Sunday 1 December 2013

ಕಥೆ

ಕಥೆ; 

ಅವನು ಒಳ್ಳೆಯವನೇ ಆದರೆ,,,,, ಬುದ್ದಿ ಇಲ್ಲದವನು. ಕಟ್ಟಿಕೊಂಡು ನಾನೇನು ಮಾಡಲಿ? ಪ್ರೀತಿಯಿದ್ದರೆ ಸಾಕೇ? ಅದನ್ನುಳಿಸಿಕೊಳ್ಳಲು ಬುದ್ದಿ ಇರಬೇಕು. ಈಗ ಎಲ್ಲಾ ಎಡವಟ್ಟು ಮಾಡಿಕೊಂಡು ನನ್ನ ಪ್ರಾಣ ಹಿಂಡುತ್ತಿದ್ದಾನೆ. ಮೂರ್ಖ!. ಎಂದೊಂದೇ ಸಮನೆ ಅವನನ್ನ ತನ್ನ ಮನಸ್ಸಿನಲ್ಲಿಯೇ ಬೈಯ್ಯುತ್ತಿದ್ದಾಳೆ ನಕ್ಷತ್ರ.

ವಿವೇಕ್ ಅವಳಿಗಿಂತ ಆರು ವರ್ಷ ದೊಡ್ಡವನು, ಆದರೂ ಜೊತೆಯಲ್ಲಿ ಓದಿದವನು. ದೊಡ್ದವನು ಎನ್ನುವ ಭಾವಕ್ಕೆ ಗೌರವದಿಂದ ಮಾತನ್ನಾಡಿಸುತ್ತಿದ್ದಳಷ್ಟೇ. ಅವಳಿಗರಿವಿರಲಿಲ್ಲ ಅವನ ಪ್ರೀತಿ, ಆತ ಹೇಳಲಾಗದೆ ಒದ್ದಾಡಿದ್ದ. ಅವನ ಸ್ನೇಹಿತನಿಂದ ಅವಳಿಗೆ ಸುದ್ದಿ ತಲುಪಿ ಅವಳು ಬಜಾರಿಯಂತೆ ವಿವೇಕನ ಮೇಲೆರಗಿದ್ದಳು, ಗುಂಡಿನಂತಹ ಮಾತಿನ ದಾಳಿಯಲ್ಲಿ. ಕೊನೆಗೆ ಅವನೇ ಕ್ಷಮೆ ಕೇಳಿ ತನ್ನ ಸ್ನೇಹಿತನಿಗೆ ತಿಳುವಳಿಕೆ ನೀಡುವುದಾಗಿ ತಿಳಿಸಿ ಸಮಾಧಾನಪಡಿಸಿದ್ದ. ಹೀಗೊಂದು ಸುದ್ಧಿ ಅವಳಿಗೆ ಮಾನಸಿಕ ಹಿಂಸೆಯಾಗಿತ್ತು. ಅದರೊತ್ತಡಕ್ಕೆ ಪದೇ ಪದೇ ವಿವೇಕನಿಗೇ ಕರೆ ಮಾಡಿ ವಿಚಾರಿಸಿದ್ದಳು. "ಹೇಳಿದಿರಾ ಇಲ್ಲವಾ? ಅವನಿಗೆ ಹೇಳಿ ನನ್ನೊಂದಿಗೆ ಮಾತಾಡಲು ನಾನೇ ಸರಿಯಾಗಿ ಹೇಳುತ್ತೇನೆ. ನನ್ನ ಕಾಲ್ ರಿಸೀವ್ ಮಾಡಿತ್ತಿಲ್ಲ ಆ ನಿಮ್ಮ ಸ್ನೇಹಿತ" ಎಂದೆಲ್ಲ್ಲಾ ಬೊಬ್ಬೆಯಿಡುತ್ತಿದ್ದಳು. ಪ್ರಾರಂಭದಲ್ಲಿ ಕೋಪಾತಾಪದಿಂದಿದ್ದ ಅವಳ ಮಾತುಗಳು ಕೊನೆ ಕೊನೆಗೆ ಮೃದುವಾಗಿ ಹತಾಶಳಾಗಿ ವಿವೇಕನಲ್ಲಿಯೇ ಅತುಬಿಟ್ಟಿದ್ದಳು. ಅವನೇ ಸಮಾಧಾನ ಹೇಳಿದ್ದನು. ತಾನು ಪ್ರೀತಿಸುವ ಹುಡುಗಿ ತನ್ನ ಪ್ರೀತಿ ವಿಚಾರ ಹೇಳಿದ ತನ್ನ ಗೆಳೆಯ ಮತ್ತ್ಯಾರಿಗಾದರೂ ಹೀಗೆ ಹೇಳಿ ಅವಳ ಮಾನ ಕಳೆದಾನೆಂದು ರೋದಿಸುತ್ತಿರುವವಳ ಕಂಡು ಬೇಸರಿಸದೇ; ಪ್ರೀತಿ ಫಲಿಸದಿದ್ದರೂ ಸರಿಯೇ ಈಗವಳು ಹಿಂಸೆಗಳಿಂದ ಹೊರಬರಲೆಂದು ಅವನ ಸಮಾಧಾನದ ಪ್ರಯತ್ನದಿಂದ ಬಹುಶಃ ಅವಳನ್ನು ಅವನು ಗೆದ್ದಿದ್ದ.

ಪ್ರೀತಿ ಚಿಗುರಿತ್ತು. ಮೃದು ಸ್ವಭಾವ ಆತನದು. ತನ್ನನ್ನು ಪ್ರೀತಿಸುವ ಅವನ ಪರಿಗೆ ಅವಳೂ ಮೂಕಿ. ಆದರೆ ಆತ ಅವಿವೇಕಿ. ಅತೀ ಭಾವುಕ. ಜಾತಿಗಳು ಒಂದೇ ಆದರೂ ಅದರೋಳಗಿನವುಗಳು ಬೇರೆಯಂತೆ, ಅದರರಿವಿಲ್ಲದೇ ಪ್ರೀತಿಸಿದ್ದರು ಪ್ರೇಮಿಗಳು. ತನ್ನ ಪ್ರೀತಿಯ ವಿಚಾರವನ್ನು ವಿವೇಕ ಅತಿ ಶೀಘ್ರವೇ ಮನೆಯಲ್ಲಿ ತಿಳಿಸುಬಿಟ್ಟಿದ್ದ. ತನ್ನ ಮನೆಯವರೂ ಎಂದಿಗೂ ತನ್ನ ಆಕಾಂಕ್ಷೆಗಳಿಗೆ ಅಡ್ಡಿಪಡಿಸಲಾರರೆಂದು ನಂಬಿದ್ದ. ಆದರೆ ಆದದ್ದೇ ಬೇರೆ ಆತ್ಮಹತ್ಯೆಗಳ ಹೆದರಿಕೆಗಳನ್ನೊಡ್ಡಿ ಅವನ ಒಳ ಜಾತಿಯೊಳಗೇ ಒಂದು ಹುಡುಗಿಯನ್ನು ಗೊತ್ತು ಮಾಡಿಯೇಬಿಟ್ಟಿದ್ದರು. ಇದು ನಕ್ಷತ್ರಳಿಗೆ ಸಹಿಸಲಾಗದ ದುಃಖ, ಏನೇನೋ ಯೋಚಿಸಿ ಕೊನೆಗೆ ಮದುವೆಯಾಗಿಬಿಡೋಣವೆಂದು ಒತ್ತಾಯಿಸಿದರೂ ವಿವೇಕ ಕೇಳದೆ ಮನೆಯವರನ್ನೊಪ್ಪಿಸಲು ತಾನಿನ್ನೂ ಪ್ರಯತ್ನಿಸುವುದಾಗಿ ಹೇಳುತ್ತಾನೆ. ಅವನಿಗೆ ಅದರಲ್ಲಿ ನಂಬಿಕೆಯಿದೆ, ಜೊತೆಗೆ ಕುಪಿತನಾದವನನ್ನೂ ತಾನೂ ಹೀಗೆ ಒತ್ತಾಯಿಸುವುದು ಸರಿಯೆನಿಸಲಿಲ್ಲವಳಿಗೆ. ಕಾಯುವಳಷ್ಟೇ,,,,,,,,,,,

ಈ ಮೂರು ತಿಂಗಳಲ್ಲಿ ನಕ್ಷತ್ರಳ ಮೊಬೈಲ್ ನಂಬರ್ ಬದಲಾಗಿದೆ, ಅವಳೂ ಬದಲಾಗಿದ್ದಾಳೆ. ಆದರೆ ವಿವೇಕನಿನ್ನೂ ಅವಳನ್ನು ಪ್ರೇಮಿಸುತ್ತಿದ್ದಾನೆ, ಕಾಡಿತ್ತಿದ್ದಾನೆ. ಅವಳ ಮನೆ ಆಫೀಸು ಎಲ್ಲವೂ ಅವನಿಗೆ ಪರಿಚಿತ. ಅವಳನ್ನು ಮಾತನಾಡಿಸದೇ ಅವಳ ಹಿಂಬಾಲಿಸುತ್ತಾನೆ. ಇವತ್ತು ಇಂತದ್ದೇ ಬಟ್ಟೇ ಹಾಕಿದ್ದೆ ನೀನು, ಚೆಂದ ಕಾಣುತ್ತಿದ್ದೆ ಎಂದೆಲ್ಲಾ ಹೇಳುತ್ತಾನೆ ದಿಢೀರನೆ ಮನೆಯ ಫೋನಿಗೆ ಕಾಲ್ ಮಾಡಿ. ನಕಶಿಕಾಂತ ಉರಿದು ಹೋಗುವಳ ನಕ್ಷತ್ರ. ಅದರೆ ಬೈಯ್ಯಲಾರಳು ಕಾರಣ ಮನೆಯ ಫೋನ್, ಸುತ್ತಲೂ ಮನೆಯವರು. ಹೀಗೆಯೇ ಒಂದೆರಡು ಬಾರಿ ಆದಮೇಲೆ ರೇಗಿದಳು, "ಏನ್ರೀ ಏನ್ ತಿಳ್ಕೊಂಡಿದ್ದೀರಾ ನನ್ನಾ? ಏನ್ ಹೆದರಿಸುತ್ತೀರಾ? ಏನ್ರೀ ಮಾಡ್ತೀರಾ?,,,,,," ಇಷ್ಟೇ ಸಾಧ್ಯಾವಾದದ್ದೂ ಕೂಡ, ಅಷ್ಟರಲ್ಲಿ ಮೊದಲು ರಿಸೀವ್ ಮಾಡಿ ಮಗಳಿಗೆ ಫೋನ್ ಕೊಟ್ಟ ಅವಳಪ್ಪ ಅವಳ ಅಬ್ಬರಕ್ಕೆ ಪಕ್ಕ ಬಂದು ನಿಂತಿದ್ದರು. ಫೋನಿಟ್ಟು ಸುಮ್ಮನೆ ನಿಂತಳಾದರೂ ಅಪ್ಪನಿಗೆ ಉತ್ತರಿಸಬೇಕಿತ್ತು,,,, "ಏನಿಲ್ಲಪ್ಪ, ನನ್ನ ಫ್ರೆಂಡ್ ಅವನ ಬರ್ಥಡೆಗೆ ಹೋಗಿಲ್ಲ ಅಂತ ಬೈತಾಯಿದ್ದಾ ಅದಕ್ಕೆ ನಾನೂ ರೇಗಿದೆ" ಅಂದಳು. ನಂಬದಿದ್ದರೂ ಸುಮ್ಮನಿದ್ದರು, ಮಗಳು ತಪ್ಪು ಮಾಡಲಾರಳು ಎಂಬ ನಂಬಿಕೆಯಷ್ಟೇ. ಇನ್ನಾಗದು ಎಂದು ಭಾವಿಸಿದ ನಕ್ಷತ್ರ ಹೊರಗೆ ಹೋಗಿ ವಿವೇಕನಿಗೆ ಕಾಲ್ ಮಾಡಿ "ಎಲ್ಲಿದ್ದೀರಾ" ಕೇಳುವಳು. ಅವನು; "ನಿಮ್ಮನೆ ಪಕ್ಕ". ಸರಿಯೆಂದು ಅಲ್ಲೆ ಪಕ್ಕದ ಗಲ್ಲಿಗೆ ಕರೆದು ಮಾತನಾಡಿಸುವಳು,,,,

ಮಾತನಾಡಲಾರದ ಪರಿಸ್ಥಿತಿ ವಿವೇಕನದು, ದುಃಖಳಿಸುತ್ತಾನೆ. ಅವನ ಕಣ್ಣೀರಿಗೆ ಪಾಪವೆನಿಸಿದರೂ,,,,
ನಕ್ಷತ್ರ ಮೊದಲು ಮಾತನ್ನಾಡುವಳು, "ಸರಿ ಯಾಕೆ ನೀವು ಹೀಗೆಲ್ಲಾ ಮಾಡೋದು, ಏನ್ ಮಾಡ್ಬೇಕು ಅಂತಿದ್ದೀರಾ". ವಿವೇಕ್ ಕೆಲಕಾಲ ಸುಮ್ಮನಿದ್ದು ಹೇಳುವನು, "ನಿಮ್ಮನ್ನು ಬಿಟ್ಟು ಇರೋದಿಕ್ಕೆ ಆಗೊಲ್ಲ", "ಎಂದಿದ್ದರೂ ನೀವೇ ನನ್ನ ಹೆಂಡತಿ". ಅವಳ ಗಡಸು ಧ್ವನಿಗೆ ಅವನಲ್ಲಿ ಅವಳಿಗಾಗಿ ಬಹುವಚನವಲ್ಲ, ಅವಳ ಮೇಲಿನ ಗೌರವ ಹಾಗೆಯೇ ಇದ್ದದ್ದು.

ನಕ್ಷತ್ರ, ವಿವೇಕನನ್ನು ಅರ್ಥ ಮಾಡಿಕೊಂಡಿದ್ದಳು, ತುಂಬಾ ಪ್ರೀತಿಸಿದ್ದಳೂ ಕೂಡ, ಆದರೆ ಅಂದು ಅವನಾಡಿದ ಮಾತುಗಳು? ಅವನ ನಡೆ? ನೆನಸಿದಷ್ಟೂ ಅವಳು ಅವನಿಂದ ದೂರ.

ನಕ್ಷತ್ರ ವಾಸ್ತವಕ್ಕಿಳಿದು ಹೇಳುವಳು, "ಈಗೇನು ಮಾಡಲಾಗದು. ಬುದ್ಧಿಯಿರಬೇಕಿತ್ತು ನಿಮಗೆ,,,,,"
"ತಪ್ಪು ನಿಮ್ಮದೇ ಈಗ ನನ್ನೇನ್ನೇಕೆ ಹೀಗೆ ಕಾಡುವುದು ನೀವು?",,,,
ವಿವೇಕ್ ಮೌನ,,,,,,,,,,,,,, ತನ್ನ ಕೈಯಲ್ಲಿದ್ದ ಡೈರಿಯನ್ನು ಅವಳ ಕೈಗಿಡುವನು. ನಕ್ಷತ್ರ ಓದುತ್ತಾಳೆ. ಬೆಳಗ್ಗೆ ಗುಡ್ ಮಾರ್ನಿಂಗ್ನಿಂದ ಹಿಡಿದು ರಾತ್ರಿಯ ಗುಡ್ ನೈಟ್ ಮೆಸೇಜ್ನವರೆಗೂ ವಿವೇಕ್ ನಕ್ಷತ್ರಳಿಗೆ ದಿನನಿತ್ಯ ಕಳುಹಿಸುತ್ತಿದ್ದ ಸಂದೇಶಗಳು. ಅವಳ ಕಣ್ಣಲ್ಲಿ ನೀರು, ಆದರೆ ಅಳಳು ಅವಳು. ಓದಿ ಸುಮ್ಮನೆ ವಾಪಸ್ ಕೊಟ್ಟು ಕೇಳುತ್ತಾಳೆ "ಅದಕ್ಕೇ?!",,,
ಅವನು ಇನ್ನೊಂದು ಕಾಗದವನ್ನು ಕೈಗಿಡುತ್ತಾನೆ. ಅದರಲ್ಲಿ ಅವನ ವ್ಯಥೆಗಳ ಸ್ವಗತಗಳನ್ನು ಬರೆದುಕೊಂಡಿದ್ದನು. ಅದನ್ನೋದಿ ಇವಳೇನು ಮಾಡಲಾಗದಿದ್ದರೂ ಓದಿಸುವ ಮನಸ್ಸೇಕಿತ್ತೋ ಅವಳಿಗದು ತಿಳಿಯದಾಗಿತ್ತು. ಓದಿ ರೌದ್ರಾವತಾರವಾಗಿಬಿಟ್ಟಿದ್ದಳು. ವಿವೇಕನನ್ನೇ ದುರುಗುಟ್ಟಿದಳು. "ಮದ್ವೇ ಆಗು ಅಂದಾಗ, ನಮ್ಮನೇಲಿ ಸಾಯ್ತಾರೆ ಅದಕ್ಕೆ ನಾನೂ ಸಾಯ್ತೀನಿ ಅಂದೆ?!", "ಸಾಯ್ಬೇಡ ಹೋಗು ಅಂತ ಬಿಟ್ಟೆ ನಾನು, ಈಗ ನೀನ್ ಮಾಡಿದ್ ಅನುಭವಿಸೊಕ್ ಆಗದೇ ನನ್ ಪ್ರಾಣ ತಿನ್ನೋಕ್ ಬಂದಿದ್ಯಾ? ಇನ್ನೊಂದ್ ಸಲ ಇದೇ ಆಯ್ತು,, ನಾನೇನ್ ಮಾಡ್ತಿನಿ ನಂಗೊತ್ತಿಲ್ಲ,,"

ತಾನು ತಂದುಕೊಂಡ ಬದುಕನ್ನು ನಡೆಸದೇ ತನ್ನೆದುರು ಅಸಂಬದ್ದ ಪರಿಸ್ಥಿತಿಗಳನ್ನು ಸೃಷ್ಠಿಸುತ್ತಿರುವ ವಿವೇಕನ ಬಗ್ಗೆ ಭಯಂಕರ ಕೋಪಗೊಂಡು ಗದರಿದ್ದಳು ನಕ್ಷತ್ರ. ಅವನಲ್ಲಿ ದ್ವೇಷವಿಲ್ಲ, ಪ್ರೀತಿಯೂ ಮಾಸುತ್ತಿದೆ, ವ್ಯಾಮೋಹವಿಲ್ಲವೇ ಇಲ್ಲ, ಅನುಕಂಪವಿದೆ. ಆದರೆ ಅದನ್ನೇ ಅಸ್ತ್ರವಾಗಿಟ್ಟುಕೊಂಡು ತನ್ನನ್ನು ಮಾನಸಿಕವಾಗಿ ಹಿಂಸಿಸಿ ತನ್ನ ದಾರಿಯನ್ನು ಅವನ ಸ್ವಾರ್ಥಕ್ಕೆ ಬಳಿಸಿಕೊಳ್ಳುವ ಅವನ ಭಾವ ತೀರ ಅಸಹನೀಯವೆನಿಸಿ, ಅವನನ್ನು ಗಟ್ಟಿತನದಿ ಎದುರಿಸದೇ ಅವ ಸರಿಹೋಗಲಾರ ಎಂದೆನಿಸಿ, ಅದರಂತೆ ನಿರ್ಧರಿಸಿ ನಿಷ್ಚಿಂತೆಯಾದಳು,,,,,

ಆದರೂ ಅವನು ಬರೆದುಕೊಂಡು ಬಂದ ಪುಟಗಳಲ್ಲಿನ ಕೆಲ ಸಾಲುಗಳು ಮನದ ಹಾಳೆಯಲ್ಲಿ ಹಾದು ಹೋದವು,,,

"ನನಗಿಂದು ಪ್ರಸ್ತ, ಆದರೆ ನನಗಿಲ್ಲಿ ಮನಸ್ಸಿಲ್ಲ, ನನ್ನ ಮನಸ್ಸು ನಿನ್ನಲ್ಲಿ, ನನ್ನ ಪ್ರತೀ ದಿನದ ಪ್ರಸ್ತಗಳನ್ನು ರದ್ದುಗೊಳಿಸಿದ್ದೇನೆ ನಿನ್ನ ನೆನಪಿಗೆ ನಾನಿಲ್ಲಿ,,,," 


ಕಥೆಯನ್ನು ಬರೆಯುವ ಪ್ರಯತ್ನದಲ್ಲಿ,,,,,,,,,,
ಧನ್ಯವಾದಗಳು
ದಿವ್ಯ ಆಂಜನಪ್ಪ
01/12/2013

No comments:

Post a Comment