Sunday 30 June 2013

ಚುಟುಕು

*ತಿಳಿ*

ಮನ್ಮಥನೆಂದೇ ನೀ
ಕರೆಯಿಸಿಕೊಂಡರೂ
ನಿನ್ನ ಮೇಲಾಗೊ
ಬಾಣ ಪ್ರಯೋಗ ಮಾತ್ರ
ನನ್ನದೆ!!.............. 

-ದಿವ್ಯ ಆಂಜನಪ್ಪ

30/06/2013

Saturday 29 June 2013

ಚುಟುಕು

*ಬಂಧು*

ಬಯಸದೆ ಬಂದೆ
ಮನದಲಿ ನಿಂದೆ
ಮರೆಯಾದೆ 
ಏಕೆ
ಓ ಬಂಧು!


-ದಿವ್ಯ ಆಂಜನಪ್ಪ
23/06/2013

ಲೇಖನ

ಹುಚ್ಚು ಪ್ರೀತಿ

ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು
ಮರು ಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ…
(ಹೆಚ್.ಎಸ್. ವೆಂಕಟೇಶ್ ಮೂರ್ತಿ)

ಹುಚ್ಚು ಪ್ರೀತಿ ಎಂದಾಕ್ಷಣ ಬಿ.ಆರ್.ಛಾಯಾರವರು ಹಾಡಿದ ಈ ಸಾಲುಗಳು ನೆನಪಾಗುತ್ತದೆ. ಎಷ್ಟು ಅರ್ಥಪೂರ್ಣ ಹಾಗೂ ಸತ್ಯ. ಮಾತು ಮಾತಿಗೂ ನಗು, ಸದಾ ಕಾಲ ಖುಷಿ, ಅದೇಕೋ ಮೌನ, ತನ್ನಂದವ ತಾನೇ ನೋಡಿ ನಲಿವ ಮನಸ್ಸು, ಹೇಗೆ ಕಾಣುವೆನೋ ತಿಳಿಯಲು ಕನ್ನಡಿ ಮುಂದಷ್ಟು ಹೊತ್ತು ಕಳೆವ, ಮನದಲ್ಲೇ ಪದ ಕಟ್ಟುವ ಅದೂ ಕವನವೇ ಆದರೂ ಕವನವೆಂದು ಬರೆಯಲು ತಿಳಿಯದ ಹದಿನಾರರ ವಯಸ್ಸಿನ ಮನಸ್ಸು ಅದು.
ಹದಿನಾರರ ವಯಸ್ಸು ಎಂದರೆ ಹದಿಹರೆಯದ ವಯೋಮಾನ. ಪ್ರೀತಿ ಬಯಸುವಂತ ಮನಸ್ಸು ಹುಟ್ಟುವ, ಪ್ರೇಮ ಭಾವನೆಗಳು ಮೂಡುವ ಕಾಲವೆಂದು ಸಾಮಾನ್ಯವಾಗಿ ಹೇಳುತ್ತೇವೆ. ಅದೇ ರೀತಿ ಜೀವನದ ಯಾವುದೇ ವಯೋಮಾನದವರಾದರೂ ಪ್ರೀತಿ ವಿಚಾರದಲ್ಲಿ ಚಿಕ್ಕ ಪ್ರಾಯದವರೇ ಆಗಿಬಿಡುತ್ತಾರೆ. ಅದೇ ತುಂಟತನವನ್ನು ಮತ್ತೆ ಪಡೆದು ಬಿಡುತ್ತೇವೆ. ಆಗ ವಯಸ್ಸಿನ ಪ್ರಭಾವದಿಂದ ತುಂಟರಾದರೆ, ಪ್ರೌಢರಲ್ಲಿ ಪ್ರೀತಿಯು ತುಂಟತನವನ್ನು ತಂದಿರುತ್ತದೆ. ಅದೇ "ಪ್ರೀತಿಯ ಸುಖ". ನಮ್ಮ ತುಂಟತನವನ್ನು ಸಹಿಸುವ ನಮ್ಮನ್ನು ಮಕ್ಕಳಂತೆ ರಮಿಸುವ ಆ ಇನ್ನೊಂದು "ಜೀವದ ಆಪ್ಯಾಯಮಾನ ಪ್ರತಿಸ್ಪಂದನೆ"ಯೇ ಪ್ರೀತಿಯ "ಬಂಧ-ಸಂಬಂಧ". ಜೀವನದಲ್ಲಿ ಇಂತಹದೊಂದು ಬಂಧವು ಸಿಗುವುದೇ ಒಂದು "ಅದೃಷ್ಟ" ಎಂದೆನ್ನಬಹುದು.
ಎಲ್ಲೋ ಕೇಳಿದ ಮಾತು," ಹಸಿವಿನಿಂದ ಸತ್ತವರಿಗಿಂತ, ಪ್ರೀತಿಗಾಗಿ ಹಂಬಲಿಸಿ ಸತ್ತವರೇ ಹೆಚ್ಚು". ಹೌದು ಕೆಲವೊಮ್ಮೆ ನಾವು ಬಯಸಿದವರು ಅದೇಕೋ ದೂರಾಗಿಬಿಟ್ಟಿರುತ್ತಾರೆ. ಹಲವು ಪ್ರಿಯ ಮುಖಗಳನ್ನು ಕಂಡಿದ್ದರೂ ಪ್ರೀತಿ ಹುಟ್ಟಿರುವುದಿಲ್ಲ. ಎಂದೊ ಹೇಗೊ ಪ್ರೀತಿ ಅಂಕುರವಾದಾಗ, ಅವರಿಗಾಗಿಯೇ ಕಾಯುತ್ತೇವೆ. ಅವರನ್ನೇ ಹಂಬಲಿಸುತ್ತೇವೆ. ಅದೇ ನೀಯತ್ತು. ಪ್ರೀತಿಯಲ್ಲಿ ಪ್ರಾಮಾಣಿಕತೆ ಬಹು ಮುಖ್ಯ. ಸಾಮಾನ್ಯವಾಗಿ ನಂಬಿಕೆ ಮುಖ್ಯವೆಂದು ಕೇಳಿರುತ್ತೇವೆ. ನನ್ನ ಪ್ರಕಾರ ಪ್ರಾಮಾಣಿಕತೆಯು ಮುಖ್ಯ. ನಂಬಿಕೆಯು ಪ್ರಾಮಾಣಿಕತೆಯ ಹಿಂದೆಯೇ ಬರುವ ನೆರಳಿನಂತೆ ಎನ್ನಬಹುದು. ಜೀವನದಲ್ಲಿ ಯಾವುದಕ್ಕೆ ಅಪ್ರಾಮಾಣಿಕರಾದರೂ ಯಾರಿಗೂ ತಿಳಿಯದು, ಆದರೆ ಪ್ರೀತಿಗೆ ಅಪ್ರಾಮಾಣಿಕರಾದರೆ ಕೊನೆಗದು ಯಾರಿಗೂ ಕಾಣದೆ ನಮ್ಮನ್ನಷ್ಟೆ ಕಾಡುವ ವ್ಯಾದಿಯಾಗಿಬಿಡುತ್ತದೆ.
ಆದ್ದರಿಂದ ನಮಗಾಗಿ ಜೀವಿಸೋಣ. ನಮ್ಮ ಆತ್ಮ ಸಾಕ್ಷಿಗೆ ಒಪ್ಪಿಗೆಯಾಗುವಂತೆ ನಡೆಯೋಣ. ಎಲ್ಲೋ ಗುಡಿಯಲ್ಲಿರುವ ದೇವನಿಗೆ ಹರಕೆ ಹೊತ್ತು ಸಂತುಷ್ಟಗೊಳಿಸಿ ಸಂತೋಷವನ್ನು ಬೇಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ದೇವನೆಂಬ ಮನಃಸಾಕ್ಷಿಯು ಒಪ್ಪುವಂತಹ ನಡೆ ನಮ್ಮದಾದಾಗ ಜೀವನ ಸಂತಸದಾಯಕ. ಪ್ರೀತಿಗೂ ಮನಃಸಾಕ್ಷಿಗೂ ತೀರ ಹತ್ತಿರದ ನಂಟೆಂದೇ ಹೇಳಬಹುದು. ಹಾಗಾಗಿ ಪ್ರೀತಿಯೇ ದೇವರೆಂದು ತಿಳಿದರೆ ತಪ್ಪಾಗಲಾರದು. ಪ್ರೀತಿಗೆ, ಪ್ರೀತಿಸುವವರಿಗೆ ಎಂದೂ ನೋವೆಂಬ ಅಪಚಾರವನ್ನು ಮಾಡದಿರೋಣ. ಕಳೆದುಕೊಂಡ ಮೇಲೆ ಹುಡುಕಿ ಸಿಗದೆ ವ್ಯಥೆ ಪಡುವುದಕ್ಕಿಂತ ಪ್ರೀತಿಸುವವರೊಂದಿಗೆ ಪ್ರೀತಿಯಿಂದ ಪ್ರೀತಿಗಾಗಿ ಜೀವನ ಸಾಗಿಸುವುದು ಒಳಿತಲ್ಲವೇ?
"ಹುಚ್ಚು ಪ್ರೀತಿ", ಎಂಬ ಶೀರ್ಷಿಕೆ ಇಟ್ಟಾಕ್ಷಣ ಪ್ರೀತಿಯೊಂದು ಹುಚ್ಚು ಎಂದು ಹೇಳಲು ನಾ ಹೊರಟಿಲ್ಲ. ನನ್ನರ್ಥ ಇಷ್ಟೆ; ಪ್ರೀತಿಯಲ್ಲಿ ತನ್ನನ್ನು ತಾನು ಮರೆತು, ಪ್ರೀತಿಯಲ್ಲಿ ಬೆರೆತು, ಅತೀ ಮೃದು, ಅತೀ ಮುದ್ದು, ಅತೀ ಮುಗ್ಧತೆಗಳನ್ನು ಪಡೆದುಬಿಡುತ್ತೇವೆ. ನಾವು ಮತ್ತೊಮ್ಮೆ ಮಕ್ಕಳಾಗಿಬಿಡುತ್ತೇವೆ. " ತುಂಬಾ ಗಂಭೀರ" ಎನಿಸಿಕೊಳ್ಳುವ ವ್ಯಕ್ತಿಯೂ ತನ್ನ ಪ್ರಿಯರೊಂದಿಗೆ ಚಿಕ್ಕ ಮಗುವಿನಂತೆ ಕಾಡುವ, ಬೇಡುವ, ಅಳುವ; ಮರು ಘಳಿಗೆಯಲ್ಲಿಯೇ ತುಂಟತನದಿ ಮೆರೆವ ಮುದ್ದು ಮರಿಯಾಗುತ್ತಾನೆ. ಇದನ್ನೇ ಪ್ರೀತಿಯಲ್ಲಿನ ಹುಚ್ಚು ಎನ್ನುವುದು. ಜೀವನದ ಘಟ್ಟಗಳಲ್ಲಿ ಕಲ್ಲಿನಂತೆ ಕಷ್ಟಗಳನ್ನು ಎದುರಿಸಿದ್ದರೂ ತನ್ನ ಪ್ರೀತಿಯ ಮುಂದೆ ಕರಗಿ ನೀರಾಗುವ ಮಂಜುಗಡ್ಡೆಯೇ ಸರಿ. ನೋಡಲು ಗಟ್ಟಿ ಆದರೆ ಕರಗುವುದಂತೂ ನಿಜ!. ಇಲ್ಲಿ ಗಡಸುತನದ, ಒರಟುತನದ, ಬಿಗುಮನಸ್ಸಿನ ಸನ್ನಿವೇಶಗಳಿಲ್ಲ. ಎಲ್ಲವನ್ನು ಮೃದುತ್ವ ಆವರಿಸಿಬಿಡುತ್ತದೆ.
ಈ ಪ್ರೀತಿ ಪ್ರಯಾಣದಲ್ಲಿ ಸಂಶಯ ಸ್ಥಿತಿ (ಕನ್ಪ್ಯೂಷನ್ ಸ್ಟೇಟ್) ಒದಗುವುದು ಮೋಹ(ಕಾಮ)ವು ಎದುರಾದಾಗ. ಎಂದೊ ರೇಡಿಯೋದಲ್ಲಿ ಕೇಳಿದ ನೆನಪು; "ಕಾಮದ ಕೆಸರಿನಲ್ಲಿಯೇ ಪ್ರೀತಿಯ ಕಮಲ ಹುಟ್ಟುವುದು" ಎಂಬ ಅರ್ಥದ ಭಾವಗೀತೆಯ ಸಾಲನ್ನು; ಹೆಣ್ಣೊಂದು ಹಾಡಿದ್ದ ಹಾಡು ಅದಾಗಿತ್ತು. ನನ್ನ ಪ್ರಕಾರ ಆ ಭಾವಗೀತೆಯು ಕವಿಯದ್ದೇ, ಕವಯತ್ರಿಯದಂತೂ ಅಲ್ಲ. ಕವಯತ್ರಿಯು ಬರೆದಿದ್ದರೆ "ಪ್ರೀತಿಯ ಹೂ ಅರಳಿ ಕಾಮದಿ ಕಾಯಾಗಿದೆ" ಎಂಬ ಭಾವಗಳಲ್ಲಿ ಗೀತೆ ರಚನೆಯಾಗಿರುತ್ತಿತ್ತು. ಹೂವನ್ನು ಪ್ರೀತಿಯ ಪ್ರತೀಕವಾಗಿ ನಾವು ಕಾಣುತ್ತೇವೆ. ಹೂವಿನ ಅಂದಕ್ಕೆ ಮಾರು ಹೋಗಿ ಮಧುವರಸಿ ಬಂದ ದುಂಬಿಗಳ ಸಹಾಯದಿಂದ ಹೂವಿನಲ್ಲಿ ಪರಾಗಸ್ಪರ್ಶವೇರ್ಪಟ್ಟು ಹೂವಿಂದ ಕಾಯಿಯಾಗುತ್ತದೆ. ಹಾಗೆಯೇ ಪ್ರೀತಿಯಿಂದ ಪ್ರೀತಿಗಾಗಿ ಹಂಬಲಿಸಿದ ಮನಗಳಲ್ಲಿ ಪ್ರೇಮವಾಗಿ ದಾಂಪತ್ಯವು ಪ್ರಾರಂಭವಾಗುವುದು ಪ್ರಕೃತಿ ನಿಯಮ. ಪ್ರೀತಿಯಿಂದ ಕಾಮವು ಹುಟ್ಟೀತೇ ವಿನಃ, ಕಾಮದಿಂದ ಎಂದಿಗೂ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ಒಮ್ಮೆ ತನ್ನ ನಲ್ಲನನ್ನು ತುಂಬಾ ಪ್ರೀತಿಸುವ ಹುಡುಗಿಯು ಅವನೆಷ್ಟೇ ಬೇಸರ ತರಿಸಿದರೂ. ಏನೇ ಜಗಳವಾದರೂ ತಾನೇ ಸೋತು ಅವನನ್ನು ರಮಿಸಿ ಮಾತನಾಡಿಸುವಾಗ ಆತ, "ಇಷ್ಟೆಲ್ಲಾ ಸೋಲುವಳಲ್ಲ?" ಎಂದು ಯೊಚಿಸಿ ತಿರುಗಿ, "ಏನು ಬೇಕು?" ಎಂದು ಕೇಳಿಬಿಟ್ಟರೆ ಅವಳಲ್ಲಾಗುವ ಆಘಾತಕ್ಕೆ ಪದಗಳಿಲ್ಲ,,,,,, "ಪ್ರೀತಿ" ಎಂದು ಉತ್ತರಿಸಲೂ ಆಗದ ಮನಃಸ್ಥಿತಿ. ತನ್ನನ್ನೇ ತಾನು ಕೀಳಾಗಿ ಕಾಣುವಂತೆ ಮಾಡಿಬಿಟ್ಟಿರುತ್ತಾನೆ ಆತ. ಅದರ ಮೇಲೂ ತನ್ನ ದೃಢತೆಯಿಂದ "ಪ್ರೀತಿನೇ" ತನಗೆ ಬೇಕಾದ್ದು ಎಂದುಳಿಯುವ ಹೆಣ್ಣಿಗೆ ಕೊನೆಗೊಂದು ದಿನ ಪ್ರೀತಿ ಸಿಕ್ಕೀತ್ತೇನೊ?.
ಇದೇ ನೋಡಿ ಗಂಡು-ಹೆಣ್ಣಿನಲ್ಲಿನ ವ್ಯತ್ಯಾಸ. ಹೆಣ್ಣು ಪ್ರೀತಿಯನ್ನು ಪ್ರೀತಿಯಿಂದ ನೋಡುವಾಗ, ಗಂಡು ಪ್ರೀತಿಯ ಹೊರತುಪಡಿಸಿ ಕೇವಲ ಕಾಮ/ಮೋಹವಾಗಿ ಪರಿಗಣಿಸುತ್ತಾನೆ. ಈ ವ್ಯತ್ಯಾಸಗಳು ವ್ಯತ್ಯಾಸವಾಗಿ ಇಬ್ಬರ ಭಾವವೂ ಒಂದೇ ಆಗಿಬಿಟ್ಟರೆ ಪ್ರೀತಿಗೆ-ಮಾನವೀಯತೆಗೆ ಬೆಲೆ. ಆಗಲಾದರೂ ಹೆಣ್ಣಿನ ಮೇಲಿನ ದೌರ್ಜನ್ಯಗಳು ಕಡಿಮೆಯಾದೀತು. ಹೆಣ್ಣನ್ನು ಪ್ರೀತಿಸುತ್ತಿಲ್ಲ, ಅದಕ್ಕಾಗಿಯೇ ಅವಳನ್ನು ಒಲಿಸಲು, ರಮಿಸಲು ಗಂಡು ಮೃದುವಾಗುವ ಅವಕಾಶವೇ ಇಲ್ಲ. ಬದಲಾಗಿ ಅವಳನ್ನು ಕ್ರೂರವಾಗಿ ನೆಡೆಸುತ್ತಿದ್ದಾರೆ, ದುಡಿಸುತ್ತಿದ್ದಾರೆ, ಹಿಂಸಿಸುತ್ತಿದ್ದಾರೆ.
ಇಷ್ಟಾಗಿಯೂ ಹೆಣ್ಣಿನಲ್ಲಿ ಪ್ರೀತಿಯ ಮೇಲೆ ನಂಬಿಕೆಯಿದೆ. ಅದರಲ್ಲೂ ತನ್ನ ಪ್ರೀತಿಯ ಮೇಲೆ. ಸಾಯುವ ಮುನ್ನ ಸಿಕ್ಕೀತ್ತೆಂಬ ಆಶಯವಷ್ಟೇ. ಅಂತಹ ಪ್ರೇಮಮೂರ್ತಿ ಹೆಣ್ಣನ್ನು ಯಾವ ಕಾರಣಕ್ಕೆ ಬೀಳಾಗಿ ಕಾಣುವರೋ ಕಾಣೆ. ಹೆಣ್ಣನ್ನು ಗಂಡು ಯಾವುದರಲ್ಲೂ ಸೋಲಿಸಲು ಸಾಧ್ಯವೇ ಇಲ್ಲ. ಎಲ್ಲಾ ಕ್ಷೇತ್ರದಲ್ಲೂ ಗಂಡಿಗಿಂತ ಹೆಚ್ಚು ಸಮರ್ಥಳು. ಆದರೆ ಅದೇ ಹೆಣ್ಣನ್ನು ಪ್ರೀತಿ/ಭಾವನೆಗಳ ಅಂಕುಶದಿಂದ ಸೋಲಿಸಿ ಪುರುಷ ಪ್ರಧಾನ ಸಮಾಜವನ್ನು ನಿರ್ಮಿಸಿಕೊಂಡಿದ್ದಾನೆ ಅಷ್ಟೆ. ಹೆಣ್ಣಿನ ಪ್ರೀತಿಯ ಹಂಬಲವಷ್ಟೇ ಗಂಡಿನ ಶಕ್ತಿ.
ಇವೆಲ್ಲವೂ ತಿಳಿದಿದ್ದರೂ ಪ್ರೀತಿಯೆಂಬ ಹೊಳೆಯಲ್ಲಿ ಧುಮುಕಲು ಹೆಣ್ಣು ಅಂಜುವುದೇ ಇಲ್ಲ. ಆದರೆ ಗಂಡು ಅಂಜುತ್ತಾನೆ:-) ನನ್ನಕ್ಕ ಹೇಳುತ್ತಿದ್ದಳು, "ನಿಜವಾದ ಪ್ರೀತಿ-ಪ್ರೇಮಗಳೆಲ್ಲಾ ಕಥೆ-ಕಾದಂಬರಿ-ಸಿನೆಮಾಗಳಲ್ಲಿ ಮಾತ್ರ, ನಿಜ ಜೀವನದಲ್ಲಿ ಬಯಸಿ ನಿರಾಶರಾಗಬಾರದು", ಎಂದು, ಇರಬಹುದೇನೋ ಕಥೆ-ಕಾದಂಬರಿಗಳಲ್ಲೇ ಖುಷಿ ಹೆಚ್ಚು. ಆದರೂ ತಮ್ಮ ತಮ್ಮ ಜೀವನಗಳನ್ನು ಸುಂದರ ಪ್ರೀತಿಮಯ ಕಾದಂಬರಿಯನ್ನಾಗಿ ಪರಿವರ್ತಿಸುವ ಹಂಬಲವನ್ನು ಮಾತ್ರ ಯಾರೂ ಕೈ ಬಿಡಬಾರದು. ಒಳ್ಳೆಯದಕ್ಕೆ ಕಾಲವುಂಟು, ಪ್ರಾಮಾಣಿಕತೆಗೆ ಬೆಲೆಯುಂಟು, ಕಾಯಬೇಕಷ್ಟೆ. ಹುಚ್ಚು ಪ್ರೀತಿಯಲ್ಲಿ ಮುಳುಗೇಳುವ ಅವಕಾಶವನ್ನು ಕೈಬಿಟ್ಟು ಕೊನೆಗೆ ವಿಧಿಯನ್ನು ಹಳಿಯದಿರಿ. ಎಲ್ಲಿ ಎಲ್ಲರೂ ತಮ್ ತಮ್ಮ ಪ್ರೀತಿಯನ್ನು ನೆನೆದು, ತುಂಟತನದ ನಗೆಯೊಂದನ್ನು ಬೀರಿ…! :)

ಪಂಜು ಪತ್ರಿಕೆಯಲ್ಲಿ 
ಧನ್ಯವಾದಗಳು ಪಂಜು :-)


-ದಿವ್ಯ ಆಂಜನಪ್ಪ
09/05/2013

Friday 28 June 2013

ಹನಿ

ಕರ್ಮ

ಜೀವನದ ಕೆಲವು ಕ್ಷಣಗಳೇ ಹಾಗೆ
ಮರೆಸಿಬಿಡುವವು
ತಾನು ಯಾರು?
ತನ್ನವರು ಯಾರು?
ತನಗಾಗಿ ಯಾರು?
ತನ್ನ ಸುಖವೇನು?
ಎಂಬೆಷ್ಟೋ ಪ್ರಶ್ನೆಗಳ;
ಕಣ್ಮುಂದಿನ ಕರ್ಮವಷ್ಟೇ
ನಮ್ಮದಾಗಿರಲು
ತಮ್ಮ ನೋವುಗಳು
ಇದ್ದು ಇಲ್ಲದಂತಾಗಿಬಿಡುವವು.

27/06/2013

Wednesday 26 June 2013

ಚುಟುಕು

ಹಾಗೆ ಸುಮ್ಮನೆ.... :-)

ಒಂಟಿತನ
ಹಸಿವು
ಬೇಸರ
ಧೃತಿಗೆಡಲು
ಈ ಮೂರೇ
ಕಾರಣ


-26/06/2013

ಹನಿ

ಪ್ರಿಯನೇ

ನೀ ಹಾಡಿದೆ
ಮೈ ಮರೆಸಿದೆ.
ನಾ ಹಾಡಲು ತುಸು ತಡವಾಗಿದೆ.
ಕಾರಣ ನೀನೇ
ನಿನ್ನ ಹಾಡಿನ ಧಾಟಿಯೇ
ಭಾವದ ತುಡಿತವೇ
ಗೊತ್ತಿದ್ದೂ ಏಕೀ ಮುನಿಸು 
ಓ ನನ್ನ ಪ್ರಿಯನೇ........... :-)

-ದಿವ್ಯ ಆಂಜನಪ್ಪ
25/06/2013

ಚುಟುಕು

ಸ್ಫೂರ್ತಿ

ದೀಪದಿಂದ ದೀಪದೆಡೆಗೆ
ಬೆಳಕು ಹರಿವಂತೆ
ಹೃದಯದಿಂದ ಹೃದಯದೆಡೆಗೆ 
ಒಲವು ಮಿಡಿದಂತೆ
ಅವನ ಪ್ರೇಮ ಎನ್ನಡೆಗೆ
ನಿರಂತರ ನೆರಳಾಗಿ ಬಂದಂತೆ....... :-)

-ದಿವ್ಯ ಆಂಜನಪ್ಪ

26/06/2013

Tuesday 25 June 2013

ಲೇಖನ

ಕುವೆಂಪುರವರ ಸೂರ್ಯ ಗೀತೆ; ವಿಶ್ಲೇಷಣೆ


ಆನಂದಮಯ ಈ ಜಗಹೃದಯ………

ಕುವೆಂಪುರವರ ಸೂರ್ಯಗೀತೆಗಳಲ್ಲಿ ಪ್ರಸಿದ್ಧವಾದ ಈ ಗೀತೆಯೂ ಒಂದು. ಕವಿಗಳು ಈ ಜಗತ್ತಿನ ಎಲ್ಲಾ ಆಗೂ-ಹೋಗುಗಳ ಮೂಲವು 'ಶಿವ'ನೆಂದು ಭಾವಿಸುತ್ತಾರೆ. ಹಸುರಿನಿಂದ ನಳನಳಿಸುವ ಸಹ್ಯಾದ್ರಿಯಂತಹ ಬೆಟ್ಟಗಳು-ಅರಣ್ಯಗಳು. ಭೋರ್ಗರೆವ ಸಾಗರ, ನೀಲಿ ಆಕಾಶ, ಧುಮ್ಮಿಕ್ಕುವ ಜಲಧಾರೆ, ಸೋನೆ ಮಳೆ, ಹಕ್ಕಿಗಳ ಚಿಲಿಪಿಲಿ, ಮೋಡಗಳ ಘರ್ಜನೆ, ಹಾಡುವ ಕೋಗಿಲೆಗಳ ಕಂಠ ಸಿರಿ- ಹೀಗೆ ಪ್ರಕೃತಿಯ ಪ್ರತೀ ಸೌಂದರ್ಯದಲ್ಲೂ ಶಿವನ ಹೃದಯವು ವಿಸ್ತರಿಸಿದೆ ಎಂದು ಕವಿ ಉನ್ಮತ್ತರಾಗಿ ಹಾಡಿದ್ದಾರೆ.

ಪ್ರಕೃತಿಯಲ್ಲಿ ಸಾಧಾರಣವಾಗಿ ಸಂಭವಿಸುವ ಸೂರ್ಯೋದಯ ಚಂದ್ರೋದಯವೂ ದೇವನ ದಯೆ ಎಂದಿದ್ದಾರೆ. ಸೂರ್ಯೋದಯ ಚಂದ್ರೋದಯಗಳನ್ನು ವೈಜ್ಞಾನಿಕ ದೃಷ್ಟಿಯಿಂದ ವಿವರಿಸುವಾಗ, ಸೂರ್ಯವೊಂದು ನಕ್ಷತ್ರ, ಆ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಭೂಮಿಯನ್ನೊಳಗೊಂಡ ಇತರೆ ಏಳು ಗ್ರಹಗಳು ಅದನ್ನು ಸುತ್ತುತ್ತಿರುತ್ತವೆಂದು ಹೇಳುತ್ತೇವೆ. ಕೆಲ ಗ್ರಹಗಳು ಅದರವೇ ಉಪಗ್ರಹಗಳನ್ನು ಹೊಂದಿದ್ದು. ಆಯಾ ಉಪಗ್ರಹಗಳು ಆಯಾ ಗ್ರಹಗಳನ್ನು ಸುತ್ತುತ್ತಿರುತ್ತವೆ. ಹಾಗೆಯೇ ಭೂಮಿಯೂ ಹೊಂದಿರುವ ಸ್ವಾಭಾವಿಕ ಉಪಗ್ರಹ 'ಚಂದ್ರ'. ಭೂಮಿಯ ಭ್ರಮಣೆ ಮತ್ತು ಪರಿಭ್ರಮಣೆಯಿಂದಾಗಿ ರಾತ್ರಿ-ಹಗಲು ಉಂಟಾಗುವ ಮೂಲಕ ನಮಗೆ ಸೂರ್ಯೋದಯ ಮತ್ತು ಚಂದ್ರೋದಯವಾದಂತೆ ಭಾಸವಾಗುತ್ತದೆ.  ಸೂರ್ಯೋದಯ ಮತ್ತು ಚಂದ್ರೋದಯದಿಂದಾಗುವ ಪ್ರಕೃತಿಯಲ್ಲಿನ ಬದಲಾವಣೆಗಳು ರೋಚಕವಾಗಿರುತ್ತವೆ. ಕೆಂಪೇರಿದ ಬಾನು, ಹೊನ್ನಿನ ಹತ್ತಿರಾಶಿಗಳಂತ ಮೋಡಗಳು, ಬೆಳದಿಂಗಳ ರಾತ್ರಿಗಳು. ಮನಸ್ಸಿಗೆ ಮುದ ನೀಡುವವು. ಈ ಎಲ್ಲಾ ಪ್ರಕ್ರಿಯೆಯು ದೇವರ ದಯೆಯೆಂದು ಕವಿಗಳು ಹೇಳಿದ್ದಾರೆ.

                ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ,
                ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ
                ಆನಂದಮಯ ಈ ಜಗಹೃದಯ

ಸೂರ್ಯನ ಬಿಸಿಲು- ಅದು ಬರೀ ಬಿಸಿಲಲ್ಲ, 'ಬೇಗೆ' ಎನ್ನದಿರು ಅದು ಸೂರ್ಯನ ಕೃಪೆಯೆಂದು ತಿಳಿಯೆಂದು ಹೇಳಿದ್ದಾರೆ. ಹೌದು ಬಿಸಿಲು-ಬೆಳಕು ಇಲ್ಲದಿದ್ದರೆ ಜೀವರಾಶಿಗಳಿಲ್ಲಿ (ಭೂಮಿಯಲ್ಲಿ) ಜೀವಿಸಲು ಸಾಧ್ಯವೇ ಇಲ್ಲ. ಸೂರ್ಯನ ಬೆಳಕ್ಕಿಲ್ಲದ್ದಿದ್ದರೆ ಹಗಲು-ರಾತ್ರಿಗಳಿಲ್ಲ, ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆಯಿಲ್ಲ, ಸಸ್ಯಾವಲಂಬಿ ಪ್ರಾಣಿ-ಪಕ್ಷಿ-ಮಾನವ ಸಂಕುಲಕ್ಕೆ ಆಹಾರವಿಲ್ಲದೆ ಇಡೀ ವ್ಯವಸ್ಥೆಯೇ ಇಲ್ಲಾದಂತಾಗುತ್ತದೆ. ಹಾಗಾಗದಂತೆ ಸೂರ್ಯನು ಕೃಪೆ ತೋರಿ ಬಿಸಿಲನ್ನು ಧರೆಗೆ ನೀಡಿದ್ದಾನೆ. ಕವಿಯ ವೈಚಾರಿಕ ಮನೋಭಾವವನ್ನು ನಾವಿಲ್ಲಿ ಕಾಣಬಹುದು.

                ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ
                ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ
                ಆನಂದಮಯ ಈ ಜಗಹೃದಯ

ಉರಿವ ರವಿಯು ತೇಜಸ್ಸನ ಖಜಾನೆ. ಈ ರವಿಯ ವದನವು ಶಿವನ ಸದನವೆಂದು ಕವಿ ವರ್ಣಿಸಿದ್ದಾರೆ. ಅಂತಹ ಮಹಾ ಕಾಂತಿಯನ್ನು ಶಿವನಿದ್ದಲ್ಲಿ ಮಾತ್ರ ಕಾಣಲು ಸಾಧ್ಯ, ಹಾಗಾಗಿ ಶಿವನ ಸದನವೇ ರವಿಯ ವದನವೆಂಬ ಭಾವ ಈ ಗೀತೆಗೆ ಕಾಂತಿ ತಂದಿದೆ. ಶಿವನೆಂದರೆ ಸೌಂದರ್ಯ, ಕಾಂತಿ, ಪ್ರಭೆ ಎಂದು ಹೇಳುವಾಗ ಅರೆ ತೆರೆದ ಕಣ್ಣಿನ ಧ್ಯಾನಸ್ಥನಾದ ಶಿವನು, "ಶವ ಮುಖದ ಕಣ್ಣೋ" ಎಂದು ಕರೆಯಲ್ಪಟ್ಟಿದ್ದಾನೆ. ಅರೆಗಣ್ಣಿನ ಶಿವನ ಸೌಂದರ್ಯ ಅಮೋಘವಾದದ್ದು.
ಶಿವನಿಲ್ಲದೆ ಸೌಂದರ್ಯವೆಲ್ಲಿ? ಎನ್ನುವ ಕವಿ ಪ್ರಶ್ನೆಗೆ; ಕವಿಗಳೇ "ಪ್ರಕೃತಿ" ಎಂದು ಪರೋಕ್ಷವಾಗಿ ಉತ್ತರಿಸಿದ್ದಾರೆ. ಆ ಪ್ರಕೃತಿಯೇ ಶಿವನ ಹೃದಯ. ಈ ಸುಂದರವಾದ ಪ್ರಕೃತಿಯ ಒಂದು ಭಾಗ; ನಾವು-ನೀವು, ಆನಂದಮಯ ಶಿವನ ಹೃದಯದ ಒಂದಂಶ ನಾವೆಲ್ಲರೂ. ಕವಿ ಕಲ್ಪನೆಗೆ ಜೀವ ತುಂಬುವ ಸಲಿವಾಗಿ ನಾವೆಲ್ಲಾ ಈ ಆನಂದಮಯ ಜಗತ್ತಿನ ಆನಂದಕಂದಮ್ಮಗಳಾಗಬೇಕಿದೆ.

                ರವಿವದನವೇ ಶಿವಸದನವೋ ಬರಿ ಕಣ್ಣದು ಮಣ್ಣೋ
                ಶಿವನಿಲ್ಲದೆ ಸೌಂದರ್ಯವೇ ಶವಮುಖದ ಕಣ್ಣೋ
                ಆನಂದಮಯ ಈ ಜಗಹೃದಯ

ಉದಯಗಳಲ್ಲಿ ಹೃದಯವನ್ನು ಕಾವ್ಯದಲ್ಲಿ ಶಿವನನ್ನು ಕಾಣಬೇಕು ಎಂದು ಹೇಳುವ ಕವಿಗಳು, ಅವುಗಳನ್ನು ಕಾಣಲಾರದ ನಮ್ಮ ಕಣ್ಣು ನಿಷ್ಪ್ರಯೋಜಕವು ಹಾಗೂ ಅವುಗಳನ್ನು ಹಾಗೆ ಕಾಣದ
ಕವಿಯು ಕುರುಡನೆಂದು ಭಾವಿಸುತ್ತಾರೆ.

                ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ
                ಆನಂದಮಯ ಈ ಜಗಹೃದಯ

ಶಿವನನ್ನು ಕಾಣದ ಕವಿ ಕುರುಡನೇ ಸರಿ ಎಂದು ಹೇಳುವಾಗ ಈ ಗೀತೆಯ ಕವಿಗಳಲ್ಲಿನ ಹುದುಗಿದ ಒಂದು ಸಂಶಯದ ಛಾಯೆ ನಮ್ಮರಿವಿಗೆ ಬರುತ್ತದೆ. ಕವಿತ್ವದಲ್ಲಿ ಎಲ್ಲಾ ಕಲ್ಪನೆಗಳು ಸರಿಯೇ, ಆದರೆ ದೇವನು ಇದ್ದಾನೆಯೇ? ಎಂಬ ಪ್ರಶ್ನೆ ಸಹೃದಯನಲ್ಲಿ ಉದ್ಭವಿಸಿದಾಗ ಅದಕ್ಕೆ ಸಮಾಧಾನಕರ ಉತ್ತರವಾಗಿ ಅವರು ಈ ಸಾಲುಗಳನ್ನು ಸೇರಿಸಿರಬಹುದೇ ಎಂದೆನಿಸುತ್ತದೆ.
"ಶಿವ ಕಾವ್ಯದ ಕಣ್ಣೇ" ಎಂಬುದು ನಮಗೆ ಕಾವ್ಯದ ಇತಿಹಾಸವನ್ನು ಸ್ಮರಿಸುವಂತೆ ಮಾಡಿದೆ. ಭಾರತೀಯ ಕಾವ್ಯಮೀಮಾಂಸೆಯ ಉಗಮ ಕಾಲವನ್ನು ನೋಡಿದ್ದಾಗ, ಕಾವ್ಯಕ್ಕೆ ಮೂಲ ನಾಟಕಗಳು. ನಾಟಕ್ಕಕ್ಕೆ ಮೂಲ ನಾಟ್ಯ. ಈ ಎಲ್ಲಾ ಸಾಹಿತ್ಯ ಪ್ರಕಾರಗಳು ಹುಟ್ಟಿದ ಕತೆಯನ್ನು ಹೀಗೆ ವಿವರಿಸಲಾಗಿದೆ; ಲೋಕದ ಜನರು ದ್ವೇಶ ಅಸೂಯೆಗಳಿಂದ ಸಂಕಟಪಡುತ್ತಿದ್ದಾಗ ದೇವತೆಗಳಿಗೆ ಇವರ ಮೇಲೆ ಕರುಣೆಯುಂಟಾಗಿ ಬ್ರಹ್ಮ ದೇವನಲ್ಲಿ ಇವರ ಜಾಡ್ಯವನ್ನು ಹೋಗಲಾಡಿಸಲು ಯಾವುದಾದರೊಂದು ಮನೋರಂಜನ ಸಾಧನವನ್ನು ಕರುಣಿಸಬೇಕಾಗಿ ಕೋರುತ್ತಾರೆ. ಆಗ ಬ್ರಹ್ಮ ದೇವನು ಋಗ್ವೇದದಿಂದ ಭಾಷೆಯನ್ನು, ಯಜುರ್ವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವವೇದದಿಂದ ರಸಗಳನ್ನು ಆಯ್ದುಕೊಂಡು ಶಿವನಿಂದ "ನಾಟ್ಯ"ವನ್ನು ಪಡೆದು, ಅದನ್ನು "ನಾಟ್ಯವೇದ"ವೆಂದು ಸೃಷ್ಟಿಸಿ ಅದರ ಪ್ರಯೋಗವನ್ನು ಭರತಮುನಿಗೂ ಆತನ ನೂರುಮಂದಿ ಮಕ್ಕಳಿಗೂ ವಹಿಸಿಕೊಟ್ಟನೆಂದು ತಿಳಿದು ಬರುತ್ತದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಐದನೇ ವೇದ "ನಾಟ್ಯವೇದ"ವು ಸಾಹಿತ್ಯ ಪ್ರಕಾರಗಳಿಗೆ ಅಡಿಪಾಯದಂತಿದೆ. "ಶಿವನು ಕಾವ್ಯದ ಕಣ್ಣು" ಎನ್ನುವ ಕವಿಗಳ ಭಾವವನ್ನು ಐತಿಹಾಸಿಕ ಹಿನ್ನೆಲೆಯ ಆಧಾರದ ಮೇಲೆ ನಾವು ಒಪ್ಪಲೇ ಬೇಕಾಗಿದೆ. ಸ್ನೇಹಿತರೇ, ಕವಿಯ ಆಶಯದಂತೆ ಆನಂದಮಯ ಶಿವನ ಹೃದಯದಲ್ಲಿ ನಾವೆಲ್ಲರೂ ಆನಂದವನ್ನುಂಡು ಬದುಕನ್ನು ನಂದನವಾಗಿಸೋಣವೇ?.

ಪಂಜುವಿನಲ್ಲಿ
http://www.panjumagazine.com/?p=1506

ಧನ್ಯವಾದಗಳು.
-ದಿವ್ಯ ಆಂಜನಪ್ಪ
10/03/2013

ಹನಿಗವನ

**ಹೋರಾಟ**

ಹೆಣ್ಣಾಗಿ ಹುಟ್ಟಿ 
ಕಣ್ಣೀರಿಡದೇ ಜೀವಿಸುವ
ಛಲವೂ ಒಂದು ಶಾಪ.

ಸಂತೈಸುವ ಪ್ರಿಯನಿಲ್ಲದಾಗ 
ಅತ್ತರೆ ಮುತ್ತುವರು ಸುತ್ತಲಿನವರು

ಕೆಂಗಣ್ಣಿನಿಂದಲೇ ನಿಭಾಯಿಸುವಾಗ 
ಅತ್ತು ಹಗುರಾಗಲು 
ಇಲ್ಲ ಅರೆ ಘಳಿಗೆ ಬಿಡುವು 

ಕ್ಷಣ ಕ್ಷಣಕ್ಕೂ ನಿಟ್ಟುಸಿರಾದಳು

ಬದುಕೇಕಾಯಿತೋ
ನಿರಂತರ ಹೋರಾಟ.....

-24/06/2013

-

Sunday 23 June 2013

ನಾಟಕ

ಹುಗ್ಗಿ-ತುಪ್ಪ

ಜನಪದ ಕತೆಯ ನಾಟಕ ರೂಪಾಂತರ.


[ ಒಂದು ಊರಿನಲ್ಲಿ ಗಂಡ-ಹೆಂಡತಿಯೊಬ್ಬರು ಬಹಳ ಅನ್ಯೋನ್ಯದಿಂದ ಇರುತ್ತಾರೆ. ಅವರದು
ಬೇಸಾಯದ ಬದುಕು. ಅವರಲ್ಲಿ ಎರಡು ಎತ್ತುಗಳು ಇದ್ದವು. ಗಂಡ ಹೆಂಡತಿ ಇಬ್ಬರೂ ದೈವ
ಭಕ್ತರು. ಹಸಿದು ಬಂದವರಿಗೆ ಊಟೋಪಚಾರ ನೀಡದೆ ಮನೆಯಿಂದ ಕಳುಹಿಸುತ್ತಿರಲಿಲ್ಲ.
ವಿಚಿತ್ರಾ ಏನೆಂದರೆ ಅವರು ಪ್ರೀತಿಯಿಂದ ಒಬ್ಬರಿಗೊಬ್ಬರು ಅಡ್ಡ ಹೆಸರನ್ನು
ವಿಶಿಷ್ಟವಾಗಿ ಇಟ್ಟುಕೊಂಡಿದ್ದರು. ಹೆಂಡತಿಯನ್ನು 'ಉಗ್ಗಿ' ಎಂದೂ, ಗಂಡನನ್ನು
'ತುಪ್ಪ' ಎಂದೂ ಕರೆಯುತ್ತಿರುತ್ತಾರೆ. ಹಾಗೆಯೇ ಜೊತೆಗಿರುವ ಎರಡು ಎತ್ತುಗಳಿಗೆ,
ಒಂದಕ್ಕೆ 'ಅಯ್ಯ', ಇನ್ನೊಂದಕ್ಕೆ 'ದೊಣ್ಣೆ' ಎಂದೂ ಹೆಸರು ಇಟ್ಟು
ಕರೆಯುತ್ತಿರುತ್ತಾರೆ.]


                                                        ದೃಶ್ಯ-೧

                ಬೇಸಾಯದ ಒಂದು ದಿನ ತುಪ್ಪ(ಗಂಡ) ಹೊಲದಲ್ಲಿ ಕೆಲಸದಲ್ಲಿ ನಿರತನಾಗಿರುತ್ತಾನೆ. ಒಬ್ಬ
ಅಯ್ಯ (ವ್ಯಕ್ತಿ) ಈ ಮಾರ್ಗವಾಗಿ ಯಾವುದೋ ಊರಿಗೆ ಹೋಗುವ ಸಲುವಾಗಿ ಬರುತ್ತಿರುತ್ತಾನೆ.

        ತುಪ್ಪ:- (ಭಕ್ತಿಯಿಂದ)," ಸ್ವಾಮಿ ಇಲ್ಲಿ ಬರ್ರೀ"
                "ಸ್ವಾಮಿ ಎಲ್ಲಿಂದ ಬರ್ತಾ ಇದಿರೀ?,,, ಊಟ ಆಯ್ತಾ?".

        ಅಯ್ಯ:- (ಸ್ವಗತ) "ಸಧ್ಯ,, ಏನಾದ್ರೂ ಊಟ ಕೊಟ್ರೆ ಹೊಟ್ಟೆ ತುಂಬಿಸ್ಕೊಳ್ಬೋದು ಅಲ್ವೇ?".
                " ಇಲ್ಲಾ ಸ್ವಾಮಿ,,,,"

        ತುಪ್ಪ:- "ಹಸಿದು ಬಂದೊರ್ಗೆ ಊಟ ಕೊಡೊದು ನಮ್ಮ್ ಧರ್ಮ. ಸ್ವಾಮಿ ಅಂಗಾದರೆ ನೀವು
ನಮ್ಮನೀಗೆ                                ಹೋಗ್ರೀ".
                "ಮನೇಲಿ ಉಗ್ಗಿ(ಹೆಂಡತಿ) ಐತೆ, ಊಟಕ್ಕೆ ಬಡುಸ್ತಾರೆ.
                ನಾನು ಇನ್ನೂ ಸ್ವಲ್ಪವೊತ್ತು ಬೇಸಾಯ ಒಡೆದು ಬರ್ತೀನಿ".

        ಅಯ್ಯ:- (ಸ್ವಗತ) "ಹಸಿದೊಟ್ಟೆಗೆ ಹುಗ್ಗಿ ಊಟ!! ಯಾರು ಬ್ಯಾಡಂತಾರೆ?".
                "ಸರಿ, ಅಂಗೇ ಆಗ್ಲಪ್ಪ ನಾ ನಿಮ್ಮನೀಗ್ ವೊಯ್ತೀನಿ"

                                                        ದೃಶ್ಯ-೨

        [ಅಯ್ಯ, ಆ ಗಂಡ-ಹೆಂಡಿರ ಮನೆಗೆ ಬರುತ್ತಾನೆ. ಮನೆಯೊಡತಿ ತುಂಬಾ ಸಂತೋಷದಿಂದ
ಉಪಚರಿಸುತ್ತಾಳೆ. ಕೈ-ಕಾಲು ತೊಳೆದು ಬಂದು ಪಡಸಾಲೆಯ ಮೇಲೆ ಅಯ್ಯ ಕೂರುತ್ತಾನೆ]


        ಉಗ್ಗಿ:- "ಸ್ವಾಮಿ, ಈಗ ಊಟ ಮಾಡ್ತೀರೋ? ಅಥ್ವಾ ತುಪ್ಪ ಬಂದ್ಮೇಲೆ ಊಟ ಮಾಡ್ತೀರೋ?"

        ("ತುಪ್ಪ" ಅನ್ನುತ್ತಲೇ ಅಯ್ಯನ ಬಾಯಲ್ಲಿ ನೀರೂರಿತು)

        ಅಯ್ಯ:- (ಸ್ವಗತ) "ಹುಗ್ಗಿ ಜೊತೆಗೆ ತುಪ್ಪ ಬಿದ್ರೆ ಸಂದಾಕಿರ್ತದೆ ಅಲ್ವಾ?"
                "ಅಮ್ಮಾ, ತುಪ್ಪ ಬಂದ್ಮೇಲೇನೇ ಊಟ ಮಾಡ್ತೀನಿ"

        [ಗಂಡ-ಹೆಂಡಿರ ಹೆಸರು ತುಪ್ಪ-ಹುಗ್ಗಿ ಎಂದು ಅಯ್ಯನಿಗೆ ತಿಳಿದಿಲ್ಲ. ಸರಿ ಎಷ್ಟು
ಹೊತ್ತು ಕಳೆದರೂ ತುಪ್ಪ ಬರಲಿಲ್ಲ]


        ಅಯ್ಯ:- (ಸ್ವಗತ) "ಅರೆ, ಸಂಜೆನೇ ಆಯ್ತಾ ಬಂತೂ,,, ಎಲ್ಲೋ ಪ್ಯಾಟೆಗೆ ಹೋಗಿರ್ಬೇಕು
ತುಪ್ಪ ತರಕೆ".
                 ಅಗೋಳೊ! ಆವಯ್ಯನೂ ಬತ್ತವ್ನೆ!?,,,
                ಎರಡೆತ್ನೂ ಕೈಯಾಗ್ ಇಡ್ಕೊಂಡು, ನೋಗ ನೇಗ್ಲನ್ನು ಹೆಗಲ್ಗೆ ಆಕ್ಕೊಂಡು ಅಟ್ಟೀಗ್
ಬತ್ತಾವ್ನೆ,,,".

        ತುಪ್ಪ:- "ಸಾಕಾಯ್ತಪ್ಪ, ನೋಗ ನೇಗಿಲ್ನ ಇಲ್ಲೇ ಇಳ್ಸಣ".
                "ಅರೆರೆ, ದೊಣ್ಣೆ (ಎತ್ತು) ಕೈಯಿಂದ ಹಗ್ಗ ಕಳಚ್ಕೋಂಡ್ ಓಡ್ತಾಯ್ತೆ!!!?"

        [ದೊಣ್ಣೆ ಎಂಬೆತ್ತು ಹೊರಕ್ಕೆ ಓಡುತ್ತದೆ. ಇನ್ನೊಂದು ಎತ್ತು 'ಅಯ್ಯ'ನನ್ನು ಕೈಯಲ್ಲಿ
ಹಿಡಿದು, ಬಾರುಗೊಲನ್ನು ಹೆಗಲ ಮೇಲೆ ಹಾಕಿಕೊಂಡು ಮನೆಯೊಳಕ್ಕೆ ಬಂದು, ಅಯ್ಯ ಎಂಬ
ಎತ್ತನ್ನು ದನದಕೊಟ್ಟಿಗೆಗೆ ಹೊಡೆದ. ಅಯ್ಯ ತಪ್ಪಿ ಮನೆಯೋಳಕ್ಕೆ ನುಗ್ಗುತ್ತದೆ.]


        ತುಪ್ಪ:- (ಹೆಂಡತಿಗೆ) "ಅಲೆಲೇ, ಅಯ್ಯ ಒಳಗೆ ಬಂದಾನೆ, ಗೂಟ್ಕ ಕಟ್ಟಾಕು. ನಾನ್
ದೊಣ್ಣೆ ಹುಡ್ಕಂಡ್                                 ಬರ್ತೀನಿ"

        [ಪಡಸಾಲೆ ಮೇಲೆ ಕೂತಿದ್ದ ಅಯ್ಯ(ವ್ಯಕ್ತಿ), ಇವನು ಹೇಳಿದ ಮಾತುಗಳನ್ನು ಕೇಳಿಸಿಕೊಂಡ.]

        ಅಯ್ಯ:- "ಶಿವ, ಶಿವಾ ನಾನೇನು ತಪ್ಪ ಮಾಡ್ಡೀನಿ ಅಂತ ಗೂಟಕ್ಕೆ ಕಟ್ಟಿ
ಹಾಕ್ತಾರಪ್ಪಾ!!!. ಅಯ್ಯನ ಕಟ್ಟು, ದೊಣ್ಣೆ ಹುಡುಕ್ಕೋಂಡ್ ಬರ್ತೀನಿ ಅಂತ ಹೇಳಿ
ಹೋಗ್ತಾನಲ್ಲಾ?!!. ಇವುನ ಕೈಗೆ ಸಿಕ್ರೆ ನನ್ನ ಬಾರುಕೋಲಿಂದ ಚನ್ನಾಗ್ ಬಡಿತಾನೆ,,,"

        [ ಪಂಜೆ ಮೇಲಕ್ಕೆ ಕಟ್ಟಿಕೊಂಡು, ನೆಗೆದು,, ಓಟ ಕೀಳ್ತಾನೆ. ಅಷ್ಟರಲ್ಲಿ
ದೊಣ್ಣೆಯನ್ನು ಹುಡುಕಿಕೊಂಡು ತುಪ್ಪ ಮನೆಗೆ ಬರುತ್ತಾನೆ. ಅಯ್ಯ ಮನೆಯಲ್ಲಿ
ಇರುವುದಿಲ್ಲ]


        ತುಪ್ಪ:- (ಹೆಂಡತಿಗೆ) "ಅಯ್ಯ ಬಂದಿದ್ರು ಎಲ್ಲೇ?"

        ಹುಗ್ಗಿ:- "ಇಲ್ಲೇ ಕುಂತಿದ್ರು, ಊಟ ಮಾಡಿ ಅಂದ್ರೆ 'ತುಪ್ಪ ಬರ್ಲಿ' ಅಂದ್ರು,,,"
                "ಎಲ್ಲಿ ಓದ್ರೂ?"

        [ಹೊರಗೆ ಬಂದು ನೋಡುತ್ತಾಳೆ. ಅಯ್ಯ ಓಡುತ್ತಾ ಇರುತ್ತಾರೆ.]
                                                        ದೃಶ್ಯ-೩


        ಹುಗ್ಗಿ:- "ನೋಡ್ರೀ, ಅಯ್ಯ ಅಲ್ಲಿ ಓಡ್ತಾ ಇದಾರೆ......"

        ತುಪ್ಪ:- "ಅಲೇ. ನಮ್ಮನಿಗೆ ಬಂದವರು ಯಾರೂ ಅಂಗೆ ಹೋಗಿಲ್ಲ. ಬಂದಾರ್ಗೆ ಊಟಕ್ಕೆ
ಕೊಡೋದು ನಮ್ಮ ಧರ್ಮ. ಏನೇ ಆಗ್ಲೀ ಅವ್ರುನ ಹಿಡಿದು ಇಲ್ಲಿಗೆ ಕರ್ಕೊಂಡ್ ಬರ್ತೀನಿ"

        [ಅಯ್ಯನನ್ನು ಹಿಡಿಯಲು ಇವನೂ ದಾರೀಲಿ ಓಡುತ್ತಿರುತ್ತಾನೆ, ಬಾರು ಕೋಲು ಕೈಯಲ್ಲಿ
ಹಾಗೇಯೇ ಇರುವುದು]


        ತುಪ್ಪ:- " ಅಯ್ಯಾ,,, ಅಯ್ಯಾ,,,,,,,"

        [ಅಯ್ಯ ಒಂದು ಬಾರಿ ಹಿಂತಿರುಗಿ ನೋಡಿದ, ಇವನನ್ನೂ ಹಾಗೂ ಇವನ ಕೈಯಲ್ಲಿನ ಬಾರುಕೋಲನ್ನೂ!!!!.]

        ಅಯ್ಯ:- "ಇವನು ನನ್ನ ಬಡಿಯಾಕೆ ಬರಾದು,,!"

        (ಇನ್ನೂ ಜೋರಾಗಿ ಓಡುವುದಕ್ಕೆ ಶುರುವಿಕ್ಕಿದ. ದಾರಿಯ ಅಕ್ಕಪಕ್ಕದ ಜನರು
ಇವರಿಬ್ಬರನ್ನು ನೋಡುತ್ತಿರುತ್ತಾರೆ)

        ಜನ:- " ಅಯ್ಯ ಮನೇಲಿ ಏನೋ ಕಳ್ತನ ಮಾಡಿರ್ಬೇಕು, ಅದ್ಕೇ ಇಯಪ್ಪ ಹೊಡಿಯಾಕೆ ಬಾರುಕೋಲು
ತಗೊಂಡು ಓಡಿಸ್ಕೋಂಡು ಓಗ್ತಿರೋದು,,,"

        (ಇವನಿಗೆ ಅಯ್ಯನನ್ನು ಹಿಡಿಯಲಿಕ್ಕೆ ಆಗಲಿಲ್ಲ)

        ತುಪ್ಪ:- "ಓಡಿ ಓಡಿ ಸುಸ್ತಾಯ್ತು,,,,, ಸಿಕ್ಲಿಲ್ಲಾ,,,,,, ಸರಿ ಓದ್ರೆ ಓಗ್ಲಿ
ಬಿಡು,,,,,,,", " ಉಸ್ಸಪ್ಪಾ,,,"

        (ಮನೆಗೆ ಹಿಂದಿರುಗುತ್ತಾನೆ)
                                    *****       ********    ********     *****

                ಕೃಪೆ: ಅಡವಿಗುಮಾರ ಮತ್ತು ಇತರ ಜನಪದ ಕಥೆಗಳು"
                        (ಕಥಾಸಂಕಲನ)
                        - 'ಮೈಲಹಳ್ಳಿ ರೇವಣ್ಣ'
                ಪ್ರಸ್ತುತ 'ಹುಗ್ಗಿ-ತುಪ್ಪ', ಒಂದು ಹಾಸ್ಯ ಜನಪದ ಕಥೆ. ಈ ಜನಪದ ಕಥೆಯನ್ನು
ಸಂಭಾಷಣೆಗಳ ಮೂಲಕ ನಾಟಕವನ್ನಾಗಿಸುವ ಪ್ರಯತ್ನ ನನ್ನದು. ನನ್ನ ಶಾಲಾ ಮಕ್ಕಳಿಗೆ ನಾಟಕವಾಡಿಸುವ ಸಲುವಾಗಿ ತಯಾರಿಸಿದ್ದು. ನನ್ನೀ ಮೊದಲ ಪ್ರಯತ್ನಕ್ಕೆ
ನಿಮ್ಮಿಂದ ಸಲಹೆ-ಸೂಚನೆಗಳನ್ನು ನಿರೀಕ್ಷಿಸುತ್ತೇನೆ. 

ಧನ್ಯವಾದಗಳು.
                                                                                               


- ದಿವ್ಯ ಆಂಜನಪ್ಪ
10/04/2013

Saturday 22 June 2013

ಲೇಖನ

ಚೇತನ


"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. ಜಗತ್ತಿನ ಈ ಆಗು ಹೋಗುಗಳ ಕಾರಣಕರ್ತನನ್ನು ಒಂದು 'ಶಕ್ತಿ'ಯೇ ಎಂದು ಹೇಳಬಹುದು. ಆ ಶಕ್ತಿಯನ್ನು ಯಾವುದೇ ಧರ್ಮಕ್ಕಂಟಿಸದೆ "ಚೇತನ"ವೆಂದು ಹೆಸರಿಸುವುದು ಬಹುಸೂಕ್ತವೆನಿಸುತ್ತದೆ.

ಆ ಜಗತ್ಚೇತನದೆದುರು, ಮಾನವ ಸಣ್ಣದೊಂದು ಮಣ್ಣಿನ ಕಣಕ್ಕೆ ಸಮಾನ. 'ಚೇತನ'ವೆಂದರೆ ಜೀವಂತಿಕೆ, ಈ ಜೀವಂತಿಕೆಯ ಪ್ರತೀಕ 'ಹಸಿರು', ನಮ್ಮ ಪ್ರಕೃತಿ. ಜೀವರಾಶಿಗಳಿಗೆಲ್ಲಾ ನೆಲೆಬೀಡಾದ ಪ್ರಕೃತಿಯನ್ನೇ 'ಜಗತ್ಚೇತನ'ವೆಂದರೆ ತಪ್ಪಾಗಲಾರದು. ಪ್ರಕೃತಿಯ ವಿಸ್ಮಯಗಳ
ಮುಂದೆ ಮಾನವನ ತಂತ್ರಗಳಾವುವೂ ನೆಡೆಯದು. ಅವನೇನಿದ್ದರೂ ಚೇತನದೆದುರು ತಲೆಬಾಗಿ ನಿಂತ ಪುಟ್ಟಮಗುವಿನಂತೆ, ಹಾಗಿದ್ದರೇನೇ ಅದು ಚೆಂದ. ಅದನ್ನು ಬಿಟ್ಟು ಆ ಧೀಮಂತಕ್ಕೆ ಸೆಡ್ಡು ಹೊಡೆದು ನಿಲ್ಲಲು ಹೊರಟರೆ ನಿಲ್ಲಲು ನೆಲವೂ ಉಳಿಯದು. ಹೀಗಿರುವಾಗ ತೃಣಮಾತ್ರ
ಮಾನವನಿಗೇಕೆ ಈ  ಅಹಂ ಭಾವ?. ನನ್ನ ಮನೆ, ನನ್ನ ಕುಲ, ನನ್ನ ಕೀರ್ತಿ, ನಾನೇ ಶ್ರೇಷ್ಠ ಎಂಬ ಭಾವವೇಕೆ?

ಪರಿಸರದಲ್ಲಿನ ಅನೇಕ ಜೀವರಾಶಿಗಳಲ್ಲಿ ಮಾನವ ಸಂಕುಲವೂ ಒಂದು. ಮಾನವ ತನ್ನ ಜನಾಂಗಗಳಲ್ಲಿ ಜಾತಿ, ಧರ್ಮಗಳ ಬೇಲಿಗಳನ್ನು ಹೆಣೆದು, ಜಾತಿಗಳಲ್ಲೂ ಶ್ರೇಷ್ಠ-ನೀಚವೆಂದೆಣೆಸಿ, ಮಾನವ-ಮಾನವನನ್ನು ತುಳಿಯುತ್ತಿದ್ದಾನೆ. 'ಅಹಂ' ಎಂಬ ಭ್ರಾಂತಿಯಲ್ಲಿ… ಮರಕ್ಕಿಂತ ಮರ ದೊಡ್ಡದು, ಮನುಷ್ಯನಿಗಿಂತ ಮನುಷ್ಯ ದೊಡ್ಡವ,ಮನಸ್ಸಿಗಿಂತ ಮನಸ್ಸು ದೊಡ್ಡದು, ಇಂದು ನಾ ರಾಜನೇ ಆದರೂ, ಹಿಂದೆ ತನಗಿಂತ
ಹಿರಿಯರು-ಶ್ರೇಷ್ಠರು ಆಳಿ ಹೋದವರಿದ್ದಾರೆ. ಮುಂದೆ ಬರುವವರು ತನಗಿಂತ ಉತ್ತಮರಾಗಿರಬಹುದು, ಅದನ್ನರಿಯದೆ ತನ್ನ ರಾಜತ್ವವನ್ನೇ ಹೆಚ್ಚಾಗಿ ಭ್ರಮಿಸಿ ರಾಜನಾದ ಕರ್ತವ್ಯಗಳನ್ನು ಮರೆತರೆ ಪ್ರಜೆಗಳೇ ಧಿಕ್ಕರಿಸಿ ಕೊನೆಗೆ ಹೊರದೂಡುವರು. ಅಹಂನ
ಪರಿಣಾಮವು ಎಂದಿಗೂ ಎಲ್ಲರಿಂದ ತಿರಸ್ಕಾರವೇ ಆಗಿರುತ್ತದೆ. ಆದ್ದರಿಂದ ಸಂಘ ಜೀವಿಯಾದ ಮಾನವ 'ಅಹಂ'ನ ಪರಮಾವಧಿ ಸ್ಥಿತಿಯಿಂದ ಕೆಳಗಿಳಿದು ಸಂಯಮ, ಸಹಯೋಗದೊಂದಿಗೆ ಇತರರೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು. ನಿಮಗೆ ತಿಳಿದಿರಬಹುದು, ನಾವು ಒಬ್ಬರನ್ನು ಪ್ರೀತಿಸಲೂ ಸಹ ಕೆಲವೊಮ್ಮೆ ನಮ್ಮ ಅಹಂ  ಅಡ್ಡಿಯಾಗಿಬಿಡುತ್ತದೆ.  ಮನುಷ್ಯನ ತುಡಿತ-ಮಿಡಿತಗಳೆಲ್ಲವೂ ಆಗಿರುವ "ಪ್ರೀತಿ"ಯು ಈ 'ಅಹಂ' ಭಾವದಿಂದ ಕರಗಿಹೋಗಿಬಿಡುತ್ತದೆ. ಯಾರೊಬ್ಬರನ್ನು ಮನಸಾರೆ ಪ್ರೀತಿಸಲು ಆಗುವುದಿಲ್ಲ. ಇನ್ನೂ ಯುವ ಮನಗಳಲ್ಲಿ ಪ್ರೀತಿ ನಿವೇದನೆಯಂತೂ ಸಾಧ್ಯವೇ ಆಗಲಾರದು. ಕಡೆಗೊಂದು ದಿನ ಪಶ್ಚಾತಾಪವೇ ಜೊತೆಯಾಗುತ್ತದೆ.

ದಿನನಿತ್ಯದ ವ್ಯವಹಾರಗಳಲ್ಲಿ ಕೆಲವೊಮ್ಮೆ 'ನಾನು', 'ನನ್ನದು' ಎಂಬ ಮಾತುಗಳನ್ನು ಮರೆಯುವುದು ಹೆಚ್ಚು ಸೊಕ್ತವೆಂದೆನಿಸುತ್ತದೆ. ಉದಾಹರಿಸುವುದಾದರೆ;  ಮಹಿಳೆಯೊಬ್ಬಳು ತನ್ನ ಆಡಂಬರವನ್ನು ಪ್ರದರ್ಶಿಸಲೆಂದೇ ತನ್ನ ಗೆಳೆತಿಯ ಕುಟುಂಬವನ್ನು ಔತಣಕ್ಕಾಗಿ
ಮನೆಗೆ ಕರೆದಿರುವ ಪ್ರಸಂಗ. ಮನೆಗೆ ಬಂದ ಅತಿಥಿಗಳಿಗೆ ತನ್ನ ಮನೆಯ ಭವ್ಯತೆಯನ್ನು ತೋರಿಸಿ ವರ್ಣಿಸುತ್ತ, "ಇದು ನನ್ನ ಹೆಸರಿನಲ್ಲಿರುವ ಮನೆ, ನಾನೇ ಖುದ್ದಾಗಿ ಮನೆಯ ಪ್ಲಾನ್ ಬರೆಸಿದ್ದು ಅದೂ ದೊಡ್ಡ ಎಂಜಿನಿಯರಿಂದ. ಈ ಪೇಂಟಿಂಗ್ ಕಲರ್ ಸೆಲೆಕ್ಷನ್ ನಂದೆ, ಈ ಡೈನಿಂಗ್ ಟೇಬಲ್ ಅರೇಂಜ್ಮೆಂಟ್ ಎಲ್ಲಾ ನಂದೆ, ಅದಕ್ಕಾಗಿ ನಾನು ತರಬೇತಿಯನ್ನೂ ಪಡೆದಿದ್ದೇನೆ. ಇಗೋ ಈ ಡೈನಿಂಗ್ ಸೆಟ್ಗಳೆಲ್ಲಾ ದುಬಾರಿಯವು. ಒಂದೊಂದೂ ಸಾವಿರ ರೂಗಳು. ನಿಮಗಾಗಿ ವಿಶೇಷವಾಗಿ ಊಟವನ್ನು ಪಂಚತಾರಾ ಹೊಟೆಲೊಂದರಿಂದ ತರಿಸಿದ್ದೇನೆ. ಅಲ್ಲೆಷ್ಟು ದುಬಾರಿ ಗೊತ್ತಾ?!…. "ಬನ್ನೀ, ನೀವು ಊಟಕ್ಕೆ ಕೂರಿ" ಎಂದು ಆ ಅತಿಥಿಗಳನ್ನು ಕರೆದಾಗ, ಅವರು ಆ ಮನೆಯ ಆ ಡೈನಿಂಗ್ ಟೇಬಲ್ನಲ್ಲಿ ಕುಳಿತು ಆ
ದುಬಾರಿ ಊಟವನ್ನು ಎಷ್ಟು ಸೊಗಸಾಗಿ ಉಣ್ಣಬಲ್ಲರೆಂದು ಊಹಿಸಿಕೊಳ್ಳಿ. ಹಸಿದಿದ್ದರೂ ಊಟ ಬೇಡವಾಗಿರುತ್ತದೆ. ಅಲ್ಲಿದಷ್ಟು ಕಾಲ ಅವರಿಗೆ ಉಸಿರು ಕಟ್ಟಿದ ಹಾಗೆ. ಅಲ್ಲಿಂದ ಕಾಲುಕಿತ್ತರೆ ಸಾಕೆಂದೆನಿಸಿರುತ್ತದೆ. 'ಅಹಂ' ಮನುಷ್ಯ ಮನುಷ್ಯರನ್ನು ದೂರ ಮಾಡುತ್ತದೆ.  "ಮನುಷ್ಯರ ಸಂಗ ಬೇಡದವನಿಗೆ ಅಹಂ ಅನಿವಾರ್ಯ" ಎಂದನಿಸುವುದಿಲ್ಲವೇ ಸ್ನೇಹಿತರೇ?

ಹೌದು, ಏನೆಲ್ಲಾ ತಿಳಿದಿರುವ, ಏನೆಲ್ಲಾ ಮಾತನಾಡುವ ನಾವು ಅತೀ ಚಿಕ್ಕ ಚಿಕ್ಕ ವಿಚಾರಗಳು ಎನಿಸಿಕೊಳ್ಳುವ ಇಂತಹವನ್ನು ಬಹುವಾಗಿ ನಿರ್ಲಕ್ಷಿಸಿ ಬಿಟ್ಟಿರುತ್ತೇವೆ. ವ್ಯಕ್ತಿ ತನ್ನ ಚಿಕ್ಕ-ಚಿಕ್ಕ ತಪ್ಪುಗಳಿಂದ ತಿದ್ದಿಕೊಳ್ಳಲು ಪ್ರಾರಂಭಿಸಬೇಕು. ಒಂದೇ ಬಾರಿಗೆ ದೊಡ್ಡದೊಂದು ತಪ್ಪನ್ನು ತಿದ್ದಲು ಹೋದರೆ "ಅಹಂ"ಗೆ ದೊಡ್ಡ ಪೆಟ್ಟೇ ಬೀಳುವ ಸಂಭವವಿದೆ. ಇದರಿಂದ ಮಾನಸಿಕ ಆರೋಗ್ಯವು ವ್ಯತಿರಿಕ್ತಗೊಳ್ಳಲೂಬಹುದು. ಹಾಗಾಗಿ
ಚಿಕ್ಕದ್ದರಲ್ಲೇ ಎಚ್ಚೆತ್ತಿಕೊಳ್ಳೋಣ. ವಿನಾಕಾರಣ ಹಾರಾಡುವ ಮನಕ್ಕೊಂದು ಶಮನಕ್ಕಾಗಿ ಧರ್ಮಗ್ರಂಥವೊಂದರ ಸಾರ ಹೀಗಿದೆ,

"ಆಗುವುದೆಲ್ಲಾ ಒಳ್ಳೆಯದಕ್ಕೆ ಆಗಿದೆ. ಆಗುವುದೆಲ್ಲಾ ಒಳ್ಳೆಯದಕ್ಕೇ ಆಗುತ್ತಿದೆ.
ಆಗಲಿರುವುದು ಅದೂ ಒಳ್ಳೆಯದೆ ಆಗಲಿದೆ. ರೋಧಿಸಲು ನೀನೇನು ಕಳೆದುಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನು ಮಾಡಿರುವುದಾದರು ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ನೀಡಿದ್ದರೂ ಅದನ್ನು
ಇಲ್ಲಿಗೇ ನೀಡಿರುವೆ. ನೆನ್ನೆ ಬೇರೆಯಾರದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ
ಇನ್ಯಾರದೋ ಆಗಲಿದೆ".

ಹೀಗೆ ನಮ್ಮದೇನು ಅಲ್ಲವಾದದನ್ನು ನನ್ನದೇ ಎಂಬ ಭಾವ ನಮ್ಮನ್ನು ಅಲ್ಪರನ್ನಾಗಿಸುತ್ತದೆ. ಮಹಾ ಚೈತನ್ಯದೆದುರು ನಾವು ತಲೆ ಬಾಗಲೇ ಬೇಕು.

ಮಾನವ ಸಂಬಂಧಗಳಲ್ಲಿ ಸ್ವಾರ್ಥವನ್ನು ತ್ಯಜಿಸಿ, ಸ್ನೇಹ ಪ್ರೀತಿಯಿಂದ ವ್ಯವಹರಿಸುವಂತಾಗಬೇಕು. ಯಾವುದೇ ಒಂದು ಸಂಘ ಕಾರ್ಯದಲ್ಲಿನ ಜಯವು ನನ್ನಿಂದಲೇ ಎಂಬುದರ ಬದಲು ನೀನು, ನಿನ್ನಿಂದ ನಿನ್ನದೇ ಈ ಸಕಾರ್ಯಗಳು ಎನ್ನುವುದರ ಮೂಲಕ ಆ ಜನ ಮನಗಳ ನಡುವೆ
ವಿದ್ಯುತ್ ಬಲ್ಪಿನಲ್ಲಿ ಕಾಣುವಂತಹ 'ಟಂಗಸ್ಟನ್' ತಂತಿಯಂತಹ ಮಧುರ ಬೆಸುಗೆಯೊಂದು ಮೂಡಿ, ಮುಂದೊಂದು ದಿನ ವಿದ್ಯುಚ್ಛಕ್ತಿಯ ಹರಿವು ಎಂಬ ಸುಘಳಿಗೆಯಲ್ಲಿ ಆ ಮನಗಳಲ್ಲಿ ಬೆಳಕಿನ ಸಂಚಲನವಾಗುತ್ತದೆ. ಸರಳ-ಸಹಜತೆಯೊಂದಿಗೆ ನಾವು ನಮ್ಮವರೊಂದಿಗೆ ಬೆಳಕಿನೆಡೆಗೆ
ಸಾಗುತ್ತೇವೆ. ನೆಮ್ಮದಿಯ ಜೀವನ ನಮ್ಮದಾಗುತ್ತದೆ.

ಕೆಲವೊಮ್ಮೆ ನೀನು ನಿನ್ನದೆ ಎಂಬ ಬಿಟ್ಟುಕೊಡುವ ಸಂದರ್ಭಗಳಲ್ಲಿ ದೇಶ, ಭಾಷೆ ಮತ್ತು ನೆಲೆಗಳು ಬಂದು ನಿಂತಾಗ; ನನ್ನ ದೇಶ, ನನ್ನ ಭಾಷೆ ಎಂಬ ಭಾವದೊಂದಿಗೆ ಪರತಂತ್ರಕ್ಕೆ ಒಳಗಾಗದಂತೆ ತಡೆಯುವಂತಹ ಸಂದರ್ಭಗಳಲ್ಲಿ ಕೆಚ್ಚೆದೆಯ ವೀರತ್ವವನ್ನು ಮೆರೆಯಬೇಕು. ಇಲ್ಲಿ ತನ್ನದೂ ಎಂಬ "ಅಹಂ"ನ ಲೇಪನವು ಕೂಡಿದ್ದರೂ ಇಂತಹ ಅಹಂ ಒಪ್ಪುವಂತಹದು, ಪ್ರೋತ್ಸಾಹಿಸುವಂತಹದು. "ಅಹಂ", ಇಲ್ಲಿ ಹೆಮ್ಮೆಯಾಗಿ ಅಭಿಮಾನವಾಗಿ ಗುರ್ತಿಸಿಕೊಳ್ಳುತ್ತದೆ.
ಪರತಂತ್ರಗೊಳಿಸ ಬಂದವರಿಗೆ ತಲೆಬಾಗದಿರೋಣ, ನಮ್ಮವರಲ್ಲಿ ತಲೆತಗ್ಗಿಸದೆ ಪರರಾಗಿ ಬಾಳದಿರೋಣ. ಜಗತ್ಚೇತನದೆದುರು ಪುಟ್ಟ-ಪುಟ್ಟ ಚೇತನರಾಗೋಣ, ಕೊನೆಗೊಮ್ಮೆ ಆ ಮಹಾ ಚೇತನದಲ್ಲಿ ಲೀನವಾಗಿಬಿಡೋಣ. ಧನ್ಯವಾದಗಳು ಸ್ನೇಹಿತರೇ.

ಪಂಜು ಪತ್ರಿಕೆಯಲ್ಲಿ ನನ್ನೀ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರು ಮತ್ತು ಪತ್ರಿಕಾ ಬಳಗಕ್ಕೆ ನನ್ನ ಅನಂತ ವಂದನೆಗಳು

-ದಿವ್ಯ ಆಂಜನಪ್ಪ
03/02/2013

ಹನಿಗವನ

ಜೀವಿಸಲು ಪ್ರಾರಂಭಿಸು

ಜನರು ಯಾಕೋ ಹೀಗೆ 
ಅನುಮಾನಿಸಿ ಅನುಮಾನಿಸಿ
ಗುಮಾನಿಯೊಳಗೇ ಜೀವಿಸುವರು.
ಎಂದು ಸತ್ಯದ ಬೆಳಕ ಕಂಡು
ವಿಶ್ವಾಸದ ನಗೆ ಬೀರುವರೋ
ಆ ದಿನವೇ ಅವರು ಜೀವಿಸಲು 
ಪ್ರಾರಂಭಿಸಿದರು; 
ಎನ್ನಬಹುದೇ???

-ದಿವ್ಯ ಆಂಜನಪ್ಪ
೨೧/೦೬/೨೦೧೩

ಚುಟುಕು

ಕಣ್ಹಿಂದಿನ ಕನಸು,
ನಿಟ್ಟುಸಿರ ಕಣ್ಣೀರ
ತೆರೆದಿಟ್ಟರೆ;
ಜನ ಕವನವೆಂದರು
ಅವ ಮಾತ್ರ
ಕಾಲ ಹರಣವೆಂದನು.... 


-ದಿವ್ಯ ಆಂಜನಪ್ಪ

Friday 21 June 2013

ಹನಿಗವನ

ಜಾರಿದೆ ಮನ..........

ಹೊಮ್ಮಿದೆ ನಗೆ ಗೆಳೆಯಾ,
ಅಗೋ ನನ್ನಯ ಕನಸುಗಳಾಗಿವೆ.

ಹೊರಡಿದೆ ದನಿ ಗೆಳೆಯಾ
ಇಗೋ ನನ್ನಯ ಕವನವಾಗಿದೆ.

ಜಾರಿದೆ ಮನ ಗೆಳೆಯಾ
ತಗೋ ನನ್ನೊಳ ಉಸಿರಾಗಿದೆ.....


-ದಿವ್ಯ ಆಂಜನಪ್ಪ

Thursday 20 June 2013

ಚುಟುಕು


"ಜೀವನ" ......

ನಿರಂತರ ಪಯಣ, 
ತರ ತರಹದ ಚಿಂತನ, 
ಅವಿರತ ಪ್ರಯತ್ನ, 
ಕಷ್ಟಗಳ ಹರಣ,
ಕನಸುಗಳ ಹೂರಣ,
ಇದುವೇ ಜೀವನ,
ಬದುಕಲು ಪ್ರೀತಿಯೊಂದೇ ಕಾರಣ.

-ದಿವ್ಯ ಆಂಜನಪ್ಪ

ಚುಟುಕು

ಪ್ರೀತಿಸುವ ಹೆಣ್ಮನದಿ
ಅವಮಾನಗಳ ನೊವೇ ತುಂಬಿರಲು
ಪ್ರಿಯ ಸೋಲಿಗೆ ಬೆಲೆಯಿಲ್ಲದೀ
ನಾಡಿನಲಿ ಮಾರಿಯೆಂದಾದಳು 


-ದಿವ್ಯ ಆಂಜನಪ್ಪ
19/06/2013

Wednesday 19 June 2013

ಲೇಖನ

ಕನಕದಾಸರು; ಒಂದು ಕಿರು ಪರಿಚಯ

ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳಲ್ಲಿ ಚಂಪೂ, ವಚನ, ರಗಳೆ, ಕೀರ್ತನೆ ಷಟ್ಪದಿಯಂಥಹ ಹಲವು ಛಂದೋ ರೂಪಗಳಿವೆ. ಕೀರ್ತನ ಸಾಹಿತ್ಯವೆಂದಾಕ್ಷಣ ದಾಸಸಾಹಿತ್ಯವೆಂದೇ ನಾವು ಹೆಸರಿಸುತ್ತೇವೆ. ದಾಸಸಾಹಿತ್ಯದ ಶ್ರೇಷ್ಟರೆಂದೇ ಹೆಸರಾದವರು ಕನಕದಾಸರು ಮತ್ತು ಪುರಂದರದಾಸರು. ಅವರಿಬ್ಬರೂ ದಾಸಸಾಹಿತ್ಯದ ಎರಡು ಕಣ್ಣುಗಳೆಂದೇ ಹಲವರು ವ್ಯಾಖ್ಯಾನಿಸಿದ್ದಾರೆ. ವಾದಿರಾಜರಿಂದ ಧೀಕ್ಷೆಯನ್ನು ಪಡೆದ ಕನಕದಾಸರು ಪುರಂದರದಾಸರ ಸಮಕಾಲೀನರಾಗಿದ್ದಾರೆ. ಕನಕದಾಸ ಜಯಂತಿಯ ಸಮಯದಲ್ಲಿ ಅವರನ್ನೊಮ್ಮೆ ನೆನೆಯುವ ಸಲುವಾಗಿ ಈ ಲೇಖನ.

ಕವಿ ಕನಕದಾಸರ ಮೂಲ ಹೆಸರು 'ತಿಮ್ಮಪ್ಪ', ತಂದೆ 'ಬೀರಪ್ಪ', ತಾಯಿ ';ಬಚ್ಚಮ್ಮ'. ೧೫೦೮ ರಲ್ಲಿ ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಒಂದು ಸಣ್ಣ ಊರಾದ 'ಬಾಡ' (ಈಗಿನ ಹಾವೇರಿ ಜಿಲ್ಲೆ) ಯಲ್ಲಿ ಜನಿಸಿದವರು. ಕನಕದಾಸರು ಜನಸಾಮಾನ್ಯರಾಗಿ, ಸೈನಿಕರಾಗಿ, ಸಾಮಂತನಾಗಿ, ದಾರ್ಶನಿಕರಾಗಿ, ಕವಿಯಾಗಿ ಜೀವನದ ವಾಸ್ತವಿಕೆತೆಯ ಹಲವು ಮಜಲುಗಳನ್ನು ಸವೆದು, ಅದರ ಅನುಭವಗಳನ್ನು ತಮ್ಮ ಕೀರ್ತನೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಾದರಪಡಿಸಿದವರು. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ನಿಟ್ಟಿನಲ್ಲಿ ಅವರ ಸಾಹಿತ್ಯ ಕಾರ್ಯನಿರ್ವಹಿಸಿದೆ.

ಅವರ ಕೀರ್ತನೆಗಳಲ್ಲಿ ಕಾಣುವ "ಕಾಗಿನೆಲೆಯಾದಿಕೇಶವ",ಎಂಬುದು ಅವರ ಅಂಕಿತನಾಮವಾಗಿದ್ದು, ಕಾಗಿನೆಲೆಯಲ್ಲಿನ "ಆದಿಕೇಶವ" ಅವರ ಮನೆತನದ ಆರಾಧ್ಯ ದೈವವಾಗಿದೆ. ಅವರು ರಚಿಸಿದ ಕೃತಿಗಳು; 'ನಳಚರಿತ್ರೆ', 'ಹರಿಭಕ್ತಿಸಾರ', 'ರಾಮಧಾನ್ಯ ಚರಿತ', 'ಮೋಹನ ತರಂಗಿಣಿ', 'ಕೀರ್ತನ ಮತ್ತು ಮುಂಡಿಗೆಗಳು'. ನಳಚರಿತ್ರೆಯಲ್ಲಿ, ನಳ-ದಮಯಂತಿಯರ ಪ್ರೀತಿ-ಪ್ರೇಮ, ವಿರಹ-ವೈರಾಗ್ಯಗಳನ್ನೊಳಗೂಂಡ ಕತೆಯನ್ನು ನಾವು ಕಾಣುತ್ತೇವೆ. ಸ್ತೀ ಜೀವನದ ಉತ್ತುಂಗತೆಯನ್ನು ಸಾರುವುದೇ ಇಲ್ಲಿನ ಉದ್ದೇಶವಾಗಿದೆ. ಭಕ್ತಿ ವೈರಾಗ್ಯಗಳ ಸಾರವೇ 'ಹರಿಭಕ್ತಿಸಾರ' ಕಾವ್ಯವಾಗಿದೆ. ಸಂಸಾರ, ಅರಿಷಡ್ವರ್ಗಗಳಿಂದ ದೂರನಾದ ವ್ಯಕ್ತಿ ಶ್ರೀಹರಿಯ ಸಾನಿಧ್ಯವನ್ನು ಪಡೆಯಬಲ್ಲನೆಂಬ ನಿಲುವಿದೆ. ಮುಕ್ತಿಗೆ ಇದೊಂದೇ ಮಾರ್ಗವೆಂದು ತಿಳಿಸಿದ್ದಾರೆ. 'ರಾಮಧಾನ್ಯ ಚರಿತ'ದಲ್ಲಿ, ಲಂಕಾಪತಿ ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ರಾಮನು ಅಯೋಧ್ಯೆಗೆ ಮರಳುತ್ತಿದ್ದ ಸಂದರ್ಭದಲ್ಲಿ, ಏರ್ಪಡಿಸಲಾದ ಭೋಜನ ಔತಣದಲ್ಲಿ ನಡೆದ "ರಾಗಿ" ಮತ್ತು "ಭತ್ತ"ದ ವಾಗ್ವಾದದ ಚಿತ್ರಣವಿದೆ. ಭತ್ತ-ರಾಗಿಯ ಜಗಳದ ತೀರ್ಮಾನಕ್ಕೆ ಶ್ರೀರಾಮನು ಆರು ತಿಂಗಳ ಕಾಲ ಗಡುವು ವಿಧಿಸಿ, ರಾಗಿ ಭತ್ತವನ್ನು ಬಂಧನದಲ್ಲಿ ಇರಿಸಲಾಗುತ್ತದೆ. ಆಶ್ಚರ್ಯವೆಂದರೆ, ಆರು ತಿಂಗಳ ಅವಧಿಯಲ್ಲಿ ಭತ್ತ ಸೊರಗಿ ಟೊಂಕ ಮುರಿದು ಬಿಟ್ಟರೆ, ರಾಗಿ ಹಾಗೆಯೇ ಗಟ್ಟಿಯಾಗಿ ನಿಂತಿರುತ್ತದೆ. ಅಯೋಧ್ಯೆಯ ಜನ ರಾಗಿಯ ಪರವಾಗಿ ನ್ಯಾಯ ನೀಡುತ್ತಾರೆ. ಜಾತಿಭೇದ-ವರ್ಣಭೇದಕ್ಕೆ ತಮ್ಮ ಕೃತಿಯ ಮುಖೇನ ದಾಸರು ಸಮಾಜಕ್ಕೆ ಉತ್ತರವನ್ನು ನೀಡಿದ್ದಾರೆ. "ಮೋಹನ ತರಂಗಿಣಿ"ಯಲ್ಲಿನ ಕಥಾವಸ್ತು, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಆಡಳಿತ, ಆಸ್ತಾನಕ್ಕೆ ಸಂಬಂದಿಸಿದ ವಿವರಗಳೇ ಹೆಚ್ಚಾಗಿವೆ. ಒಟ್ಟಾರೆಯಾಗಿ ಕೃಷ್ಣನೇ ಎತ್ತರದ ಪುರುಷನಾಗಿ ನಿಲ್ಲುತ್ತಾನೆ. ಈ ಎಲ್ಲಾ ಕೃತಿಗಳ ವಿಶ್ಲೇಷಣೆಯನ್ನಷ್ಟೇ ಓದಿದ್ದು, ಅದರ ಸಂಕ್ಷಿಪ್ತರೂಪವನ್ನು ಇಲ್ಲಿ ಪ್ರಸ್ತುತಪಡಿಸಿರುತ್ತೇನೆ.

ಮುಂಡಿಗೆಗಳು:
ಗೂಡಾರ್ಥ ಮುಂಡಿಗೆಗಳಿಗೆ ಇವರು ಪ್ರಸಿದ್ದರಾಗಿದ್ದಾರೆ. ಪುರಾಣ ಸಂಗತಿಗಳು, ಧಾರ್ಮಿಕ ವಿಚಾರಗಳು, ಸಾಧಕರಿಗೆ ಬೇಕಾದ ಮಾರ್ಗದರ್ಶನ ಸೂತ್ರಗಳನ್ನು ಈ ಮುಂಡಿಗೆಗಳು ಒಳಗೊಂಡಿರುತ್ತದೆ. ಅಂತಹದೊಂದು ಮುಂಡಿಗೆ ಹೀಗಿದೆ:
"ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ".
ಅರ್ಥ: ಅಂಧಕನೆಂದರೆ ಧೃತರಾಷ್ಟ್ರ, ಅಂಧಕನನುಜ ಪಾಂಡುರಾಜ, ಇವನ ಕಂದ ಧರ್ಮರಾಯ, ಈತನ ತಂದೆ ಯಮಧರ್ಮ. ಈತನನ್ನು ಕೊಂದವನು ಈಶ್ವರ. ಈಶ್ವರನ ಶಿರದಲಿ ನಿಂದವನು ಚಂದ್ರ.
ಹೀಗೆ ಗೂಡಾರ್ಥಗಳಿಂದ ಕೂಡಿದ ಮುಂಡಿಗೆಗಳು ಪೌರಾಣಿಕವೂ, ಆಧ್ಯಾತ್ಮದ ಹಿನ್ನೆಲೆಯವೂ, ಸ್ವಾರಸ್ಯಕರವೂ ಆಗಿರುತ್ತದೆ.

ಕೀರ್ತನೆಗಳು:
ಕನಕದಾಸರ ಅನೇಕ ಕೀರ್ತನೆಗಳಲ್ಲಿ ಸುಪ್ರಸಿದ್ಧವಾದ ಕೀರ್ತನೆ "ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ"ಯನ್ನು ನಾವೇಲ್ಲಾ ಕೇಳಿಯೇ ಇರುತ್ತೇವೆ. ಮಾನವನ ಯಾಂತ್ರಿಕ ಜೀವನದಲ್ಲಿ ಆತ ತನ್ನ ಹೊಟ್ಟೆಗಾಗಿಯೇ ತಾನು ಜೀವಿಸುತ್ತಿರುವ ಪ್ರಸಂಗವನ್ನು ಕಂಡ ಕವಿ, ಹೀಗೆ ತಮ್ಮ ಕೀರ್ತನೆಯಲ್ಲಿ ಹಾಡಿ ತಿಳಿಸಿದ್ದಾರೆ. ಹಲವಾರು ವೃತ್ತಿಗಳ ಬೆನ್ನು ಹತ್ತಿದ ಮಾನವ ಇಂದು ಹಣಗಳಿಕೆಯನ್ನೇ ಕೇಂದ್ರ ಗುರಿಯನ್ನಾಗಿಸಿಕೊಂಡಿದ್ದಾನೆ. ಇಂಥಹ ಮನೋಭಾವ ಅವನನ್ನು ಅನೇಕ ರೀತಿಯ ಜಟಿಲತೆ, ತಾಕಲಾಟಗಳಿಗೆ ಈಡು ಮಾಡುತ್ತಿದೆ. ಮನುಷ್ಯ ಹೊಟ್ಟೆ-ಬಟ್ಟೆಯ ಚಿಂತೆಯನ್ನು ಬಿಟ್ಟು ದೈವಭಕ್ತಿಯನ್ನು ಹೊಂದಿ, ಆತ್ಮಸಂತೋಷವನ್ನು ಪಡೆಯಬೇಕೆಂಬುದು ಕನಕದಾಸರ ಆಶಯವಾಗಿದೆ. ಅವರ ಆಶಯದ ದಾಸಪದ ಹೀಗಿದೆ:

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||ಪಲ್ಲವಿ||

ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೧

ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೨

ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೩

ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೪

ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೫

ಕೊಟ್ಟಣವನ್ನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೬

ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೭

ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೮

ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೯

ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ೧೦

ಪರಾಮರ್ಶನ ಗ್ರಂಥಗಳು: ೧)ಸಾಹಿತ್ಯ ಚಂದನ, ಪಿಯುಸಿ ಪಠ್ಯಪುಸ್ತಕ
೨)ಪಠ್ಯಕ್ರಮ ಕೆಎಸ್ಒಯು
ಧನ್ಯವಾದಗಳು

-ದಿವ್ಯ ಆಂಜನಪ್ಪ
02/12/2012

Sunday 16 June 2013

ಚುಟುಕು


ಬರ ಬಂದರೂ
ಗರ ಬಡಿದರೂ
ವರವೇ ಶಾಪವಾದರೂ
ನನ್ನೊಳ ನನ್ನನ್ನು
ನಾನೆಂದಿಗೂ 
ಕುಂದಿಸಲಾರೆ.

-ದಿವ್ಯ ಆಂಜನಪ್ಪ :-)
05/2013

ಚುಟುಕು

ಜೀವನ

ಮತ್ತದೇ ಮೌನ
ಚಿಂತೆಗಳ ಧ್ಯಾನ
ಅಙ್ಞಾತ ಯಾನ
ಎಲ್ಲಿಗೋ ಹೇಗೋ;
ನಿರಂತರ ಹರಿವ ಜೀವನ 


-ದಿವ್ಯ ಆಂಜನಪ್ಪ
15/06/2013

Saturday 15 June 2013

ಚುಟುಕು

ಹಾಗೇ ಸುಮ್ಮನೆ 

ಕೆಲವೊಂದನ್ನು ಪಡೆಯಲು ಶ್ರಮವು ಬೇಕು,
ಕೆಲವನ್ನು ಪಡೆಯಲು ತಾಳ್ಮೆ ಬೇಕು,
ಮತ್ತೆ ಕೆಲವಕ್ಕೆ ಕಾಯಬೇಕು
ಪ್ರೀತಿ ಎಂಬುದು ಒಲಿಯಬೇಕು

ಕವನ


*ನೀ ನನ್ನ ತೋಳಲಿ, ನಾ ನಿನ್ನ ತೋಳಲಿ*

ನೀ ಸುಮ್ಮನಿರಲು, ನಾ ಏನ ಹೇಳಲಿ?
ಕಡಲ ತೆರೆಗಳು ಒತ್ತೋತ್ತಲಾಗಿ ಬರಲು,
ನಿಂತ ನೆಲವು ನಡುನಡುಗಿ ಬಿಡಲು,
ಬೆಂಕಿ ಚೆಂಡು ಧರೆಗಪ್ಪಳಿಸುತ್ತಿರಲು,
ಶಾಂತಮೂರ್ತಿಯಾಗಿ ನೀ ನಿಂತಿರಲು,
ನಾ ಏನ ಹೇಳಲಿ ನೀ ಸುಮ್ಮನಿರಲು.

ಹೇಳದಿರು ಏನನ್ನೂ, ನನ್ನೋಳ ದನಿಯೇ!,
ನನ್ನೀ ಹೃದಯದ ಕಣ್ಮಣಿಯೇ,
ಭಯವೇಕೆ ಓ ಚಂಚಲೇ?
ನೀ ಇರಲು ನನ್ನೋಳಹೊರಗೂ,
ಕಡಲೇನು? ಧರೆಯೇನು?
ಬಾನೇನು ಬೆದರಿಸೀತು??

ಕಡಲೊಡಲ ಮುತ್ತಾಗಿ ಇಳಿಯೋಣ,
ಭೂಗರ್ಭದ ಮಣ್ಣ ಕಣಗಳಾಗಿ ಬೆರೆಯೋಣ,
ಉರಿವ ಬೆಂಕಿ ಜ್ವಾಲೆಯಾಗಿ ಪ್ರಜ್ವಲಿಸೋಣ,
ನೀ ನನ್ನ ತೋಳಲಿ, ನಾ ನಿನ್ನ ತೋಳಲಿ
ಅದೃಷ್ಯರಾಗಿ ಹೋಗೋಣ,
ಒಂದೇ ಆತ್ಮರಾದ ನಾವಿನ್ನು ಪ್ರಕೃತಿಯಲಿ ಲೀನವಾಗಿ ಹೋಗೋಣ.

-ದಿವ್ಯ ಆಂಜನಪ್ಪ

Friday 14 June 2013

ಕವನ


*ಹೀಗೊಂದು ಕೊರಗು*

ತುಂಬಾ ಪ್ರೀತಿ ಇಟ್ಕೊಂಡು
ಒದ್ದಾಡ್ತೀನಿ ನಾನು
ಅದನ್ನ ಅರ್ಥ ಮಾಡ್ಕೊಳ್ದೆ
ರೇಗಾಡ್ತಾನೆ ಅವ್ನು

ಅವನ ಪ್ರೀತಿ ಬಯಸಿ
ಕೊರಗಿ ಮೂಕಿಯಾದೆ ನಾನು
ಅದರ ಪರಿವೇ ಇಲ್ಲದೆ
ನನ್ನ ಮರೆತಿರ್ತಾನೆ ಅವ್ನು

ಅವನಿಗೆ ನಾನೇ ಗೆಳತಿ
ನನಗೆ ಅವನೇ ಗೆಳೆಯಾ
ಇದು ಅವನ್ಗೆ ನೆನಪಾಗೋದು
ಯಾವಾಗ???

ಕಾಲ ಸರಿದು, ಪ್ರೀತಿ ಬತ್ತಿ
ಬಂಧ ವಿಮುಕ್ತವಾದಾಗ,,,,,,,!

(ದಿವ್ಯ ಆಂಜನಪ್ಪ)

ಚುಟುಕು

*ಕಾರಿನ ಹಿಂದೆ*

ನೀ ಬಂದೆ,
ಬಳಿ ನಿಂದೆ,
ನಾನಂದೆ,
ಬಂದೆಯಾ ಇಂದೆ?
ನೀ ಹ್ಹೂಗುಟ್ಟುವ ಮುಂದೆ,
ಬಂದ 'ಅನಂತು ಹಂದೆ',
ಇವರೇ ನನ್ನವರು ಅಂದೆ,
ಬಾಯ್ಬಿಡಲಾರದೆ ನೊಂದೆ,
ದಿಗ್ಬ್ರಮೆಯಾಗಿ ನಿಂದೆ,
ನೀ ಹೋದ ಕಾರಿನ ಹಿಂದೆ. :-)

ಚುಟುಕು

ಸಿಹಿ-ಕಹಿ ಕನಸು 

ಕಹಿ ಕನಸ ನೆನೆಸದೆ
ಕಹಿ ಬದುಕಲಿ ಬೆಂದೆ.
ಸಿಹಿ ಕನಸಾಗಿ ನೀ ಬಂದೆ,
ಎಚ್ಚೆತ್ತು ಕನಸೆಂದು ನೊಂದೆ,,,,



-ದಿವ್ಯ ಆಂಜನಪ್ಪ
13/06/2013

Tuesday 11 June 2013

ಕವನ

ಭಾವ ಭರ

ಬೇಸರಿಸದಿರು ನನ್ನಿನಿಯಾ,
ನಿಂತು ನೀ ಬೇಡಿದರೂ,
ಒಲಿಯಳು ಇವಳೆಂದೂ
ಮನಸೋಲಳೆಂದು,,,,

ಕೇಳು ನನ್ನ ಶಶಾಂಕ,
ನಿನ್ನೆಡೆಗಿದೆ ಅಗಾಧ ಪ್ರೇಮವು,
ಇನ್ನೂ ಮೀರಿದೆ, "ಅಪರಿಮಿತ ಮೋಹವು".
ಎನ್ನೆದೆಯ ಭಾವ ಗಂಗೆಯ;
ಹರಿಬಿಡಲೆನಗೊಂದೇ ಭಯವು.
ನೀ ತಾಳಬಲ್ಲೆಯಾ?
ನನ್ನೀ ಪ್ರೀತಿಯ ಭರವ 

-ದಿವ್ಯ ಆಂಜನಪ್ಪ

Tuesday 4 June 2013

ಕವನ

ಹೀಗೇಕೆ?

ಗೆಳೆಯಾ,
ನೀ ದೂರವಿದ್ದರೂ
ನನ್ನಲ್ಲೇ ಇದ್ದಂತೆ,

ನೀ ಮುನಿದರೂ
ನನಗೇ ಒಲಿದಂತೆ,

ಮೌನಿಯೇ ನೀನಾದರೂ
ನನ್ನೊಡನೆ ನಿರಂತರ ಸಂಭಾಷಿಸಿದಂತೆ,

ಎಂದೆನಿಸಿದರೂ
ಮತ್ತೊಂದಿದೆ,,,

ನಡುರಾತ್ರಿ ನೀನಲ್ಲಿ ಕನವರಿಸಿದಂತೆಯೂ
ನನಗಿಲ್ಲಿ ಎಚ್ಚರವಾಗಿಬಿಡುವುದಲ್ಲಾ ???
ಹೀಗೇಕೆ? 

-ದಿವ್ಯ ಆಂಜನಪ್ಪ

04/06/2013