Friday 24 May 2013

ಲೇಖನ

  "ಅಮ್ಮ", ಪ್ರೀತಿಯ ಮೂರ್ತಿ,,,

ಮನುಷ್ಯ ಜೀವನದ ಏರು ಪೇರುಗಳಲ್ಲಿ ಕೆಲವರು ಎಷ್ಟೋ ಪಡೆದಿರುತ್ತಾರೆ, ಕೆಲವರು ಏಷ್ಟೋ ಕಳೆದಿರುತ್ತಾರೆ ಮತ್ತೆ ಕೆಲವರು ಭರಿಸಲಾರದಂತಹ ಖಾಲಿ ಮನಸ್ಸನ್ನು ಗಿಟ್ಟಿಸಿಕೊಂಡುಬಿಟ್ಟಿರುತ್ತಾರೆ. ವಿಪರ್ಯಾಸ!,,,,ಕೆಲವೊಮ್ಮೆ ತಮ್ಮ ಬಾಲ್ಯದಿಂದಲೂ ತಾಯಿಯ ಪ್ರೀತಿಯನ್ನು ಬಯಸಿ ಪಡೆಯಲಾರದ ಕೂಸುಗಳು ಬಹುಶಃ ಜೀವನವಿಡೀ ಆ ಪ್ರೀತಿಗಾಗಿಯೇ ಹಂಬಲಿಸಿ ಮಾನವನ ಇತರೆ ಸಂಬಂಧಗಳ ಪ್ರೀತಿಗಳಲ್ಲೂ ಕೊರತೆಯನ್ನು ಕಾಣುವಂತಾಗುತ್ತದೋ ಏನೋ ಎಂದೆನಿಸುತ್ತದೆ. ಈ ಪ್ರೀತಿಯ ಹಂಬಲ ಇತರರಿಗೆ ಹಿಂಸೆಯಾಗಿಯೋ, ಅತಿರೇಕವಾಗಿಯೋ ಕಂಡರೆ ಹಂಬಲಿಸುವ ವ್ಯಕ್ತಿಗೆ ಈ ವ್ಯತಿರಿಕ್ತವು ಅರ್ಥವಾಗದ ಗೊಂದಲ. ಯಾರೂ ತನ್ನನ್ನು ಪ್ರೀತಿಸುವುದಿಲ್ಲವೆಂದು ಭಾವಿಸುವ ಈ ಜೀವಿಗಳು ಬಹುಶಃ ಇತರರ ಪ್ರೀತಿಯಲ್ಲಿ ಕೊರತೆಯನ್ನು ಕಾಣುವಂತ ಮನಃಸ್ಥಿತಿಯನ್ನು ತಲುಪಿರುತ್ತಾರೆ. ಕಾರಣ ಅಮ್ಮನಂತ ಪ್ರೀತಿಗೆ ಸರಿಸಾಟಿಯಾದುದು ಯಾವುದೂ ಇಲ್ಲ. ಈ ರೀತಿಯ ಅತೃಪ್ತಿಯಿಂದಾಗಿಯೇ ಮನಸ್ಸು ಖಿನ್ನತೆಗೊಳಗಾಗುತ್ತದೆ ಎನಿಸುತ್ತದೆ. ಬುದ್ಧಿ ಜೀವಿಗಳಾದ ನಾವೆಲ್ಲಾ ಹೇಳಬಹುದು, 'ಮನಸ್ಸನ್ನು ಭಾವನೆಗಳನ್ನು ಹಿಡಿತದಲ್ಲಿಡಬೇಕು, ಮನಸೋ ಇಚ್ಛೆ ಹರಿಬಿಡಬಾರದು" ಎಂದು. ಸಲಹೆ ನೀಡಿದಂತೆ ಅವರೇ ನಾವಾಗಿ ನಿಂದು ಮನೋಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಕಷ್ಟ. ಅದು ಸಾಧ್ಯವಾದರೆ ಅದೇ ಮಾನವೀಯತೆ.

ಇರಬಹುದು ಮನದ ಮೂಲೆಯಲ್ಲಿನ ಒಂದು ಅತೃಪ್ತ ಭಾವದಿಂದ ವ್ಯಕ್ತಿ ಎಷ್ಟೇ ದಕ್ಷನಾದರೂ ಅವರಲ್ಲಿ "ಎನೋ ಕೊರತೆ", "ಏನೋ ತಪ್ಪಿದೆ" ಅನ್ನುವ ಭಾವ ಸಹಜ. ಈ ಭಾವದ ಅರಿವಿನಿಂದ ಮತ್ತಷ್ಟು ಖಿನ್ನರಾಗುವ ಬದಲು. ಅದರ ಸಮಾಧಾನಕರ ಉಪಶಮನದ ದಾರಿಯನ್ನು ಸ್ವತಃ ಕಂಡುಕೊಳ್ಳುವಂತಾಗಬೇಕು. ಆದರೆ ಕಂಡುಕೊಂಡ ದಾರಿ ಒಳ್ಳೆಯದಾಗಿರಬೇಕು ಅಷ್ಟೆ. ಪ್ರಙ್ಞಾವಂತ ವ್ಯಕ್ತಿ ಉತ್ತಮವಾದ ಮಾರ್ಗವನ್ನೇ ಹಿಡಿಯುತ್ತಾನೆ ಎಂಬುದು ನನ್ನ ನಂಬಿಕೆ. ಹೀಗೆ ತಮ್ಮ ತಮ್ಮ ಮನಸ್ಸನ್ನು ಭಾವನೆಗಳನ್ನು ಮಕ್ಕಳಂತೆ ರಮಿಸಿ, ಸಾಂತ್ವನ ನೀಡುವುದರ ಮೂಲಕ ಪರಿಸ್ಥಿತಿಗಳನ್ನು ನಿಭಾಯಿಸಬಹುದು. ಹಾಗಂತ ಭಾವನೆಗಳ ಮೇಲೆ ಹಿಡಿತ ಸಾಧಿಸಿ ನೋಯುವುದನ್ನು ನಾನು ಒಪ್ಪಲಾರೆ. ನಮ್ಮ ಭಾವನೆಗಳ ಮೇಲೆ ನಮಗೆ ಗೌರವವಿದ್ದರೆ, ನಮ್ಮ ಮನಸ್ಸು ಒಳ್ಳೇಯದೇ ಹೇಳುತ್ತಿದೆ ಎಂಬ ಭರವಸೆಯಿದ್ದರೆ ಖಂಡಿತ ಭಾವನೆಗಳನ್ನು ಅರಳಲು ಬಿಡಬೇಕು. ಆಗಲೇ ಮನಸ್ಸು ಪ್ರಫುಲ್ಲವಾಗಿ, ಜೀವನ ಉತ್ಸಾಹದಾಯಕವಾಗುವುದು.

ಭಾವಗಳಲ್ಲೇ ಶ್ರೇಷ್ಠ ಭಾವ ಪ್ರೀತಿ. ತಾಯಿಯ ನಂತರ ತಾಯಿಯಂತೆ ಪ್ರಿತಿಸುವ ಅಕ್ಕಂದಿರು-ಅತ್ತಿಗೆಯರು, ತಂದೆಯಂತಹ ಭಾವಂದಿರು- ಅಣ್ಣಂದಿರು; ಹೀಗೆ ಪ್ರೀತಿಯ ಯಾತ್ರೆ ನಡೆದಿರುವಾಗ ಯೌವ್ವನದಲ್ಲಿ ಅದೇ ಅಮ್ಮನ ಪ್ರೀತಿಯ ಮಟ್ಟದಲ್ಲಿ ಸಂಗಾತಿಗಳ ಪ್ರೀತಿಯನ್ನು ನಿರೀಕ್ಷಿಸುತ್ತೇವೆ ಎಂದೆನಿಸುತ್ತದೆ. ಕೆಲವೊಮ್ಮೆ ಇಲ್ಲಿ ಕೆಲವರು ಅದೃಷ್ಟವಂತರು ಎನಿಸಿಕೊಂಡರೆ ಮತ್ತೆ ಕೆಲವರು,,,,,,,,,,,,,. :-)

ಆದರೂ ಮನುಷ್ಯನ ಮನಸ್ಸು ನಿರಂತರ ಪ್ರೀತಿಯ ದಾಸ. ಮುಂದೆ ಮಕ್ಕಳಲ್ಲಿ, ಮೊಮ್ಮಕ್ಕಳಲ್ಲಿ ಹೀಗೆ ಮುಂದುವರೆಯುವುದು. ಯಾವುದೇ ಸಂಭಂದವಾಗಲಿ ಅಲ್ಲಿನ ಪ್ರೀತಿಯ ಕಾಂತಿಯಿಂದಲೇ ಆ ಬಾಂಧವ್ಯದ ಉಜ್ವಲ ಭವಿಷ್ಯ ಸಾಧ್ಯ. ಸ್ನೇಹಿತರೇ, "ಅಮ್ಮ", "ಪ್ರೀತಿ" ಇಂತಹ ಚೈತನ್ಯ ಚಿಲುಮೆಗಳ ಕುರಿತು ಎಷ್ಟೇ ಮಾತನಾಡಿದರೂ-ಬರೆದರೂ ಇನ್ನೂ ಮತ್ತಷ್ಟು ಉಳಿಯುತ್ತದೆ. ಎಲ್ಲವನ್ನೂ ಮಾತಿನಲ್ಲಿ ಬರಹಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲವೇನೋ?.. ಧನ್ಯವಾದಗಳು

-ದಿವ್ಯ ಆಂಜನಪ್ಪ:-)

No comments:

Post a Comment