Wednesday 10 July 2013

ಲೇಖನ

ಹೆಚ್.ಎಸ್. ವೆಂಕಟೇಶ ಮೂರ್ತಿ ರವರ ಕವನ:-




ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ,

ಅರಿತೆವೇನು ನಾವು ನಮ್ಮ ಅಂತರಾಳವಾ..................





ಕವಿಯು ತಮ್ಮ ಈ ಕವನದಲ್ಲಿ ಮಾನವ ಸಂಬಂಧಗಳ ನಡುವಿನ ಅಂತರವನ್ನು 

ವಿಶ್ಲೇಷಿಸಿದ್ದಾರೆ. ನಾವು ನಮ್ಮೊಂದಿಗಿರುವ ಜನರೊಂದಿರೆ ಎಷ್ಟೇ ಕಾಲ ಒಟ್ಟಿಗೆ 

ಕಳೆದರೂ, ಒಬ್ಬರಿಗೊಬ್ಬರು ಅಂತರಾತ್ಮವನ್ನು ತೆರೆದುಕೊಂಡಿರುವುದಿಲ್ಲ ಎಂದು 

ಕವಿ ಹೇಳುವಾಗ ಹೋಲಿಕೆಗಳನ್ನು ಹೀಗೆ ನೀಡುತ್ತಾರೆ. ಕಡಲ ಮೇಲೆ ಸಾಗುವ 

ದೋಣಿ ಎಷ್ಟೇ ದೂರ ಸಾಗಿದರೂ ಕಡಲ ಆಳವನ್ನು ತಿಳಿಯುವ ಗೊಡವೆಗೆ 

ಹೋಗುವುದಿಲ್ಲ. ಸಾಗರಕ್ಕೂ ದೋಣಿಗೂ ತೀರ ಅಂಟಿದ ನಂಟೇ ಆದರೂ ಅವುಗಳು 

ಒಂದಕ್ಕೊಂದು ಅಪರಿಚಿತ. ಹೀಗೆ ತೀರ ಹತ್ತಿರದ ಮಾನವ ಸಂಬಂಧಗಳಲ್ಲಿಯೂ 

ಇಂತಹ ದುಃಸ್ಥಿತಿಯನ್ನು ಕಂಡ ಕವಿ ವಿಷಾಧಿಸುತ್ತಾರೆ. ತೀರ ನಿರಾಶೆಯ ಈ ಭಾವ 

ಅನುಭವಿಸಿದಾಗಲೇ ಕವಿತೆ ಅರ್ಥಪೂರ್ಣ. ಹಾಗೆಯೇ ಒಂದು ಕನ್ನಡಿಯು ಅದೆಷ್ಟೋ 

ಮುಖಗಳ ಭಾವಗಳನ್ನು ಪ್ರತಿಬಿಂಬಿಸಿದರೂ ಅದರ ಪಾಲಿಗೆ ಒಂದು ಬಿಂಬವಾದರೂ 

ಉಳಿಯುವುದಿಲ್ಲ ಖಾಲಿಯಾಗಿಯೇ ಉಳಿಯುತ್ತದೆ. ಯಾರನ್ನೂ ತುಂಬಿಕೊಳ್ಳುದ 

ಮಾನವನ ಮನದಂತೆ. ಇವಿಷ್ಟು ಕವಿತೆಯ ಸಾಲುಗಳ ಪ್ರತಿಬಿಂಬ ವಾಗಿದೆ.
ಬಹು ದಿನಗಳಿಂದ ನಿರಂತರವಾಗಿ ಕಾಡಿದ ಈ ಕವಿತೆಯ ಸಾಲುಗಳು ನನಗೆ 

ಹೊಸದೊಂದು ಅರ್ಥವನ್ನೇ ನೀಡಿತು. ಹಂಚಿಕೊಳ್ಳುವ ತವಕದೊಂದಿಗೆ 

ಮುಂದುವರೆಯುತ್ತೇನೆ.

ಮಾನವರಾದ ನಾವು ನಮ್ಮವರೊಂದಿಗೆ ಎಷ್ಟೇ ಬೆರೆತರು, ಒಟ್ಟಿಗೆ ಜೀವಿಸಿದರೂ, 

ವರ್ಷಗಳೂ ಸವೆದರೂ ಕೂಡ ಪರಸ್ಪರ ಭಾವನೆಗಳ ವಿನಿಮಯ 

ಹಂಚಿಕೆಯಾಗಿರುವುದಿಲ್ಲ. ತಮ್ಮ ತಮ್ಮ ಅಂತರಾತ್ಮವನ್ನು ತೆರೆದಿಟ್ಟು ಮುಕ್ತವಾಗಿ 

ಬೆರೆಯುವುದಿಲ್ಲ. ಇದಕ್ಕೆ ಕಾರಣವಾದರೂ ಏನು? ಮಾನವೀಯ ಮೌಲ್ಯಗಳ 

ಕೊರತೆ. ಮುಖ್ಯವಾಗಿ ಅಹಂ, ಗಂಡು-ಹೆಣ್ಣೆಂಬ ಅಸಮಾನತೆ, ಅಪನಂಬಿಕೆ, ಇಂತಹ 

ಮನೋ ಭ್ರಾಂತಿಗಳನ್ನು ಅಪ್ಪಿಕೊಂಡ ವ್ಯಕ್ತಿ ಮುದುಡಿದ ಮನಸ್ಸಿನೊಂದಿಗೆ 

ಎಲ್ಲರಿಂದ ದೂರವಾಗಿ ತೀರ ನಿಗೂಢವಾಗೇ ಉಳಿಯುತ್ತಾನೆ. ಪರಸ್ಪರ 

ದೌರ್ಬಲ್ಯಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧಗಳಲ್ಲಿ ಸಾಮರಸ್ಯ 

ಉಳಿಯುತ್ತದೆ. ಅದನ್ನರಿಯದೆ ಯಾರಿಗೂ, ಏನನ್ನೂ ಹೇಳಲಾರದೆ, ತನ್ನ 

ಭಾವನೆಗಳನ್ನು ವ್ಯಕ್ತಪಡಿಸಲಾರದ ಜೀವ ಮಾನವನಾಗಿ ಹುಟ್ಟಿದ್ದು ವ್ಯರ್ಥವೇ ಸರಿ.
ಕವಿಗಳು ನೀಡಿರುವ ಉದಾಹರಣೆ ಸಂಬಂಧಗಳಾದ ದೋಣಿ ಮತ್ತು ಸಾಗರ ಕನ್ನಡಿ 

ಮತ್ತು ಪ್ರತಿಬಿಂಬ ಇವುಗಳ ನಿರ್ಜೀವ ವಸ್ತುಗಳು. ಇವುಗಳ ನಡುವೆ ಅದರದೇ ಆದ 

ಆಂತರಿಕ ನಂಟಿದೆ. ಕಡಲ ಮೇಲೆ ಸಾಗಲು ದೋಣಿ ಅವಶ್ಯಕ, ಪ್ರತಿಬಿಂಬವನ್ನು 

ಕಾಣಲು ಕನ್ನಡಿ ಅವಶ್ಯಕ. ಒಂದನ್ನೊಂದು ಬಿಟ್ಟಿಲ್ಲ. ಆದರೆ ಒಂದಕ್ಕೊಂದು ಗೊತ್ತಿಲ್ಲ. 

ಇವುಗಳು ಒಟ್ಟೊಟ್ಟಿಗೆ ಇದ್ದರೂ ಕೊನೆಗೂ ಒಂದಕ್ಕೊಂದು ಅಪರಿಚಿತವಾಗಿಯೇ 

ಉಳಿಯುತ್ತದೆ. ಏಕೆಂದರೆ ಅವುಗಳು ನಿರ್ಜೀವ ವಸ್ತುಗಳು. ಅವುಗಳಲ್ಲಿ ಭಾವಗಳ 

ವಿನಿಯಮವು ಅಸಾಧ್ಯ. ಹಾಗೆಯೇ ಇಂದು ಮಾನವ ನಿರ್ಭಾವುಕನಾಗಿ, 

ವಸ್ತುವಿನಂತೆ ತನ್ನವರಲ್ಲಿ ಬೆರೆಯದೆ, ತನ್ನವರು ತನ್ನೊಂದಿಗೆ ಬೆರೆಯಲು ಅವಕಾಶ 

ನೀಡದೆ, ತನ್ನಲೇ ತಾನೇ ಹುದುಗಿ ಕೊನೆಗೆ ನಾಶವಾಗುತ್ತಿದ್ದಾನೆ. ಎಂತಹ 

ದುರಂತ?!


ಬಹಳ ವರ್ಷಗಳ ಹಿಂದೆ ದೂರದರ್ಶನದಲ್ಲಿ ಈ ಕವನದ ರೂಪಕವನ್ನು ಪ್ರಸಾರ 

ಮಾಡಲಾಗುತ್ತಿತ್ತು. ಆ ರೂಪಕದಲ್ಲಿ ಕವನದ ಭಾವವನ್ನು ಕೇವಲ ಗಂಡ-ಹೆಂಡತಿ 

ಸಂಬಂಧಕ್ಕೆ ಅನ್ವಯಿಸಿ ಚಿತ್ರಿಸಲಾಗಿತ್ತು. ಈ ಕವನವು ಎಲ್ಲಾ ಮಾನವನ 

ಸಂಬಂಧಗಳಿಗೂ ಸಂಬಂಧಿಸಿರುವುದಾಗಿ ನನಗೆ ಕಾಣುತ್ತದೆ. ಉದಾಹರಣೆಗೆ, 

ತಂದೆ-ಮಕ್ಕಳು, ಅಕ್ಕ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ, ಗೆಳೆಯ-ಗೆಳತಿ, ಹೀಗೆ 

ಎಲ್ಲಾ ಸಂಬಂಧಗಳಲ್ಲಿನ ವಿರಸ, ಭಗ್ನತೆಯನ್ನು ಸೂಚಿಸುತ್ತದೆ ಎಂಬುದು ನನ್ನ 

ಅಭಿಪ್ರಾಯ. ಕವಿಯ ಭಾವಕ್ಕೆ ಸ್ಪಂದಿಸುವ ಸಲುವಾಗಿ, ಬನ್ನೀ ಈ ಕವಿತೆಯ 

ಸಾಲುಗಳನ್ನೊಮ್ಮೆ ಗುನುಗುತ್ತ ಕೆಲ ಕ್ಷಣ ತಮ್‌ತಮ್ಮ ಅಂತರಾತ್ಮಗಳಿಗೊಮ್ಮೆ 

ಜಾರೋಣ, ಖಂಡಿತ ನಮಗೆ ಅಲ್ಲೊಂದು ಮುಖ ಕಂಡೇ ಕಾಣುತ್ತದೆ.


ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ,

ಅರಿತೆವೇನು ನಾವು ನಮ್ಮ ಅಂತರಾಳವ|| ಪಲ್ಲವಿ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ

ನೀರಿನಾಳ ತಿಳಿಯಿತೇನು ಹಾಯಿದೋಣಿಗೆ||ಪಲ್ಲವಿ||

ಸಾವಿರಾರು ಮುಖದ ಭಾವ ಹಿಡಿದು ತೋರಿದೆ

ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ||ಪಲ್ಲವಿ||

-ಹೆಚ್.ಎಸ್. ವೆಂಕಟೇಶ ಮೂರ್ತಿ


ಪಂಜುವಿನಲ್ಲಿ,


http://www.panjumagazine.com/?p=2958



ಧನ್ಯವಾದಗಳು,

-ದಿವ್ಯ ಆಂಜನಪ್ಪ
13/10/2012

4 comments:

  1. ತುಂಬಾ ಮಾರ್ಮಿಕ ಕವನ. ಕವಿಗೆ ಶರಣು.

    ReplyDelete
  2. :-)ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್

    ReplyDelete
  3. ಧನ್ಯವಾದಗಳು ಸರ್

    ReplyDelete