Tuesday 5 January 2016

ಪದ್ಯ

ಒಗಟು

ಒಗಟೊಂದನು ಕಟ್ಟಿ ಹೇಳಬೇಕೆಂದಿತ್ತು
ಗಟ್ಟಿ ಕಾಳುಗಳಿರಲಿಲ್ಲ
ಆಯ್ದು ಹೊತ್ತ ಹೊತ್ತುಗಳಲ್ಲಿ
ಒಗಟಾದ ಘಳಿಗೆಗಳೇ ಎಲ್ಲಾ
ಬಿಡಿಸಿಕೊಂಡು ಒಗಟು
ಹೊಂದಿಕೊಳ್ಳಬೇಕಿತ್ತು ಮನಸ್ಸು
ನಾ ಒಗ್ಗಲಿಲ್ಲ
ಮನಕ್ಕೆಲ್ಲಾ ಒಗಟೇ ಆಯ್ತಲ್ಲ

ಬೀಜವೊಂದ ಕಂಡು
ಭವಿಷ್ಯ ಹೇಳಬೇಕಿತ್ತು
ಮರದ ಆಕಾರ, ಗಾತ್ರ, ಆಯಸ್ಸು
ಮತ್ತು ಒನಪು-ವೈಯ್ಯಾರ
ನಾ ಕಾಲ ಙ್ಜಾನಿಯಲ್ಲ
ಎಲ್ಲಾ ತಿಳಿದೇ ನಡೆಯಲಿಲ್ಲ

ಎದೆ ತಟ್ಟಿತೊಂದು ಸಸಿಯ
ಆಸ್ತೆವಹಿಸಿ ಅಂಗಳಕ್ಕಿಟ್ಟೆ
ಬಳ್ಳಿಯಾಯ್ತು ಬದುಕೂ
ಹಬ್ಬಿದಂತೆ ತೆಕ್ಕೆ ಕೊಟ್ಟೆ
ಹರಡಿ ಹಿಡಿದು ಅಸ್ತಿಗೆ ಅಂಟಿದೆ

ಹಬ್ಬುವಾಗ ತಿರುವಿದಾಗ
ಉಳುಕು ಚಳಕು
ದೂರ ದೂಡಿ ಕಾಡುವಾಗ
ಮೂಳೆ ಮುರಿದ ನೋವು
ಬಾಯ್ಬಿಟ್ಟು ಚೀರಿಬಿಟ್ಟರೆ 
ಕೇಳುವುದು ಈ ಪ್ರಶ್ನೆಯ
ಬೀಜ ಭವಿಷ್ಯವಿತ್ತೇ ಮೊದಲೆ
ಇಲ್ಲದಿದ್ದರೆ ನಿನ್ನದದು ಮರುಳೇ ಮರುಳೇ..

.............
............. 
ಒಗಟು ಕಟ್ಟಬೇಕಿತ್ತು
ಒಗಟ ಬಿಡಿಸಬೇಕಿತ್ತು
ಎಷ್ಟು ಕಟ್ಟುವೆಯೋ ಎಷ್ಟು ಬಿಡಿಸುವೆಯೋ
ಹಬ್ಬಿದ ಮರಬಳ್ಳಿ ಸಾಲು ಸಾಲು ಗೂಡು ಕಟ್ಟಿದೆ
ಈ ಒಗಟುಗಳೋ 
ಚೀರಿ ಕೇಳುತ್ತಲಿವೆ
ಒಗಟ ಬಿಡಿಸದೆ ನಾನೂ ಅಲ್ಲೇ ನಿಂತೆ ಸಾಲಿಗೆ....

28/12/2015

No comments:

Post a Comment