Tuesday 9 July 2013

ಮನದ ಮಾತು

ಆ ಜೀವ

ಜೀವನದ ಪಯಣದಲ್ಲಿ ಆಕಸ್ಮಿಕವಾಗಿ ಯಾವುದೋ ಒಂದು ಸುಮಧುರ ಘಳಿಗೆಯಲ್ಲಿ ಯಾವುದೋ ಒಂದು ಜೀವವು ಭಾವನಾತ್ಮಕವಾಗಿ ಬೆಸೆದುಕೊಂಡು ನಮ್ಮ ದಾರಿಗೆ ಸನಿಹವಾಗಿ ಸಾಗಿದಂತೆ, ನಮಗೆ ಜೊತೆಯಾಗಿ ಸಾಗಿದಂತೆ ನಮ್ಮೊಲವ ಬಯಸಿದಂತೆ ಆಪ್ತವಾಗಿಬಿಡುತ್ತದೆ. ಆ ಜೀವದ ಭಾವವನ್ನು ಸ್ವೀಕರಿಸುವ ಇಲ್ಲವೇ ತಿರಸ್ಕರಿಸುವ ಹಕ್ಕು ನಮಗಿದೆ. ಸರಿಯೇ; ಹೀಗೆ ನೇರವಾಗಿ ತಿರಸ್ಕರಿಸುವುದರಿಂದ ಆ ಜೀವದ ಭಾವವು ಘಾಸಿಗೊಳ್ಳುತ್ತದೆ ಎಂಬುದು ಕುಂಟುನೆಪವಷ್ಟೇ. ಹೀಗೆ ಬೇಕು ಬೇಡಗಳ ಜೊತೆಜೊತೆಗೆ ಸಾಗಿ ನಮ್ಮೊಂದಿಗಿನ ಆ ಜೀವಕ್ಕೂ ಗೊಂದಲದ ಸುಖವನ್ನಷ್ಟೇ ನೀಡಿ ನಾವುಪಡೆವ ಸುಖವಾದರೂ ಏನು? ತನಗೂ ಆ ಜೀವಭಾವದ ಅವಶ್ಯಕತೆಯಿದೆ ಎಂಬುದು ನಮ್ಮ ಮನಃಸಾಕ್ಷಿಗಷ್ಟೇ ತಿಳಿದ ಸಂಗತಿಯಾದರೂ ಇದು ಆ ಜೀವಕ್ಕೂ ಆದ ಅನುಭವವೆಂದು ನಾವು ಮರೆತಿರುತ್ತೇವೆ.

ನಮ್ಮಲ್ಲಿ ವಿಶ್ವಾಸವನಿಟ್ಟು ಆ ಜೀವವು ನಮಗಾಗಿ ನಮ್ಮ ಕಾಲ್ನಡಿಗೆಯ ವೇಗಕ್ಕೆ ಹೊಂದಿಕೊಂಡು ನಮ್ಮೊಂದಿಗೆ ಸಾಗಿತ್ತಿದೆಯೆಂದಾದಾಗ ನಾವು ಬೇಜವಾಬ್ದಾರರಾಗಿ ಸುಮ್ಮನೆ ನೆಡೆದುಬಿಡುವುದು ಸರಿಯಲ್ಲ. "ನಿನ್ನೊಂದಿಗಿನ ನೆಡಿಗೆ ನನಗೂ ಸುಖಕರ" ವೆಂಬ ಪ್ರತಿಕ್ರಿಯೆ ನೀಡುವುದು ನಮ್ಮ ಕರ್ತವ್ಯವಾಗಿದೆ. "ತನಗೂ ನಿನ್ನ ಆದರಗಳು ಬೇಕಿವೆ" ಎಂದು ತೋರಗೊಡಬೇಕು. ಸುಮ್ಮನಷ್ಟು ದೂರ ನೆಡೆದ ಮುಂದೊಂದು ತಿರುವಿನಲ್ಲಿ "ಬೈ" ಹೇಳುವಾಗ ನಾವವರ ಮನಸ್ಸಿಗೆ ಭಾವನೆಗಳಿಗೆ ಘಾಸಿಯನ್ನುಂಟುಮಾಡಿದಲ್ಲದೆ ಅವರ ಸಮಯವನ್ನು ವ್ಯರ್ಥಮಾಡಿದಂತಾಗುವುದಲ್ಲವೇ?.


ಜೀವನವಿರುವುದು ಸಾಗುವುದಕ್ಕೇ ಹೊರತು ಸವೆಯುವುದಕ್ಕಲ್ಲ. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ನಮ್ಮ ಸ್ವಾರ್ಥಕ್ಕೆ, ನಮ್ಮ ಅಹಂಗಾಗಿ ಮತ್ತೊಬ್ಬರ ಮನಸ್ಸು ಮುರಿಯುವುದು ಬೇಡ. ಅಪೇಕ್ಷಿಸಿ ನಮ್ಮ ದಾರಿಗೆ ಬಂದ ಆ ಜೀವಕ್ಕೆ ಸಂತಸವನ್ನು ನೀಡಲು ನಮ್ಮಿಂದ ಸಾಧ್ಯವಿಲ್ಲವಾದಾಗ, ನೆಡೆದು ಮುಂದೆ ಸಾಗುವಂತೆ ಅನುವು ಮಾಡಿಕೊಡಬೇಕು ಭಾವಗಳಲ್ಲಿ ಬಂಧಿಸದೇ. ತಮ್ಮ ಏಕಾಂಗಿತನಕ್ಕೆ ತಡೆದು ನಂತರ ಮನಸ್ಸು ಬದಲಿಸಿದಂತೆ ಆ ಜೀವವನ್ನು ಒಂಟಿತನಕ್ಕೆ ನೂಕಿ ನಾವು ಮುಂದೆ ಮುನ್ನುಗ್ಗುವುದರಲ್ಲಿ ಮನಷ್ಯತ್ವವಿಲ್ಲ. ಕಣ್ಣೀರಿನ ನಿಟ್ಟುಸಿರುಗಳನ್ನು ಬೆನ್ನಿಗೆ ಹಾಕಿಕೊಂಡು ಬಾಳಲು ಹೊರಟ ನಾವು ನಿಜವಾಗಿಯೂ ನಮ್ಮಂತರಾತ್ಮಕ್ಕೆ ಮೆಚ್ಚುಗೆಯೇ?? 

ಧನ್ಯವಾದಗಳು
-ದಿವ್ಯ ಆಂಜನಪ್ಪ
09/07/2013

4 comments:

  1. ಪರಸ್ಪರ ಗೌರವವು ಬದುಕಿನ ಮೊದಲ ಪಾಠವಾಗಬೇಕು. ಆಗಲೇ ಮಾನವೀಯತೆಗೂ ನಿಜ ಅರ್ಥ.
    http://badari-poems.blogspot.in

    ReplyDelete
  2. ಮಾನವೀಯತೆಯನ್ನೇ ಜನ ಮರೆತ್ತಿದ್ದಾರಲ್ಲ ಸರ್ :-)
    ತಮ್ಮ ಅಮೂಲ್ಯ ಸಮಯವನ್ನು ನನ್ನ ಬ್ಲಾಗ್ ವೀಕ್ಷಣೆಗಾಗಿ ನೀಡಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು ಸರ್.

    ReplyDelete
  3. ಸಂಸ್ಕಾರ,ಕರ್ಮ-ಸತ್ಕರ್ಮ ಇಂದು ಮನುಕುಲದಲ್ಲಿ ದೂರವಾಗುತ್ತಿದೆ.ಆತ್ಮ ಗೌರವದೊಟ್ಟಿಗೆ ಪರಸ್ಪರ ಗೌರವ ಕೊಡುವುದೂ ನಮ್ಮ ಬದುಕಿನ ಮೊದಲ ಆದ್ಯತೆಯಲ್ಲಿ ಇರಬೇಕು.ಇನ್ನೊಂದು ಆತ್ಮವನ್ನು ನೋಯಿಸುವ ಹಕ್ಕು ಯಾವ ಜೀವಾತ್ಮಗಳಿಗೂ ಇಲ್ಲ. ಪರಸ್ಪರ ಅರಿತು ಬಾಳುವುದೇ ಸ್ವರ್ಗ ಸುಖವಲ್ಲವೇ?
    http://chiminideepa.blogspot.com

    ReplyDelete
    Replies
    1. ಹೌದು ಸರ್. ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್.

      Delete