದೃಷ್ಟಿಗಳಿಂದ ವಿಚಾರ, ದೃಷ್ಯ, ಭಾವ-ಸಂವೇದನೆಗಳು  ವಿನಿಮಯವಾಗಿ ಹೋಗಿದೆ. ಇವಳೇನೂ ಹೇಳಲೂ ಇಲ್ಲ, ಅವನೇನೂ ಕೇಳಲೂ ಇಲ್ಲ. 

ದಡ ತಲುಪಿದ ದೋಣಿ ರಂಗಕ್ಕೆ ತೆರೆಯನೊಡ್ಡಿತ್ತು. ಎಚ್ಚೆತ್ತು ಸುಂದರಿ ಎದ್ದು ಹೊರಟಳು. ಹಿಂದಿನಿಂದ ವೇಗವಾಗಿ ಬಂದ ಹುಡುಗ ಹೇಳಿದ, “ ಅದೇನು ಹತಾಶೆಯೋ ನಿಮ್ಮದು ತಿಳಿಯದು, ಬಿಟ್ಟುಬಿಡಿ ಅವುಗಳನ್ನೆಲ್ಲಾ ಈ ಆಳದ ನದಿ ನೀರಿನಲ್ಲಿ. ನನಗೆ ನಿಮ್ಮ ಪ್ರೀತಿಯಷ್ಟೇ ಬೇಕಾಗಿದೆ. ಆದರೆ ದಯಾಮಾಡಿ ಅಳಬೇಡಿ, ನನಗೆ ಕಣ್ಣೇ ಕುರುಡಾಗಿ ಹೋಗಲೆಂದು ಅನಿಸುತ್ತದೆ”. ಸುಂದರಿ ಏನನ್ನೂ ಮಾತನಾಡಲು. ಅರೆ ಘಳಿಗೆ ನಿಂತು ಮತ್ತೆ ತಿರುಗಿ ನಡೆಯುವಳು.

ಅವಳ ಕಣ್ಣೊಲವು ಈಗ ಒಮ್ಮೆಲೆ ಉಕ್ಕಿ ಬರುತ್ತಿದೆ ಕಣ್ಣೀರು ಕೆನ್ನೆಯನ್ನೆಲ್ಲಾ ತೋಯ್ಸಿದೆ. ಅವನು ಅಲ್ಲಿಯೇ ನಿಂತು ಇವಳನೇ ನಿರೀಕ್ಷಿಸಿದ್ದ. ಏನೋ ಆಲೋಚಿಸಿದಂತೆ ಒಮ್ಮೆಲೆ ತಿರುಗಿ ನಿಂತಳು ಮತ್ತು ತೊಟ್ಟಿದ್ದ ಉಂಗುರವ ತೋರಿ ನೀರಿಗೆಸೆದಳು. ಅವನ ಕಣ್ಣರಳಿತ್ತು. ನೀರಿನಾಳದಲಿ ಮೀನುಗಳು ಉಂಗುರಕ್ಕೆ ಕಚ್ಚಾಡಿತ್ತು.   

ಧನ್ಯವಾದಗಳೊಂದಿಗೆ,
ದಿವ್ಯ ಆಂಜನಪ್ಪ
23/02/2015

Wednesday 1 April 2015

ದಾರಿ ತಪ್ಪಿದಂತಾಗಿದೆ
ನೀನೆಲ್ಲಿರುವೆ?!
ಲಯವು ತಪ್ಪಿದಂತೆ
ನಿರ್ಭಾವುಕನಾಗಿರುವೆ...
ಎಲ್ಲಿರುವೆ ಗೀತೆ
ನೀನೆಲ್ಲಿರುವೆ ನನ್ನ ಕಾಂತೆ

*******

ಎರಡು ಪರಸ್ಪರ ನಿಲುಕದ
ದಡಗಳ ನಡುವೆ
ಸಾಗರವೇ ತುಳುಕಿ
ಒಂದು ಮಾಡಲು
ಯತ್ನಿಸುತ್ತಿತ್ತು
ಕಣ್ಣೀರು ಹೆಚ್ಚಿ
ಮತ್ತೆ ಮತ್ತೆ ಕಡಲು
ಬಿರಿದಿತ್ತು
ದಡಗಳೇ
ಜಾರಿ
ಕಡಲಾಳಕ್ಕಿಳಿದು
ಬಹುಶಃ ಸೇರಿತ್ತು...


********

ಬೇಸಿಗೆಯ ರಾತ್ರಿ ತಂಪು
ಮುಂಜಾನೆ ಹೆಚ್ಚು ನಿದ್ದೆ
ಬಲು ಸೋಮಾರಿತನ
ಕನಸುಗಳಿಗೆ ಬೀಗ ಮುದ್ರೆ..!

31/03/2015

ಕವನ

"ಕರಿ"



ಕರಿಯೆಂದೇ ಹೆಣ್ಣನು
ಕರೆದೆಬಿಡಲು
ಅಂಕುಶವೇ ಮನದ ಭಾವಗಳು
ಅದ ಹಿಡಿದ ಮಾವುತ
ಸಂಸ್ಥಾಪಿಸುವನು ಒಡೆತನವ..

ಪಳಗಿಸಲು ನುರಿತ ಬೆಡಗು
ರಾಜ ಬೀದಿಯ ತುಂಬೆಲ್ಲಾ
ಮೆಚ್ಚುಗೆಯ ಪ್ರೇಕ್ಷಕರು
ರಾಜ ಮರ್ಯಾದೆಯ ಕುರುಹುಗಳು
ಆನೆಯ ಒಡಲೆಲ್ಲಾ ಕುಹುಕಗಳು

ಅಷ್ಟಗಲದ ಆನೆಯ
ಇಡಿಯಾಗಿ ಬಂಧಿಸಿದ 
ಭಾವಗಳು
ಅಂಕುಶವೇ ಆದದ್ದು
ಹೆಣ್ಣಿಗಷ್ಟೇ ಅರಿತ ಸತ್ಯ

ನಾವು ಹೆಣ್ಣುಗಳು
ಮದಿಸಿದ ಆನೆಗಳನೇ
ಹೋಲುವೆವು............

31/03/2015

ಕವನ


"ಹುಳು"

ಎಷ್ಟೊ ಬಾರಿ
ನಾನೊಂದು ಹುಳುವಾಗಿಯೇ
ಕಾಣುತ್ತೇನೆ
ಕಣ್ಮರೆಯಲಿ ಕೊರೆಯುತ್ತಾ..
ಮುಳ್ಳುಗಳಲ್ಲೇ ಚುಚ್ಚುತ್ತಾ.. 
ತನಗೆ ತಾ
ಕಂಬಳಿ ಹುಳುವಾಗಿ!

ರಾತ್ರಿ ಕಣ್ಮುಚ್ಚಿದಾಗ
ಬರೀ ಚಿಟ್ಟೆಯದೇ ಕನಸು
ಹಾರಲಾರೆನೆನಿಸಿ ಕನಸಲೂ ಅಳುವೆ
ಎಷ್ಟೋ ಕಂಬಳಿ ಹುಳುಗಳು
ಚಿಟ್ಟೆಗಳಾಗುವುದೇ ಇಲ್ಲ ನಡುವಲೇ ಅಳಿದು

ಕಂಬಳಿ ಹುಳುವೆಂದರೆ 
ಭಾರಿ ಬೆಚ್ಚುತ್ತದ್ದೆ ಚಿಕ್ಕವಳಿದ್ದಾಗ
ಆದರೆ ಚಿಟ್ಟೆಯನು ಅಷ್ಟೇ ನಾಜೂಕಾಗಿ ಹಿಡಿಯುತ್ತಿದ್ದೆ
ಬೆರಳಗಳಲಿ ಬಣ್ಣ ಹತ್ತಿಸಿಕೊಂಡು
ಕೆನ್ನೆ ಹಣೆಗೆ ಹಚ್ಚಿ ಮೆರೆದಿದ್ದೆ

ಕನಸು ಕಳೆದುಕೊಂಡ ಆ ರೆಕ್ಕೆ ನವೆದ ಚಿಟ್ಟೆಗಳು
ಇನ್ನೂ ಹಾರುತ್ತಿವೆ ಎನ್ನ ಮನದ ಬಾಂದಳದಲ್ಲಿ
ಅರೆ ಬರೆಯ ಚಿತ್ರಗಳಾಗಿ ಹಸಿ ಹಸಿಯ ಚಂದ್ರಮಗಳಾಗಿ
ಕಾಂತಿಯಿದ್ದು ಕಾಣುವಷ್ಟು ಬೆಳಕಿಲ್ಲ
ಇರುಳುಗುರುಡೆಂದರೆ ಇದುವೇ ಏನೋ...!!

30/03/2015
"ಒಂದೆಳೆ ಶೃಂಗಾರ"

ಒಂದೆಳೆಯಲ್ಲಿ ಶೃಂಗಾರ
ಕಟ್ಟಿಕೊಡಲು

"ಬೇಸಿಗೆಯ ಇಳೆ ಸಂಜೆ ಮಲ್ಲಿಗೆಯ ಕಂಪು"...!
ಇವಿಷ್ಟು
ಸಾಕು ಹೂಗೊಂಚಲೊಳು

ಸರಿ ಈಗ ಹೇಳು
ಎಂದು ಬರುವೆ?!

ತುಂಟ ಪ್ರಿಯಳ
ಮುದ್ದು ಪ್ರಶ್ನೆ... 

31/03/2015

****

ಈ ಭಾವಗಳೇರಿಳಿತ
ಒಂತರ ಹುಚ್ಚು ಹೊಳೆಯಂಗೆ
ಸಿಕ್ಕಾಪಟ್ಟೆ ಫಾಸ್ಟು
ಪಲ್ಸ್ ರೇಟು! 

30/03/2015

ಕವನ

ಮೌನದ ಮಾತುಗಳು

ಮೌನದ ಮಾತುಗಳಿಗೆ
ಕಿವಿಯಾಗಿ ಕನಸಾಗಿ
ಹೊರಹೊಮ್ಮುವ
ಹೂ ಮನವ
ಪ್ರೀತಿಸದೇ ನಿಲ್ಲಲಾರೆ!

ಕಣ್ಣೊಳ ಭಾವಕೆ
ನೆರಳಾಗಿ ಮೌನವಾಗಿ
ಜೊತೆಗಾಗಿ ಕಾಯುವ
ಮುಗ್ಧ ಮನವ
ಬಯಸದೆ ಇರಲಾರೆ!

ಅಷ್ಟು ಮಾತುಗಳೊಳಗೆ
ಸಣ್ಣದೊಂದು ಮೌನದ ನೋಟಕ್ಕಷ್ಟು
ಆದರ ಪ್ರತಿಸ್ಪಂದನೆಯ
ಪ್ರೀತಿಯ ಮನವ
ಇನ್ನಷ್ಟು ತಡೆದು ಕಾಯಿಸಲಾರೆ!

ಈ ಮಾತು ಮೌನಗಳೊಳಗೆ
ನನ್ನ ಮಾತುಗಳ
ಅವನ ಮೌನದಲಿ ಕಂಡು
ನನ್ನ ಮಾತು ಮತ್ತೂ ಮೌನ

ಹೌದು ಮೌನವಷ್ಟೇ
ಆದರೂ ಅವನೊಂದಿಗೆ 
ಮಾತನಾಡದೆ ನಾ ಇರಲಾರೆ!..

30/03/2015

ಕವನ

ಪ್ರೇಮ


ಧ್ಯಾನಿಸಿ ಬರೆಯಲಿಲ್ಲ
ಪ್ರೇಮಿಸಿ ಬರೆದಿದ್ದೆ

ಧ್ಯಾನದಲ್ಲಿ ಪ್ರೇಮವಿತ್ತು
ಪ್ರೇಮದಲ್ಲಿ ಅವನದೇ ಧ್ಯಾನವಿತ್ತು!

ನಡುನಡುವೆ ಈ ಮೌನವೂ 
ಬಿಡುವಿಲ್ಲದೇ ಕಾಡಿತ್ತು!....

ಅಕ್ಷರಗಳು ಮತ್ತೂ ನನ್ನ ಕೆಣಕಿ
ಬರೆದುಕೊಳ್ಳಲು ಅವನ ಹುಡುಕಿತ್ತು

ಶಬ್ದಗಳ ಮಥಿಸಿ ಸಾಲುಗಳಲೇ 
ಅವನ ಪ್ರೇಮಿಸಿ ಧ್ಯಾನಿಸಲು ಸೂಚಿಸಿತ್ತು...! 

30/03/2015



ಕೂತು 
ಹೆಚ್ಚು ಯೋಚಿಸಿ
ಕೀಳರಿಮೆಯ 
ಆಹ್ವಾನಿಸಿಕೊಳ್ಳುವುದಕ್ಕಿಂತ
ಒಂದಷ್ಟು 
ಬಿರುಸು 
ಹೆಜ್ಜೆಗಳನ್ನಿಟ್ಟು
ಘಾಟಿ 
ಎನಿಸಿಕೊಳ್ಳುವುದೇ 
ಲೇಸೆನಿಸಿದೆ..! 


*****

ನಿಜ ಹೇಳಲು ತುದಿಗಾಲಲ್ಲಿ
ನಿಲ್ಲುವವಳು
ನಿಜವೂ ಇಲ್ಲ ಸುಳ್ಳು ಇಲ್ಲ
ಮೌನದ ಮರೆಯ ಕನಸಿಗೆ ಸೋತು
ಬಹುಶಃ ಭವಿಷ್ಯದ ಅಪರಾಧಿಯಾದೆ!
ಕ್ಷಮಿಸಲಿ ಆ ಮನವು..
ನಿಲ್ಲಿಸಿಕೊಂಡು ಕಾಡಿದ್ದ ಕಾರಣಕೆ

*****

ಕಾವು ಕೊಟ್ಟ ಹಲವು ಸಾಲುಗಳಲ್ಲಿ
ಕೆಲವು ಮರಿಗಳಾಗಿವೆ
ಅವುಗಳ ಹಸಿವಿಗೆ
ನನಗೆ ಬಲೇ ಗಾಬರಿ!

29/03/2015

ಕವನ

ಅವನ ಕನಸುಗಳು...


ದುಂಡು ಮಲ್ಲಿಗೆಯ
ದಳದ ಒಳಗೆಲ್ಲಾ
ಸುತ್ತಿ ಬಂದಂತೆ ನಾಸಿಕ
ನಶೆ ಏರಿದೆ ಮನಸ್ಸು

ಈ ಪ್ರೇಮದೊಲವೊಳು
ಮುಳುಗೇಳಿದಂತೆ
ಈ ಹೊತ್ತಿನ ಒನಪು 
ನೆನಪುಗಳು, 
ಅವನ ಕನಸುಗಳು..!

29/03/2015

ಕವನ


ಹೃದಯ ಹೂ ಬುಟ್ಟಿ


ಹೃದಯವೇನು
ಕಸದ ಬುಟ್ಟಿಯಲ್ಲ
ಬೇಡದ ನೋವಗಳನೇ ತುಂಬಿಕೊಳ್ಳಲು
ಎನ್ನುವವು ಸಂದೇಶಗಳು

ಹೃದಯವು ಬೇಕಾದ
ಹೂ ಬುಟ್ಟಿ
ಬಿರಿದೆದೆಯ ಹೂ ನೀನಿರಲು
ಅದರೊಳು ತುಂಬಿದೆ
ಸ್ನೇಹ ಸಹನೆ 
ನಿರ್ಮಲ ಪ್ರೇಮದ ಸುಗಂಧಗಳು..

ಈ ಹೂ ಬುಟ್ಟಿಯ ತುಂಬೆಲ್ಲಾ
ಹೆಜ್ಜೇನುಗಳ ಹಾವಳಿ
ಹೃದಯದೊಳು ನಿನ್ನ ಹುದುಗಿಸಿಕೊಂಡು
ಹುಳು ಕಚ್ಚಿದ ವೇದನೆ
ಕ್ಷಮಿಸಿಬಿಡು ಎದೆಯೊಳು
ತುಸು ಆವೇಗಗಳಿದ್ದರೆ..

28/03/2015

ಕವನ

ಓಟ

ಓಡುತ್ತಿತ್ತು ಮನಸ್ಸು
ಮುಗ್ಗರಿಸಿಯೂ ಬೀಳುತ್ತಿತ್ತು
ಮತ್ತೂ ಓಡುತ್ತಿತ್ತು
ಬಿದ್ದು ಎದ್ದು

ಹಾಗಾಗಿ ಬಿದ್ದದ್ದು ಮುಗ್ಗರಿಸಿದ್ದು
ಬಹು ಮಟ್ಟಿಗೆ ಓಟದಲ್ಲಿ ಮಾಮೂಲಿ
ಇಲ್ಲವೇ
ಓಟದ ಲಕ್ಷಣಗಳು

ಓಟ ನನಗಿಷ್ಟ! ...
ಏಳು ಬೀಳುಗಳೂ
ಈಗೀಗ ಹೆಚ್ಚೇ ಆಸಕ್ತಿ..! 

28/03/2015

ಕವನ

ಬೇಧ


ಹಾಡಿ ನಲಿವ ಹಕ್ಕಿಗೆ
ಯಾವ ಗಾಳಿಯು
ಕೊರಳಿಗೆ ಬೇಧ

ಅರಳೊ ಹೊಸ ಹೂವಿಗೆ
ಮಕರಂದಗಳ 
ಯಾವ ಸ್ಪರ್ಷ ಬೇಧ

ದಿನವೂ ಹುಟ್ಟಿ
ಮುಳುಗೊ ಸೂರ್ಯನಿಗೆ
ಯಾವ ನಿಂದನೆ ಸ್ತುತಿಗಳ ಬೇಧ

ತಿರುಗೊ ಭೂಮಿಗೆ
ವಿರುದ್ಧವಾಗಿ
ಕ್ರಮಿಸಿದ ಮನಗಳ
ಯಾವ ಬೇಧ

ಸತ್ತು ಹುಟ್ಟಿದ ಜೀವಕೆ
ಯಾವ ಸೋಲು ಯಾವ ಗೆಲುವು
ಯಾವ ಬೇಧ
ನೀತಿ-ಅನೀತಿಗಳ ಹೊರತು.. !

28/03/2015

ಕವನ

ಆಲೆ ಮನೆ


ಆಲೆ ಮನೆಯಲ್ಲಿ
ಸಕ್ಕರೆ ಸುಟ್ಟ ವಾಸನೆ
ಬೆಲ್ಲಕೂ ಈಗ ಮನಸ್ಸಿಲ್ಲ
ಮನೆಯ ತ್ಯಜಿಸೋ ಯೋಚನೆ

ಯಾವ ಘಳಿಗೆಯಲಿ 
ಹರಿದುಬಿಡುವಳೊ
ಈ ಹೆಣ್ಣು
ಪ್ರೀತಿ 
ತನ್ನದಲ್ಲವೆನಿಸಲು....

27/03/2015

ಕವನ


ಕಾವ್ಯ ಪ್ರೀತಿ


ಯಾರಿಗೆ ಯಾರ ನೆನಪೋ
ಹೆಸರಿಸದೆ ಗೀಚುವರು ಕವನ

ಮುಟ್ಟುವುದು ಗಲ್ಲಿಗಲ್ಲಿಯೂ
ಮತ್ತಿನ್ಯಾರದೋ ಹೆಸರಿಗೆ

ಅಲ್ಲಷ್ಟು ಪುಳಕಗಳು
ಸುಮ್ಮನೆ ಹೆಗ್ಗಳಿಕೆಗಳು

ಇದೊಂದು 
ಅನಾಮಿಕ ಕವಿತೆ
ಇಟ್ಟರೆ ಅವನ ಹೆಸರಿನದೇ..

ಮನಸಾರೆ ಗುನುಗಿದವನು ಮಾತ್ರ 
ಕವಿತೆಯ ಗರ್ಭಕ್ಕಿಳಿವನು...!

ಭಾವುಕ ಮನದೊಳು 
ತನ್ನ ಬಿಂಬ ಕಾಣುವನು

ಕವನಕ್ಕೆ ಪ್ರೀತಿಯಿದೆ
ಈಗದು ಎದೆಯಲ್ಲಿದೆ

ಕಾವ್ಯ ಪ್ರೀತಿ 
ಹೀಗೂ ಉಂಟು..!!

27/03/2015

ನಿನ್ನ ಬರೆಯಲು
ಈಗೀಗ
ನನಗೆ ನಾಚಿಕೆ
ನೀನಲ್ಲಿ
ನನ್ನ ನೆನೆದು
ನಾಚುತ್ತಿರುವಂತೆ! 

28/03/2015


******

ಎಷ್ಟು 
ಕೋಪ-ತಾಪಗಳಿದ್ದರೇನು
ತಂಪಾದಾಗ 
ನೀನೇ ನೆನಪಾಗುವೆ
ಈ ಬೇಸಿಗೆಗೆ 
ನೀನೊಂದು 
ನವ್ಯ ವರ!

26/03/2015