Thursday 17 April 2014

ಮನದ ಮಾತು

ಸದಾ ಕಾಲ ಪದ ಕಟ್ಟೊ ಹುಚ್ಚೊಂದು ನನಗೆ ಈಗೀಗ ಹೆಚ್ಚೇ. ಇಂದು ಮತದಾನ ಕಾರ್ಯವೆಲ್ಲಾ ಮುಗಿದು ಇನ್ನೇನು ಎಲ್ಲಾ ಹೊಂದಿಸಿಕೊಂಡು ಹೊರಡಬೇಕು ಎನ್ನುವ ಹೊತ್ತಿನಲ್ಲಿ ಎಲ್ಲರಲ್ಲೂ ಏನೋ ಒಂದು ರೀತಿಯ ನಿರಾಳ ಸ್ಥಿತಿ, ಹಾಗಾಗಿ ತುಸು ಹಾಸ್ಯದ ಪರಿಸರ. ಅಕ್ಕಪಕ್ಕದ ಬೂತಿನ ನಮ್ಮಂತಹ ಮತದಾನ ಕೆಲಸಗಾರರನ್ನು ಪರಿಚಯಿಸಿಕೊಂಡು ಕೆಲಸದ ನಡುವೆಯೂ ಚೂರು ಮಾತುಕತೆ ಸೊಗಸಾಗಿಯೇ ನಡೆದಿರುತ್ತದೆ. ಹೀಗಿರಲು, ನೆನ್ನೆಯಿಂದಲೂ ಬಹು ಗಂಭೀರನಾಗಿದ್ದ ನಮ್ಮ ಬೂತಿನ ಪೋಲೀಸಿನವ ಚೂರು ಹೆಚ್ಚೇ ನಕ್ಕು ನಲಿದಿದ್ದ ನಮ್ಮೊಡನೆ. ನನಗೋ ಆಶ್ಚರ್ಯ ಎಷ್ಟು ಸೈಲೆಂಟ್ ಆಗಿದ್ದವ ಇಷ್ಟು ಚೆಂದ ಮಾತಾಡ್ತಾನೆ ನಗಿಸ್ತಾನೆ ಅಂತ,, 
ಹೊರಡೋ ಮುನ್ನ ಅವನ ನಗು ಕಾಡಿದ್ದು ನಿಜವೇ, ಒಮ್ಮೆ ಹೇಳಿಬಿಡಬೇಕಿತ್ತು ಅವನಿಗೆ,, " ನೀವು ನಕ್ಕಿದ್ರೆ ತುಂಬಾ ಚೆನ್ನಾಗಿ ಕಾಣ್ತಿರ ಕಪ್ಪು ಸುಂದರ" ಅಂತ,, ಪದಕಟ್ಟೋ ಹುಮ್ಮಸ್ಸು ಬೇರೆ,, ಹಾಗೆಲ್ಲಾ ಮಾಡ್ಬಾರ್ದು ಅಂತ ಅಂದ್ಕೊಂಡು ಸುಮ್ನಾದೆ,, ಆದ್ರೂ ಹೇಳ್ಬೇಕಿತ್ತು,,,  
ಮತ್ತೆ ಸಿಕ್ಕಾಗ್ ಹೇಳ್ಬಿಡೋದು ಹೇಗಿದ್ರೂ ಒಂದೇ ತಾಲ್ಲೂಕು,, ಸಿಗಬಹುದು,,!! 
ಅಂದ ಹಾಗೆ ಪ್ರತಿಬಾರಿಗಿಂತ ಈ ಬಾರಿಯ ಚುನಾವಣಾ ಕಾರ್ಯ ಹೆಚ್ಚು ಖುಷಿ ಕೊಟ್ಟಿತು, ಕಾರಣ ಮೊದಲನೇಯದಾಗಿ, ಮಹಿಳೆಯರಿಗೆ ರಾತ್ರಿ ಮನೆಗೆ ತೆರಳೋ ಅವಕಾಶ, ಮತ್ತು ಆ ಅವಕಾಶದ ಆಸೆಗೆ ಬಿದ್ದು ನಾನೂ ಮನೆಗೆ ಬಂದುಬಿಟ್ಟಿದ್ದೆ ಕೇವಲ ಬಿ,ಎಮ್,ಟಿ,ಸಿ ಯ ಬಸ್ಸನು ನಂಬಿ,, 
ಸ್ವಂತ ವಾಹನವಿಲ್ಲದೇ ಸರಿರಾತ್ರಿಯಂತ ಮುಂಜಾವಿನಲಿ ಮನೆಯ ಹೊರಗೆ ಕಾಲಿಡುವುದು, ದೂರಕ್ಕೆಲ್ಲೋ ಪ್ರಯಾಣವು ನನಗೆ ಊಹಿಸಲೂ ಅಸಾಧ್ಯವಾಗಿತ್ತು. ಆದರೂ ಬಂದುಬಿಟ್ಟಿದ್ದೆ, ಮುಂಜಾವು ಹೋಗಲೇಬೇಕಿತ್ತು. ಒಂದು ವ್ಯವಸ್ಥೆ ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಇರುತ್ತದೆ. ಆದರೆ ಅದರ ಅನುಷ್ಟಾನದಲ್ಲಿನ ಲೋಪದೋಷಗಳು ವ್ಯವಸ್ಥೆಗೆ ಕೆಟ್ಟ ಹೆಸರನ್ನು ತಂದುಬಿಟ್ಟಿರುತ್ತದೆ. ಇಂದು ಮುಂಜಾವು ಕತ್ತಲೆ ದಾರಿಯಲಿ ಬಸ್ಸಿಗಾಗಿ ನಿಂತಿದ್ದಾಗ ನನಗನಿಸಿದ್ದು. ಭಯವೆನಿಸಿದರೂ ಬಹಳ ಕಾಂಫಿಡೆಂಟ್ ಆಗಿ ಹೊರಟ ನಾನು ನನ್ನೊಳಗೊಬ್ಬ ಜೊತೆಗಾರನನ್ನು ಕಂಡುಕೊಂಡಿದ್ದೆ. ಸದಾ ಹೊರಡೋ ಮುನ್ನ, "ಹುಷಾರು" ಅಂತ ಹೇಳುತ್ತಿದ್ದ ನಮ್ಮ ಅಪ್ಪ ಇಂದು ಹೇಳಿದ್ದೂ ಎರಡೇ ಮಾತೇ, "ಏನೇ ಆದ್ರೂ ಭಯಪಡ್ಬಾರ್ದು, ಹೋಗ್ ಬಾ",, ಸಿಕ್ಕಾಪಟ್ಟೇ ಹುಷಿಯಾಗಿತ್ತು ಅಪ್ಪನ ಹೊಸತನದಲ್ಲಿ.
ಇನ್ನು ಎರಡನೇಯದಾಗಿ, ಹೇಗಾದ್ರೂ ಸರಿ ಹೋಗಿ ತಲುಪೋಷ್ಟು ಮನೆಗೆ ಹತ್ತಿರವಾಗೋ ಪ್ರದೇಶಕ್ಕೆ ನೇಮಿಸಿದ್ದು.
ಇನ್ಮುಂದೆ ಚುನಾವಣಾ ಕಾರ್ಯ ಅಂದ್ರೆ ಬೆಚ್ಚಿ ಹೆದುರೋ ಕಾಲ ಇಲ್ಲ ಅಂತ ಅಂದ್ಕೊಳ್ತಿನಿ,, ಹಲವಾರು ಕುಂದುಕೊರತೆಗಳಿರಬಹುದು ಆದರೂ ಒಂದೇ ಒಂದು ಮನೆಯನ್ನೇ ತೂಗಿಸುವಾಗ ವಾಲುವುದುಂಟು, ಇನ್ನು ಸಾಗರದಂತ ಜನರನ್ನು ಕೂಡಿಕೊಂಡು ಒಂದು ಕಾರ್ಯ ನಡೆಸುವಾಗ? ಏರುಪೇರು ಘಟಿಸದಿದ್ದರೆ ಹೇಗೆ? ಅಲ್ಲಿರುವವರು ನಾವೇ,,, !!?
ದೂಷಿಸುವ ಮುನ್ನ ಯೋಚಿಸೋಣ, ಅರ್ಥ ಕೊಡುವಲ್ಲಿ ನಾನೇಲ್ಲಿ ಎಡವಿದೆಯೆಂದು,,, 

17/04/2014

No comments:

Post a Comment