Sunday 23 October 2022

ಹನಿ

ಬಿರುಗಾಳಿಯಂತ ಬದುಕಲಿ 
ತೂರಿ ಹೋಗಿ, ಜಾರಿ ಬಾಗಿ, 
ಮೇಲೇರುವ ಜೀವ 
ಗಾಳಿಪಟದಷ್ಟೆ ಹಗುರ!

Thursday 29 September 2022

ಹನಿ

ಸದ್ದಿಲ್ಲದೆ ಹರಿವ 
ಅಂತರಗಂಗೆಯಾಗಲು
ಬಯಸುವುದು ಮನವು
ಆದರೆ..
ಸದಾ...
ಗಡಿ ದಾಟಿ
ಸಿಡಿದೆದ್ದು ಧುಮುಕೊ
ಧಾರೆಯಾಗುವ ಬದುಕು
ಎಂದಿಗೂ ನನಗೆ ಸೋಜಿಗ!

Monday 12 September 2022

ಕವನ

ದೋಣಿ

 ದಡ ಮುಟ್ಟದ
ದೋಣಿಯೊಂದು
ತಿರುಗಿಮುರುಗಿ
ಗಾಳಿ ತೂರಿದಲ್ಲಿಗೆ
ನುಗ್ಗಿದೆ
ಅದು ಹಿಂದೆಕ್ಕೊ
ಮುಂದಕ್ಕೋ?
ವ್ಯತ್ಯಾಸವಿಲ್ಲ

ಅಷ್ಟು ಹೊತ್ತು
ನಿಗದಿಯಾದಂತೆ
ತೇಲುತ ನಿಂತಿದೆ
ಆ ವಲಯದಲ್ಲಿ...

ಮುಳುಗದ ದೋಣಿ
ತೇಲಿ ತೇಲಿ ಹಗುರಾಗಿದೆ
ಮೀನುಗಳ ಹೊತ್ತು
ತರದ ದೋಣಿಯ
ನಿರೀಕ್ಷೆ ಇಲ್ಲ ದಡಕ್ಕೆ

ನೀರಿಗೆ ಮೀನಾಗಿ
ಮೀನಿಗೆ ಬಲೆಯಾಗಿ
ದೋಣಿ ತೇಲಿದೆ ನೀಲಿಯಾಗಿ
ನೀರ ಮೇಲೆ ನಿಂತಷ್ಟು ಹೊತ್ತು
ನಂಟು ನೀರಿಗೂ ದೋಣಿಗೂ...

ಗಾಳಿಯ ರಭಸಕ್ಕೊ
ಮೀನು ತುಂಬಿದ ಭಾರಕ್ಕೊ
ವಾಲಿ ದಿಕ್ಕು ತಿರುಗಿ
ಈ ತೀರಕೋ ಆ ತೀರಕ್ಕೋ
ಕಳೆದು ಹೋಗೋ ದೋಣಿ
ಹಿಂದೆ ದಡದಲ್ಲೇ ತಾಳ್ಮೆ ಹೊದ್ದು ನಿಂತಿತ್ತು....

ಕವನ

 ಭಾವಗಳ ಮೂಟೆ….

ಭಾವಗಳ ಮೂಟೆ
ಕಾಪಿಟ್ಟು ಕಟ್ಟಿಟ್ಟು
ಹಬೆಯಾಗಿದೆ ಹೃದಯ!

ಹಾಡಿ ನಲಿದ ಒಲವು
ಎಂದೊ ಬೂದಿಯಾಗಿ
ನಿಂತು ಬೇರೂರುವ ಛಲಕೆ
ಮನಸ್ಸು ಕಲ್ಲು!

ಕಟ್ಟಿಟ್ಟ ಕನಸು
ಗಂಟಿಕ್ಕಿದ ಗೀತೆ
ಹನಿದು ಹನಿದು
ತೊರೆಯಂತೆ!

ಹರಿದು ಹಗುರಾಗುವ
ತಾಣವಿಲ್ಲ; ಬರಿದೆ ಬೊಗಳೆ
ನುರಿದು ಹಸನಾಗುವ
ನೂಲು ಅಲ್ಲವೇ ಅಲ್ಲ; ಕಗ್ಗಂಟು!

ಮತ್ತೊಮ್ಮೆ ಹೀಗೆಯೆ
ಪ್ರಾರಂಭಿಸಲಿ ಹೊಸತು
ಹಳೆಯ ನಂಬಿಕೆಯ ಹೊಸಲಲಿ
ಕಾಮನಬಿಲ್ಲ ರಂಗು ರಂಗೊಲಿ!

ದಿವ್ಯ ಆಂಜನಪ್ಪ

ಕವನ

ಖಾಲಿ

ಖಾಲಿ ಬಿಂದಿಗೆಯೊಳಗೆ
ಭಾರಿ ಗಲಿಬಿಲಿ
ತುಂಬಿಕೊಳ್ಳದೆ ಉಳಿದ
ಪದಗಳಿಗೂ ಬೇಸರ
ಸುಯ್ ಗುಟ್ಟುವ ಗಾಳಿ
ಗುಯ್ ಗುಟ್ಟುವ ಬಿಂದಿಗೆ
ತುಂಬದ ಭಾವಗಳು
ಸದ್ದಾಗಿಯೇ ನಿಃಶಬ್ದ...!

Thursday 7 July 2022

ಕವಿತೆ

ಮಲ್ಲಿಗೆ

ಮಲ್ಲಿಗೆ ಮೊಗ್ಗು 
ಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತು
ತಾಕೀತು ಮಾಡಿ
ಬೇಲಿ ಮೈಮೇಲೆಳೆದಿದ್ದಳು

ಮಲ್ಲಿಗೆಯ ಕಂಪಿಗೆ 
ನಾಲ್ಕು ಮನೆ ದೂರದ ಸಂಪಿಗೆ
ಅಸೂಯೆ ಹೊದ್ದು ಮೊಲ್ಲೆಯ ಕೊಂಡಾಡಿದಳು
ನಾಲಿಗೆಗೆ ಮುಳ್ಳು ಚುಚ್ಚಿಕೊಂಡು!

ಹಿತ್ತಲ ದಾರಿಯಲ್ಲಿ ಬಂದ ಬಾಲೆ
ಮುಂಬಾಗಿಲಿ ಮಲ್ಲಿಗೆಯ ಕಂಪು 
ಬಲು ಹಿತವೆಂದು ಹೇಳಿದಾಗ 
ತುಸು ಸಮಾಧಾನ

ಬೇಲಿಯೊಳಗೆ ಕಮರಿ ಹೋಗುತ್ತಿದ್ದವಳ
ಆಗೊಮ್ಮೆ ಈಗೊಮ್ಮೆ ಹೂ ಮಾಲೆ ಮಾಡಿ
ದೇವರ ತೆಲೆಗೆ ; ಹೆಣ್ಮಕ್ಕಳ ಮುಡಿಗೆ
ಏರಿಸಿ ನಲಿವ ಅಜ್ಜಿ ಮಲ್ಲಿಗೆಗೆ ಆಪ್ತಳು

ಅವಳೊಮ್ಮೆ ಗೊತ್ತಿದ್ದೂ 
ಏಕೋ ಏನೋ ಚುಚ್ಚಾಡುತ್ತಾಳೆ,
"ತಾನು ಹೊರಗೆ ಹೋಗಲೆಂದೇ ಕಾದಿದ್ದಾಳೆ ಮಲ್ಲಿಗೆ
ಬೇಲಿ ಬೇಧಿಸಿ ಕಂಪಿನೊಂದಿಗೆ ಹಾರಿ ಹೋಗಲೆಂದು"...

ಆಪಾದನೆ ಮಲ್ಲಿಗೆಗೆ
ಇದ್ದದ್ದೇ...
ಹೆಚ್ಚು ಅವಕಾಶಗಳ ಹೊಂದಿದವರು
ಅವಕಾಶಗಳಿಗೆ ಕುರುಡಾದವರನ್ನು
ಹೀಗೆಯೇ ಪ್ರಚೋದಿಸುತ್ತಾರೆ...

ಎಂದೋ ಒಮ್ಮೆ ಬರ ಬಿಸಿಲಿಗೆ ಬಾಡಿ
ಬಿರು ಮಳೆಗೆ ಬೆದರಿ ಬಿದ್ದು 
ಮಣ್ಣಾಗುವ ಮಲ್ಲಿಗೆ
ಮತ್ತೆ ನಗುವಳು ಮೊಗ್ಗೊಡೆದು ಮೆಲ್ಲಗೆ

ಧನ್ಯವಾದಗಳೊಂದಿಗೆ
 ದಿವ್ಯ ಆಂಜನಪ್ಪ