Saturday 7 March 2015

ಕವನ

ಕೀಳರಿಮೆ


ಕಾಡಿದ ಕೀಳರಿಮೆಯ 
ಹೊರಗೋಡಿಸಲು
ಮತ್ತೆ ಮತ್ತೆ ಅದೇ ತಾಣಗಳನ್ನೇ 
ಸುತ್ತಿ ಬಂದೆ
ನಡುಗೆ ಬಿರುಸುಗೊಂಡು
ಹೆಜ್ಜೆ ಮೆದುವಾಗಿ 
ಮನಸ್ಸು ಹದಗೊಳ್ಳುತ್ತಿತ್ತು

ವೇಗ ಹೆಚ್ಚಾಗಿದೆ ಈಗ
ಆವೇಗಗಳೂ
ಕೀಳರಿಮೆಯ ಕೊಳಗಳಲಿ
ನಿಲ್ಲಲಾರೆ ಹೆಚ್ಚು ಹೊತ್ತು
ನಡೆಯಬೇಕಿದೆ ಮುಂದೆ
ಕೊಳಗಳ ಬತ್ತಿಸಿ

ಬಯಸಿ ನೀರು ತುಂಬಿಸಿಟ್ಟೆ
ಬಳಕೆಯಾಗದೆ ಕೊಳಕಾಯಿತು
ಹೆಸರಿಟ್ಟ ಕಾರಣಕೆ 
ಕೊಳಗಳನು ಬರಿದು ಮಾಡಲಾಗಲೇ ಇಲ್ಲ

ಕೊಳದ ತೇವವ ಇಂಗಿಸಬೇಕಿತ್ತು
ಅದಕೆ ಬೆಂಕಿಯು ಬೇಕಿತ್ತು;
ಆ ಸೂರ್ಯನನ್ನೇ ನಂಬಿರುವೆ
ಸುಟ್ಟುಬಿಡುವನೆಂದು 
ಜಗಕ್ಕೆಲ್ಲಾ ಅಗ್ನಿಯೇ ಶ್ರೇಷ್ಟವಲ್ಲವೆ?!

ಸುಡುವ ಭಸ್ಮಗೊಳಿಸುವ
ಪ್ರವೃತ್ತಿಯೇ ಉತ್ತಮೊತ್ತಮವೆನಿಸಿರಲು
ಕೀಳರಿಮೆಗಳು ಅದೇಕೋ ಇನ್ನೂ ಹಸಿಯಾಗಿವೆ
ಒಮ್ಮೆಲೆ ಸೂರ್ಯನಾಳಕೆ ಜಿಗಿಯಲಾರೆ 
ಅವನ ನೆರಳಲಿ ನಿಧಾನದಿ ಆವಿಯಾಗುವೆ
ಭಾಸ್ಕರನು ಅನುಮತಿಸಲಿ.

04/03/2015

No comments:

Post a Comment