Tuesday 25 June 2013

ಲೇಖನ

ಕುವೆಂಪುರವರ ಸೂರ್ಯ ಗೀತೆ; ವಿಶ್ಲೇಷಣೆ


ಆನಂದಮಯ ಈ ಜಗಹೃದಯ………

ಕುವೆಂಪುರವರ ಸೂರ್ಯಗೀತೆಗಳಲ್ಲಿ ಪ್ರಸಿದ್ಧವಾದ ಈ ಗೀತೆಯೂ ಒಂದು. ಕವಿಗಳು ಈ ಜಗತ್ತಿನ ಎಲ್ಲಾ ಆಗೂ-ಹೋಗುಗಳ ಮೂಲವು 'ಶಿವ'ನೆಂದು ಭಾವಿಸುತ್ತಾರೆ. ಹಸುರಿನಿಂದ ನಳನಳಿಸುವ ಸಹ್ಯಾದ್ರಿಯಂತಹ ಬೆಟ್ಟಗಳು-ಅರಣ್ಯಗಳು. ಭೋರ್ಗರೆವ ಸಾಗರ, ನೀಲಿ ಆಕಾಶ, ಧುಮ್ಮಿಕ್ಕುವ ಜಲಧಾರೆ, ಸೋನೆ ಮಳೆ, ಹಕ್ಕಿಗಳ ಚಿಲಿಪಿಲಿ, ಮೋಡಗಳ ಘರ್ಜನೆ, ಹಾಡುವ ಕೋಗಿಲೆಗಳ ಕಂಠ ಸಿರಿ- ಹೀಗೆ ಪ್ರಕೃತಿಯ ಪ್ರತೀ ಸೌಂದರ್ಯದಲ್ಲೂ ಶಿವನ ಹೃದಯವು ವಿಸ್ತರಿಸಿದೆ ಎಂದು ಕವಿ ಉನ್ಮತ್ತರಾಗಿ ಹಾಡಿದ್ದಾರೆ.

ಪ್ರಕೃತಿಯಲ್ಲಿ ಸಾಧಾರಣವಾಗಿ ಸಂಭವಿಸುವ ಸೂರ್ಯೋದಯ ಚಂದ್ರೋದಯವೂ ದೇವನ ದಯೆ ಎಂದಿದ್ದಾರೆ. ಸೂರ್ಯೋದಯ ಚಂದ್ರೋದಯಗಳನ್ನು ವೈಜ್ಞಾನಿಕ ದೃಷ್ಟಿಯಿಂದ ವಿವರಿಸುವಾಗ, ಸೂರ್ಯವೊಂದು ನಕ್ಷತ್ರ, ಆ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಭೂಮಿಯನ್ನೊಳಗೊಂಡ ಇತರೆ ಏಳು ಗ್ರಹಗಳು ಅದನ್ನು ಸುತ್ತುತ್ತಿರುತ್ತವೆಂದು ಹೇಳುತ್ತೇವೆ. ಕೆಲ ಗ್ರಹಗಳು ಅದರವೇ ಉಪಗ್ರಹಗಳನ್ನು ಹೊಂದಿದ್ದು. ಆಯಾ ಉಪಗ್ರಹಗಳು ಆಯಾ ಗ್ರಹಗಳನ್ನು ಸುತ್ತುತ್ತಿರುತ್ತವೆ. ಹಾಗೆಯೇ ಭೂಮಿಯೂ ಹೊಂದಿರುವ ಸ್ವಾಭಾವಿಕ ಉಪಗ್ರಹ 'ಚಂದ್ರ'. ಭೂಮಿಯ ಭ್ರಮಣೆ ಮತ್ತು ಪರಿಭ್ರಮಣೆಯಿಂದಾಗಿ ರಾತ್ರಿ-ಹಗಲು ಉಂಟಾಗುವ ಮೂಲಕ ನಮಗೆ ಸೂರ್ಯೋದಯ ಮತ್ತು ಚಂದ್ರೋದಯವಾದಂತೆ ಭಾಸವಾಗುತ್ತದೆ.  ಸೂರ್ಯೋದಯ ಮತ್ತು ಚಂದ್ರೋದಯದಿಂದಾಗುವ ಪ್ರಕೃತಿಯಲ್ಲಿನ ಬದಲಾವಣೆಗಳು ರೋಚಕವಾಗಿರುತ್ತವೆ. ಕೆಂಪೇರಿದ ಬಾನು, ಹೊನ್ನಿನ ಹತ್ತಿರಾಶಿಗಳಂತ ಮೋಡಗಳು, ಬೆಳದಿಂಗಳ ರಾತ್ರಿಗಳು. ಮನಸ್ಸಿಗೆ ಮುದ ನೀಡುವವು. ಈ ಎಲ್ಲಾ ಪ್ರಕ್ರಿಯೆಯು ದೇವರ ದಯೆಯೆಂದು ಕವಿಗಳು ಹೇಳಿದ್ದಾರೆ.

                ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ,
                ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ
                ಆನಂದಮಯ ಈ ಜಗಹೃದಯ

ಸೂರ್ಯನ ಬಿಸಿಲು- ಅದು ಬರೀ ಬಿಸಿಲಲ್ಲ, 'ಬೇಗೆ' ಎನ್ನದಿರು ಅದು ಸೂರ್ಯನ ಕೃಪೆಯೆಂದು ತಿಳಿಯೆಂದು ಹೇಳಿದ್ದಾರೆ. ಹೌದು ಬಿಸಿಲು-ಬೆಳಕು ಇಲ್ಲದಿದ್ದರೆ ಜೀವರಾಶಿಗಳಿಲ್ಲಿ (ಭೂಮಿಯಲ್ಲಿ) ಜೀವಿಸಲು ಸಾಧ್ಯವೇ ಇಲ್ಲ. ಸೂರ್ಯನ ಬೆಳಕ್ಕಿಲ್ಲದ್ದಿದ್ದರೆ ಹಗಲು-ರಾತ್ರಿಗಳಿಲ್ಲ, ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆಯಿಲ್ಲ, ಸಸ್ಯಾವಲಂಬಿ ಪ್ರಾಣಿ-ಪಕ್ಷಿ-ಮಾನವ ಸಂಕುಲಕ್ಕೆ ಆಹಾರವಿಲ್ಲದೆ ಇಡೀ ವ್ಯವಸ್ಥೆಯೇ ಇಲ್ಲಾದಂತಾಗುತ್ತದೆ. ಹಾಗಾಗದಂತೆ ಸೂರ್ಯನು ಕೃಪೆ ತೋರಿ ಬಿಸಿಲನ್ನು ಧರೆಗೆ ನೀಡಿದ್ದಾನೆ. ಕವಿಯ ವೈಚಾರಿಕ ಮನೋಭಾವವನ್ನು ನಾವಿಲ್ಲಿ ಕಾಣಬಹುದು.

                ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ
                ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ
                ಆನಂದಮಯ ಈ ಜಗಹೃದಯ

ಉರಿವ ರವಿಯು ತೇಜಸ್ಸನ ಖಜಾನೆ. ಈ ರವಿಯ ವದನವು ಶಿವನ ಸದನವೆಂದು ಕವಿ ವರ್ಣಿಸಿದ್ದಾರೆ. ಅಂತಹ ಮಹಾ ಕಾಂತಿಯನ್ನು ಶಿವನಿದ್ದಲ್ಲಿ ಮಾತ್ರ ಕಾಣಲು ಸಾಧ್ಯ, ಹಾಗಾಗಿ ಶಿವನ ಸದನವೇ ರವಿಯ ವದನವೆಂಬ ಭಾವ ಈ ಗೀತೆಗೆ ಕಾಂತಿ ತಂದಿದೆ. ಶಿವನೆಂದರೆ ಸೌಂದರ್ಯ, ಕಾಂತಿ, ಪ್ರಭೆ ಎಂದು ಹೇಳುವಾಗ ಅರೆ ತೆರೆದ ಕಣ್ಣಿನ ಧ್ಯಾನಸ್ಥನಾದ ಶಿವನು, "ಶವ ಮುಖದ ಕಣ್ಣೋ" ಎಂದು ಕರೆಯಲ್ಪಟ್ಟಿದ್ದಾನೆ. ಅರೆಗಣ್ಣಿನ ಶಿವನ ಸೌಂದರ್ಯ ಅಮೋಘವಾದದ್ದು.
ಶಿವನಿಲ್ಲದೆ ಸೌಂದರ್ಯವೆಲ್ಲಿ? ಎನ್ನುವ ಕವಿ ಪ್ರಶ್ನೆಗೆ; ಕವಿಗಳೇ "ಪ್ರಕೃತಿ" ಎಂದು ಪರೋಕ್ಷವಾಗಿ ಉತ್ತರಿಸಿದ್ದಾರೆ. ಆ ಪ್ರಕೃತಿಯೇ ಶಿವನ ಹೃದಯ. ಈ ಸುಂದರವಾದ ಪ್ರಕೃತಿಯ ಒಂದು ಭಾಗ; ನಾವು-ನೀವು, ಆನಂದಮಯ ಶಿವನ ಹೃದಯದ ಒಂದಂಶ ನಾವೆಲ್ಲರೂ. ಕವಿ ಕಲ್ಪನೆಗೆ ಜೀವ ತುಂಬುವ ಸಲಿವಾಗಿ ನಾವೆಲ್ಲಾ ಈ ಆನಂದಮಯ ಜಗತ್ತಿನ ಆನಂದಕಂದಮ್ಮಗಳಾಗಬೇಕಿದೆ.

                ರವಿವದನವೇ ಶಿವಸದನವೋ ಬರಿ ಕಣ್ಣದು ಮಣ್ಣೋ
                ಶಿವನಿಲ್ಲದೆ ಸೌಂದರ್ಯವೇ ಶವಮುಖದ ಕಣ್ಣೋ
                ಆನಂದಮಯ ಈ ಜಗಹೃದಯ

ಉದಯಗಳಲ್ಲಿ ಹೃದಯವನ್ನು ಕಾವ್ಯದಲ್ಲಿ ಶಿವನನ್ನು ಕಾಣಬೇಕು ಎಂದು ಹೇಳುವ ಕವಿಗಳು, ಅವುಗಳನ್ನು ಕಾಣಲಾರದ ನಮ್ಮ ಕಣ್ಣು ನಿಷ್ಪ್ರಯೋಜಕವು ಹಾಗೂ ಅವುಗಳನ್ನು ಹಾಗೆ ಕಾಣದ
ಕವಿಯು ಕುರುಡನೆಂದು ಭಾವಿಸುತ್ತಾರೆ.

                ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ
                ಆನಂದಮಯ ಈ ಜಗಹೃದಯ

ಶಿವನನ್ನು ಕಾಣದ ಕವಿ ಕುರುಡನೇ ಸರಿ ಎಂದು ಹೇಳುವಾಗ ಈ ಗೀತೆಯ ಕವಿಗಳಲ್ಲಿನ ಹುದುಗಿದ ಒಂದು ಸಂಶಯದ ಛಾಯೆ ನಮ್ಮರಿವಿಗೆ ಬರುತ್ತದೆ. ಕವಿತ್ವದಲ್ಲಿ ಎಲ್ಲಾ ಕಲ್ಪನೆಗಳು ಸರಿಯೇ, ಆದರೆ ದೇವನು ಇದ್ದಾನೆಯೇ? ಎಂಬ ಪ್ರಶ್ನೆ ಸಹೃದಯನಲ್ಲಿ ಉದ್ಭವಿಸಿದಾಗ ಅದಕ್ಕೆ ಸಮಾಧಾನಕರ ಉತ್ತರವಾಗಿ ಅವರು ಈ ಸಾಲುಗಳನ್ನು ಸೇರಿಸಿರಬಹುದೇ ಎಂದೆನಿಸುತ್ತದೆ.
"ಶಿವ ಕಾವ್ಯದ ಕಣ್ಣೇ" ಎಂಬುದು ನಮಗೆ ಕಾವ್ಯದ ಇತಿಹಾಸವನ್ನು ಸ್ಮರಿಸುವಂತೆ ಮಾಡಿದೆ. ಭಾರತೀಯ ಕಾವ್ಯಮೀಮಾಂಸೆಯ ಉಗಮ ಕಾಲವನ್ನು ನೋಡಿದ್ದಾಗ, ಕಾವ್ಯಕ್ಕೆ ಮೂಲ ನಾಟಕಗಳು. ನಾಟಕ್ಕಕ್ಕೆ ಮೂಲ ನಾಟ್ಯ. ಈ ಎಲ್ಲಾ ಸಾಹಿತ್ಯ ಪ್ರಕಾರಗಳು ಹುಟ್ಟಿದ ಕತೆಯನ್ನು ಹೀಗೆ ವಿವರಿಸಲಾಗಿದೆ; ಲೋಕದ ಜನರು ದ್ವೇಶ ಅಸೂಯೆಗಳಿಂದ ಸಂಕಟಪಡುತ್ತಿದ್ದಾಗ ದೇವತೆಗಳಿಗೆ ಇವರ ಮೇಲೆ ಕರುಣೆಯುಂಟಾಗಿ ಬ್ರಹ್ಮ ದೇವನಲ್ಲಿ ಇವರ ಜಾಡ್ಯವನ್ನು ಹೋಗಲಾಡಿಸಲು ಯಾವುದಾದರೊಂದು ಮನೋರಂಜನ ಸಾಧನವನ್ನು ಕರುಣಿಸಬೇಕಾಗಿ ಕೋರುತ್ತಾರೆ. ಆಗ ಬ್ರಹ್ಮ ದೇವನು ಋಗ್ವೇದದಿಂದ ಭಾಷೆಯನ್ನು, ಯಜುರ್ವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವವೇದದಿಂದ ರಸಗಳನ್ನು ಆಯ್ದುಕೊಂಡು ಶಿವನಿಂದ "ನಾಟ್ಯ"ವನ್ನು ಪಡೆದು, ಅದನ್ನು "ನಾಟ್ಯವೇದ"ವೆಂದು ಸೃಷ್ಟಿಸಿ ಅದರ ಪ್ರಯೋಗವನ್ನು ಭರತಮುನಿಗೂ ಆತನ ನೂರುಮಂದಿ ಮಕ್ಕಳಿಗೂ ವಹಿಸಿಕೊಟ್ಟನೆಂದು ತಿಳಿದು ಬರುತ್ತದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಐದನೇ ವೇದ "ನಾಟ್ಯವೇದ"ವು ಸಾಹಿತ್ಯ ಪ್ರಕಾರಗಳಿಗೆ ಅಡಿಪಾಯದಂತಿದೆ. "ಶಿವನು ಕಾವ್ಯದ ಕಣ್ಣು" ಎನ್ನುವ ಕವಿಗಳ ಭಾವವನ್ನು ಐತಿಹಾಸಿಕ ಹಿನ್ನೆಲೆಯ ಆಧಾರದ ಮೇಲೆ ನಾವು ಒಪ್ಪಲೇ ಬೇಕಾಗಿದೆ. ಸ್ನೇಹಿತರೇ, ಕವಿಯ ಆಶಯದಂತೆ ಆನಂದಮಯ ಶಿವನ ಹೃದಯದಲ್ಲಿ ನಾವೆಲ್ಲರೂ ಆನಂದವನ್ನುಂಡು ಬದುಕನ್ನು ನಂದನವಾಗಿಸೋಣವೇ?.

ಪಂಜುವಿನಲ್ಲಿ
http://www.panjumagazine.com/?p=1506

ಧನ್ಯವಾದಗಳು.
-ದಿವ್ಯ ಆಂಜನಪ್ಪ
10/03/2013

2 comments:

  1. ತುಂಬಾ ಸರಳವಾಗಿ, ಬಿಡಿಸಿ ಬಿಡಿಸಿ ಬರೆದಿದ್ದೀರಾ. ನನಗೆ ತುಂಬಾ ಉಪಕಾರವಾಯಿತು.
    http://badari-poems.blogspot.in/

    ReplyDelete